ದಾವಣಗೆರೆ :
ಜಾಹೀರಾತು ಫಲಕ, ಭಿತ್ತಿ ಪತ್ರಗಳನ್ನು ಅಂಟಿಸಿ ಸಾರ್ವಜನಿಕ ಆಸ್ತಿ ವಿರೂಪಗೊಳಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸ್ಮಾರ್ಟ್ಸಿಟಿ ಯೋಜನೆಯ ಕಾಮಗಾರಿಗಳಿಗೆ ಬಳಸುತ್ತಿರುವ ಸಾಮಗ್ರಿಗಳ ಮೇಲೆ ಕೆಲವರು ಜಾಹೀರಾತು ಫಲಕ ಅಳವಡಿಸುವುದಲ್ಲದೇ, ಭಿತ್ತಿಪತ್ರ ಅಂಟಿಸುವ ಮೂಲಕ ವಿರೂಪಗೊಳಿಸುತ್ತಿರುವುದು ಕಂಡು ಬರುತ್ತಿದೆ. ಸಾರ್ವಜನಿಕ ಆಸ್ತಿಯನ್ನು ಈ ರೀತಿ ವಿರೂಪಗೊಳಿಸುವವರ ವಿರುದ್ಧ ಇನ್ನೂ ಮುಂದೆ ಕಾನೂನಿನ ಕ್ರಮ ಜರುಗಿಸಿ ಸೂಕ್ತ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ನಗರದಲ್ಲಿ ಸ್ಥಳೀಯ ಬಸ್ ನಿಲ್ದಾಣ ಹಾಗೂ ತಂಗುದಾಣ, ರಸ್ತೆ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಅನುಕೂಲಕ್ಕಾಗಿ ಹಾಕಿರುವ ತಗಡಿನ ಶೀಟ್ಗಳು ಜಾಹೀರಾತು ಫಲಕಗಳಿಂದ ತುಂಬಿಹೋಗಿವೆ. ಹೀಗೆ ಅನಧಿಕೃತವಾಗಿ ಅನುಮತಿಯಿಲ್ಲದೇ ಜಾಹೀರಾತು ಮತ್ತು ಪ್ರಚಾರ ಮಾಡಿಕೊಳ್ಳುತ್ತಿರುವುದು ಕಾನೂನು ಬಾಹೀರವಾಗಿದೆ ಎಂದು ಹೇಳಿದರು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ನವರು, ಹೊಸ ಬಸ್ನಿಲ್ದಾಣವನ್ನು ಹೈಸ್ಕೂಲ್ ಮೈದಾನದಲ್ಲಿ ಮಾಡಿರುವುದರಿಂದ ಫುಟ್ಬಾಲ್ ಆಟಗಾರರಿಗೆ ದಿನನಿತ್ಯ ಅಭ್ಯಾಸ ಮಾಡಲು ತೊಂದರೆಯಾಗುತಿದೆ. ಆದ್ದರಿಂದ ಹೈಸ್ಕೂಲ್ ಮೈದಾನದಲ್ಲಿರುವ ಬಸ್ ನಿಲ್ದಾಣವನ್ನು ತೆರೆವುಗೊಳಿಸಬೇಕೆಂದು ಮನವಿ ಮಾಡಿದರು.
ನಾಗನೂರು ನಿವಾಸಿ ಕೊಟ್ರೇಶ್, ದೇವರಬೆಳಕೆರೆ ರಸ್ತೆಯಲ್ಲಿನ ಸುಬ್ರಹ್ಮಣ್ಯ ಗ್ಯಾಸ್ಏಜೆನ್ಸಿಯವರು ಗ್ಯಾಸ್ ಗೋಡೌನ್ ನಿರ್ಮಿಸಿದ್ದು, ಇದರಿಂದ ನಿತ್ಯ ಶಬ್ದ ಮಾಲಿನ್ಯ ಮತ್ತು ವಾಸನೆವುಂಟಾಗುತ್ತಿದೆ. ಈ ಏಜೆನ್ಸಿಯ ಮಾಲೀಕರು ಕೃಷಿ ಭೂಮಿಯನ್ನು ಕಾನೂನು ಬಾಹಿರವಾಗಿ ವಾಣಿಜ್ಯ ವ್ಯವಹಾರಗಳಿಗೆ ಉಪಯೋಗಿಸುತ್ತಿದ್ದು, ಈ ಗೋಡೌನ್ನ್ನು ಮುಟ್ಟುಗೋಲು ಹಾಕಿ, ಸೀಜ್ ಮಾಡಬೇಕೆಂದು ಮನವಿ ಸಲ್ಲಿಸಿದರು.
ಕಕ್ಕರಗೊಳ್ಳ ಗ್ರಾಮದ ವಿಕಲಚೇತನರು, ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 84 ಜನ ವಿಕಲಚೇತನರಿದ್ದು, ಕೇವಲ 20 ಜನರಿಗೆ ಮಾತ್ರ ಮಾಸಾಶನ ಬರುತ್ತಿದೆ. ಉಳಿದ 60 ಜನರಿಗೆ ಮಾಸಾಶನ ಮಂಜೂರು ಮಾಡಿಲ್ಲ. ಹೀಗಾಗಿ ಎಲ್ಲಾ ವಿಕಲಚೇತನರಿಗೆ ಮಾಶಾಸನ ಕೊಡಿಸಬೇಕೆಂದು ಮನವಿ ಮಾಡಿದರು.
ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ರಾಯಪ್ಪ ಅರ್ಜಿ ಸಲ್ಲಿಸಿ, ತಮ್ಮ ಗ್ರಾಮದಲ್ಲಿ ಸಕಾಲ ಯೋಜನೆಯನ್ನು ಜಾರಿಗೆ ತರಬೇಕು. ಗ್ರಾಮಗಳಲ್ಲಿ ಆಸ್ಪತ್ರಗೆ ವೈದ್ಯರನ್ನು, 108 ಆಂಬುಲೆನ್ಸ್ ವಾಹನ ನಿಯೋಜಿಸಬೇಕು ಮತ್ತು ಚಿರಡೋಣಿ ಹಾಗೂ ದೊಡ್ಡಘಟ್ಟ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.ಚನ್ನಗಿರಿ ತಾಲ್ಲೂಕು ಕಗತ್ತೂರು ಗ್ರಾಮದ ನಿವಾಸಿ ಶಿವಕುಮಾರ್ಸ್ವಾಮಿ, ಸೂಳೆಕೆರೆಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ಕಂದಾಯ ಜಮೀನುಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ದಾವಣಗೆರೆ ನಿವಾಸಿ ಲಮಾಣಿ ವಿಶಪ್ಪ, ಕೇಂದ್ರ ಸರ್ಕಾರದ ಹೊಸ ಯೋಜನೆಯಡಿ ರೈತ ತರಬೇತಿ ಕೇಂದ್ರ ತÉರೆಯಲು ಪೋಡಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ, ಪೋಡಿ ಸಿಗದ ಕಾರಣ ರೈತ ತರಬೇತಿ ಕೇಂದ್ರ ತೆರೆಯುವ ಅವಕಾಶ ಕೈತಪ್ಪಿ ಹೋಯಿತು. ಈಗ ಮತ್ತೆ ತಮಗೆ ಕೇಂದ್ರ ತೆರೆಯುವ ಅವಕಾಶ ದೊರೆತಿದೆ. ಆದ್ದರಿಂದ ದಯಮಾಡಿ ತತ್ಕಾಲ್ ಪೋಡಿ ಕೊಡಿಸಿ ಎಂದು ಮನವಿ ಮಾಡಿದರು.
ಹರಿಹರದ ಪ್ರಶಾಂತ್ ನಗರ ನಿವಾಸಿ ವಸಂತಕುಮಾರ್ ಮಾತನಾಡಿ, ಹರಿಹರ ನಗರದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಮತ್ತು ಅಡ್ಡ ರಸ್ತೆಗಳಲ್ಲಿ ಮನೆ ಮತ್ತು ಮಳಿಗೆಗಳ ಮುಂದಿನ ಚರಂಡಿಯ ಮೇಲೆ ಸಜ್ಜ ಹಾಕಿಕೊಂಡು ರಸ್ತೆಯ ಮೇಲೆ ಮನೆ ಕಟ್ಟುತ್ತಿದ್ದಾರೆ ಮತ್ತು ಅಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ದಯವಿಟ್ಟು ನಿವೇಶನದ ಜಾಗಗಳನ್ನು ಅಳತೆ ಮಾಡಿಸಬೇಕೆಂದು ಮನವಿ ಮಾಡಿದರು.
ನಿಟ್ಟುವಳ್ಳಿಯ ಹೊಸ ಬಡಾವಣೆ ನಿವಾಸಿ ಸುಶೀಲಮ್ಮ, ತಮ್ಮ ಸ್ವಂತ ಜಾಗದಲ್ಲಿ 2010 ರಲ್ಲಿ ಅನಧಿಕೃತವಾಗಿ ಚರಂಡಿ ಮತ್ತು ಪೈಪ್ಲೈನ್, ಅಂಡರ್ ಚೇಂಬರ್ ಗುಂಡಿಯನ್ನು ಕಟ್ಟಿದ್ದಾರೆ. ಇವುಗಳನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಪಿ ಮುದಜ್ಜಿ, ದೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ, ತಹಶೀಲ್ದಾರ್ ಸಂತೋಷ್ಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
