ಶಿರಾ
ಶಿರಾ ನಗರಸಭಾ ವ್ಯಾಪ್ತಿಯ ಬೂವನಹಳ್ಳಿ ಸ.ನಂ.ನಲ್ಲಿನ ಶಿರಸ್ತೆದಾರ್ ಕಟ್ಟೆಯ ಬಳಿ ವಿವಿಧ ಶಾಲಾ-ಕಾಲೇಜುಗಳು ಆರಂಭವಾಗುವ ಮೂಲಕ ಇಲ್ಲೊಂದು ಶೈಕ್ಷಣಿಕ ನಗರಿ ನಿರ್ಮಾಣವಾಗಿದ್ದು ಈ ಹಿಂದೆ ನಾನು ಸಚಿವನಾಗಿದ್ದಾಗ ಶೈಕ್ಷಣಿಕ ಪ್ರಗತಿಗೆ ತಾವು ಮೀಸಲಿಟ್ಟಿದ್ದ ಈ ಸರ್ಕಾರಿ ಜಮೀನು ಇದೀಗ ಸಾರ್ಥಕಗೊಳ್ಳುತ್ತಿದೆ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಶಿರಸ್ತೆದಾರ್ ಕಟ್ಟೆಯ ಸಮೀಪದ ಬೂವನಹಳ್ಳಿ ಸ.ನಂ.ನಲ್ಲಿ ಸೋಮವಾರ ಸರ್ಕಾರದ ವತಿಯಿಂದ ಮಂಜೂರಾದ ಸುಮಾರು 6.5 ಕೋಟಿ ರೂ.ಗಳ ವೆಚ್ಚದ ಮೊರಾರ್ಜಿ ದೇಸಾಯಿ ವಸತಿಯುತ ಪ.ಪೂ. ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಶಾಸಕರು ಮಾತನಾಡಿದರು.
ಶಿರಾ ಭಾಗವು ಶೈಕ್ಷಣಿಕ ಕ್ಷೇತ್ರದಲ್ಲಿ ನಿಜಕ್ಕೂ ಬೆಳವಣಿಗೆ ಕಾಣುತ್ತಿದೆ. ಯುವತಿಯರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮುನ್ನಡೆಸಲು ಹಿಂಜರಿಯುವ ಕಾಲ ಇದೀಗ ದೂರ ಗೊಂಡಿದೆ. ಈ ಕ್ಷೇತ್ರದಲ್ಲಿ ಯುವತಿಯರೇ ಮೇಲುಗೈ ಸಾಧಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸತ್ಯನಾರಾಯಣ್ ತಿಳಿಸಿದರು.
ಬಾಲಕಿಯರ ಈ ಕಾಲೇಜು ಕಟ್ಟಡದಲ್ಲಿ 224 ವಿದ್ಯಾರ್ಥಿನಿಯರು ಅಭ್ಯಾಸ ಮಾಡಬಹುದಾಗಿದ್ದು, ಇದೊಂದು ಸುಸಜ್ಜಿತ ಕಾಲೇಜು ಕಟ್ಟಡವೂ ಆಗುತ್ತದೆ. ಅತಿ ಶೀಘ್ರದಲ್ಲಿಯೇ ಕಟ್ಟಡದ ನಿರ್ಮಾಣ ಕೆಲಸ ಪೂರ್ಣಗೊಳಿಸಲು ಸೂಚನೆ ನೀಡಲಾಗಿದ್ದು ಗೃಹ ಮಂಡಳಿ ನಿರ್ಮಾಣದ ಹೊಣೆ ಹೊತ್ತಿದೆ ಎಂದರು.ನಗರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ಶಿರಾ ರವಿ, ನಟರಾಜ್, ಗೃಹ ಮಂಡಳಿಯ ಎಂಜಿನಿಯರ್ಗಳು ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
