ಮಿಡಗೇಶಿ:
ನಾಲ್ಕಾರು ವರ್ಷಗಳಿಂದಲೂ ಸಮಯಕ್ಕೆ ಸರಿಯಾಗಿ ಮಳೆ, ಬೆಳೆ ಆಗದೆ ರೈತರು ತಮ್ಮ ದನ, ಕರು, ಕುರಿ, ಮೇಕೆ, ಹಸುಗಳನ್ನು ಮೇಯಿಸಲು ಮೇವಿಲ್ಲದೆಯೇ, ಕುಡಿಯಲು ನೀರಿಲ್ಲದೆಯೇ ಪರದಾಡುತ್ತಿದ್ದಾರೆ. ತಮ್ಮ ಸಂಸಾರ ನಿರ್ವಹಣೆಗೆ ಸಾಕಷ್ಟು ಕಷ್ಟಪಟ್ಟರೂ ಸಂಸಾರ ನಿಭಾಯಿಸಲು ಸಾಧ್ಯವಾಗದೆ ತೊಂದರೆ ಪಡುತ್ತಿದ್ದಾರೆ.
ತಮ್ಮ ಮಕ್ಕಳನ್ನು ಸಾಕುವ ಸಲುವಾಗಿ, ಜೀವನೋಪಾಯಕ್ಕಾಗಿ ಹೈನುಗಾರಿಕೆಯ ಮೊರೆಯೂ ಹೋಗಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ಮಿಡಿಗೇಶಿ ಗ್ರಾಪಂ ವ್ಯಾಪ್ತಿಯ ಬೆನಕನಹಳ್ಳಿಯ ರೈತ ಸುಬ್ಬರಾಯಪ್ಪನವರ ಹುಲ್ಲಿನ ಬಣವೆಗೆ ಡಿ. 3 ರಂದು ಆಕಸ್ಮಿಕ ಬೆಂಕಿ ಬಿದ್ದು ಭಸ್ಮವಾಗಿರುವ ಘಟನೆ ಜರುಗಿದೆ. ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿರುವುದನ್ನು ಕಂಡು ಮಧುಗಿರಿಯ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಲಾಗಿ, ಅಗ್ನಿಶಾಮಕದಳದ ಸಿಬ್ಬಂದಿ ಫೈರ್ ಎಂಜಿನ್ ಸಮೇತ ಘಟನಾ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಆದರೂ ಹುಲ್ಲು ಮಾತ್ರ ಸುಟ್ಟು ಭಸ್ಮವಾಗಿದೆ. ಸುಟ್ಟು ಹೋಗಿರುವ ಹುಲ್ಲಿನ ಮೌಲ್ಯ ಸುಮಾರು ಎಂಭತ್ತು ಸಾವಿರ ರೂಗಳು ಎನ್ನಲಾಗಿದೆ. ಐದು ಲೋಡು ಕಡ್ಲೆ ಬಳ್ಳಿ, ಎರಡು ಲೋಡು ಮುಸುಕಿನ ಜೋಳದ ಕಡ್ಡಿ, ನಾಲ್ಕು ಲೋಡು ಭತ್ತದ ಹುಲ್ಲು, ಒಂದು ಲೋಡು ರಾಗಿ ಹುಲ್ಲನ್ನು ಎಪ್ಪತ್ತು ಸಾವಿರ ರೂ.ಗೆ ಖರೀದಿಸಿದ್ದರು. ಇದರ ಜೊತೆಗೆ ತನ್ನ ಹೊಲದಲ್ಲಿ ಬೆಳೆದಿದ್ದ ಸುಮಾರು ಹತ್ತು ಸಾವಿರ ರೂ. ಬಾಳುವಷ್ಟು ಹುಲ್ಲು ಸೇರಿ, ಎಲ್ಲಾ ಒಟ್ಟು ಎಂಭತ್ತು ಸಾವಿರ ರೂ. ಮೌಲ್ಯದಷ್ಟು ಹುಲ್ಲನ್ನು ಒಂದೆ ಕಡೆ ಬಣವೆ ಹಾಕಿ ಸಂಗ್ರಹಿಸಿಟ್ಟಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
