ಜ.8ರ ಮುಷ್ಕರದ ಪ್ರಯುಕ್ತ ರೈತ-ಕಾರ್ಮಿಕ ರ್ಯಾಲಿ

ದಾವಣಗೆರೆ:

    ದುಡಿಯುವ ಜನರ ರಕ್ಷಣೆಗಾಗಿ, ಕಾರ್ಮಿಕರ ಹಕ್ಕುಗಳನ್ನು ಉಳಿಸಿ ಬೆಳೆಸಲು ಹಾಗೂ ಪರ್ಯಾಯ ಆರ್ಥಿಕ ನೀತಿಗಾಗಿ ಜ.8ರಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು)ಯು ಕರೆ ನೀಡಿರುವ ಕಾರ್ಮಿಕರು ಮತ್ತು ರೈತರ ರಾಷ್ಟ್ರ ವ್ಯಾಪಿ ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ಅಂದು ನಗರದಲ್ಲಿ ರೈತ-ಕಾರ್ಮಿಕರ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಟಿಯು ಜಿಲ್ಲಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ತಿಳಿಸಿದರು.

      ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಸಿಟಿಯು ಅಡಿಯಲ್ಲಿರುವ ಐಎನ್‍ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಐಬಿಇಎ, ಎಐಐಇಎ, ಬಿಎಸ್‍ಎನ್‍ಎಲ್‍ಇಯು, ಪೋಸ್ಟಲ್ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ನಗರದ ಜಯದೇವ ವೃತ್ತದಿಂದ ಹೊರಡುವ ರೈತ-ಕಾರ್ಮಿಕರ ರ್ಯಾಲಿಯು ಗಾಂಧಿ ವೃತ್ತ, ಮಂಡಿಪೇಟೆ ಸೇರಿದಂತೆ ಹಲವೆಡೆ ಸಂಚರಿಸಿ ಗಡಿಯಾರ ಕಂಬ ವೃತ್ತ ತಲುಪಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಅದೇ ವೃತ್ತದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಆದ್ದರಿಂದ ಜಿಲ್ಲೆಯ ರೈತ-ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮುಷ್ಕರದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

    ಸಾರ್ವಜನಿಕರಲ್ಲಿ ಅಚ್ಛೇದಿನ್ ಹೆಸರಿನಲ್ಲಿ ಭ್ರಮೆ ಹುಟ್ಟಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ರೈಲ್ವೆಯನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಸಂಪತ್ತನ್ನು ಉಳ್ಳವರಿಗೆ ದಾನ ಮಾಡಲು ಹೊರಟಿದೆ. ರೈತ-ಕಾರ್ಮಿಕ ವಿರೋಧಿ ನೀತಿಯನ್ನು ಜಾರಿಗೆ ತರುತ್ತಿದೆ. ಹೀಗಾಗಿ ಕಾರ್ಮಿಕರ ಉದ್ಯೋಗ, ವೇತನ, ಗಳಿಕೆಯ ರಕ್ಷಣೆಗಾಗಿ ಹಾಗೂ ಉದ್ಯೋಗ ಸೃಷ್ಟಿಗಾಗಿ, ಕಾರ್ಮಿಕರ ಕಾನೂನು ಜಾರಿಗಾಗಿ, ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕರ ನ್ಯಾಯಾಲಯಗಳ ಸ್ಥಾಪನೆಗಾಗಿ, 21 ಸಾವಿರ ರೂ. ಸಮಾನ ಕನಿಷ್ಟ ವೇತನ ನಿಗದಿಗಾಗಿ, ಗುತ್ತಿಗೆ ಪದ್ಧತಿ ನಿಯಂತ್ರಣಕ್ಕಾಗಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ, ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ವಿರೋಧಿಸಿ, ರೈಲ್ವೆ ಖಾಸಗೀಕರಣ ವಿರೋಧಿಸಿ, ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್, ವಿಮೆ ಮುಂತಾದ ನಿರ್ಣಾಯಕ ಆಯಕಟ್ಟಿನ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ವಿರೋಧಿಸಿ ಸೇರಿದಂತೆ ಒಟ್ಟು ಪ್ರಮುಖ 12 ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

      ಸಿಐಟಿಯು ಮುಖಂಡ ಕೆ.ಎಲ್.ಭಟ್ ಮಾತನಾಡಿ, ಜನರ ತೆರಿಗೆ ಹಣದಿಂದ ಕಟ್ಟಿರುವ ಭಾರತೀಯ ಜೀವ ವಿಮಾ ನಿಗಮ, ರೈಲ್ವೆ ಸೇರಿದಂತೆ ಇತರೆ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸುವ ಮೂಲಕ ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಮೋದಿ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಇಂತಹ ನೀತಿಗಳ ಪರಿಣಾಮದಿಂದಾಗಿಯೇ ಮೋದಿ ಅಧಿಕಾರಕ್ಕೆ ಬರುವ ಮುನ್ನ 2014ರಲ್ಲಿ 1,74,000 ಕೋಟಿ ಆಸ್ತಿ ಹೊಂದಿದ್ದ ಮುಖೇಶ್ ಅಂಬಾನಿಯ ಆಸ್ತಿ ಈಗ 3,85,000 ಕೋಟಿಯಷ್ಟು ಹೆಚ್ಚಾಗಿದೆ. ಆದಾನಿ ಆಸ್ತಿ 18,200 ಕೋಟಿಯಿಂದ 83,300 ಕೋಟಿ ರೂ.ಗೆ ಏರಿಕೆಯಾಗಿದ್ದರೆ, ಬಾಬಾ ರಾಮದೇವ್ ಆಸ್ತಿ 46 ಸಾವಿರ ಕೋಟಿ ದಾಟಿದೆ ಎಂದು ಆರೋಪಿಸಿದರು.

    ಎಐಯುಟಿಯುಸಿಯ ಮಂಜುನಾಥ್ ಕೈದಾಳೆ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರನ್ನು ಬೀದಿಗೆ ತಳ್ಳಿ, ಉದ್ಯಮಿಗಳ, ಕೈಗಾರಿಕೆಗಳ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಅಲ್ಲದೇ, ಟರ್ಮ್ ಕಾಂಟ್ರಾಕ್ಟ್ ಆಕ್ಟ್ ಮೂಲಕ ಆಧುನಿಕ ಜೀತ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿದರು.

     ಕೇಂದ್ರ ಸರ್ಕಾರ ಕಾರ್ಮಿಕರ ಉದ್ಯೋಗ ಭದ್ರತೆಯನ್ನು ಕಸಿದುಕೊಂಡರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಮೋದಿ ಚುನಾವಣೆಯಲ್ಲಿ ನೀಡಿದ್ದ ಎಲ್ಲಾ ಆಶ್ವಾಸನೆಗಳು ನೆಲ ಕಚ್ಚಿರುವ ಕಾರಣ ದೇಶದಲ್ಲಿ ಬೆಲೆ ಏರಿಕೆ, ಆರ್ಥಿಕ ಕುಸಿತ, ನಿರುದ್ಯೋಗ ಸೇರಿದಂತೆ ಇತರೆ ಸಮಸ್ಯೆಗಳು ತಾಂಡವ ನೃತ್ಯವಾಡುತ್ತಿವೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಾಗಿ ಜನರನ್ನು ಭಾವೋದ್ವೇಗಕ್ಕೆ ಒಳ ಪಡಿಸಿ ಲಾಭ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರೀಕತ್ವ ನೊಂದಣಿ ಜಾರಿಗೆ ತಂದಿದೆ ಎಂದು ದೂರಿದರು.

      ಬ್ಯಾಂಕ್ ನೌಕರರ ಸಂಘಟನೆಯ ರಾಘವೇಂದ್ರ ನಾಯರಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ಹಾಗೂ ಬ್ಯಾಂಕ್ ವಿಲೀನಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಬ್ಯಾಂಕ್ ನೌಕರರು ಈ ಮುಷ್ಕರಕ್ಕೆ ಬೆಂಬಲ ನೀಡಿ, ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಆನಂದರಾಜ್, ಆವರಗೆರೆ ಚಂದ್ರು, ಕೆ.ಎಚ್.ಆನಂದರಾಜ್, ಮಂಜುನಾಥ ಕುಕ್ಕುವಾಡ, ತಿಪ್ಪೇಸ್ವಾಮಿ, ಶಾಂತಕುಮಾರ್, ಎನ್.ಟಿ.ಬಸವರಾಜ್, ಆವರಗೆರೆ ವಾಸು ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link