ಹುಳಿಯಾರು:
ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಹೈವೆ ಅಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ತಾಪಂ ಸದಸ್ಯ ಏಜೆಂಟ್ ಕುಮಾರ್ ಆರೋಪಿಸಿದ್ದಾರೆ.
ಹುಳಿಯಾರು ಬಸ್ ನಿಲ್ದಾಣದಲ್ಲಿ ರಸ್ತೆ ವಿಸ್ತರಿಸಿ ಡಾಂಬರೀಕರಣ ಮಾಡುವುದು, ಬಸ್ ನಿಲ್ದಾಣದಲ್ಲಿ ಸಂಗ್ರಹವಾದ ನೀರು ಹೊರ ಹೋಗಲು ಪೈಪ್ ಹಾಕುವುದು ಹಾಗೂ ಚರಂಡಿ ನಿರ್ಮಿಸಲು ಸರಿ ಸುಮಾರು 40 ಲಕ್ಷ ರೂ ಬಿಡುಗಡೆಯಾಗಿದೆ ಎಂಬ ಮಾಹಿತಿ ಇದೆ.
ಆದರೆ ಈಗಾಗಲೇ ಹಳೆಯ ಸಿಮೆಂಟ್ ಪೈಪ್ ತಂದು ನೀರು ಹೊರಹೋಗುವಂತೆ ಮಾಡಿದ್ದಾರೆ. ಈಗ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡುತ್ತಿದ್ದು ಇದನ್ನೂ ಕೂಡ ಹಳೆಯ ಸತ್ತ ಕಬ್ಬಿಣ ಬಳಕೆ ಮಾಡಿ ಮಾಡುತ್ತಿದ್ದಾರೆ.
ಹಾಲಿ ನಿರ್ಮಿಸುತ್ತಿರುವ ಚರಂಡಿ ಮೇಲೆ ಪ್ರಯಾಣಿಕರನ್ನು ತುಂಬಿದ್ದ ಲೋಡ್ ಬಸ್ ಓಡಾಡುತ್ತವೆ. ಹಾಗಾಗಿ ಬಸ್ ಲೋಡ್ಗೆ ಚರಂಡಿ ಸ್ಲ್ಯಾಬ್ ತುಂಡಾಗಿ ಅಪಘಾತಕ್ಕೆ ಎಡೆ ಮಾಡಿಕೊಡುವಂತಿದೆ. ಅಲ್ಲದೆ ಚರಂಡಿ ಕ್ಲೀನ್ ಮಾಡಲು ಅವಕಾಶ ಮಾಡಿಲ್ಲ ಎಂದು ದೂರಿದ್ದಾರೆ.
ತಕ್ಷಣ ಹೈವೆ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಸ್ಥಳ ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು. ಅಲ್ಲಿಯವರೆವಿಗೆ ಕಾಮಗಾರಿ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
