ಕಾಳಧನದ ಮೂಲಕ್ಕೆ ಬೀಳುತ್ತಿಲ್ಲ ಕೊಡಲಿ ಪೆಟ್ಟು
ವಿಶೇಷ ಲೇಖನ :ಸಾ.ಚಿ.ರಾಜಕುಮಾರ
ತೆರಿಗೆ ತಪ್ಪಿಸಿ ಕಾಳಧನದ ಮೂಲಕ ವ್ಯವಹಾರ ನಡೆಸುವುದಕ್ಕೆ ಅಂಕಿತ ಹಾಕಿ ಇಡೀ ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕ ವ್ಯವಸ್ಥೆಯನ್ನಾಗಿ ಬದಲಾಯಿಸುವುದು ಸರಕು ಮತ್ತು ಸೇವಾ ತೆರಿಗೆ ಏಕ ಪದ್ಧತಿಯ ಒಂದು ಗುರಿಯಾಗಿತ್ತು. ಈ ಕಾಯ್ದೆ 2017 ರಲ್ಲಿ ಜಾರಿಗೆ ಬಂದಾಗ ಸರ್ಕಾರವನ್ನು ಪ್ರತಿನಿಧಿಸುವವರು ಇದನ್ನೇ ಹೇಳಿದರು. ಭಾರತದಲ್ಲಿ ಕಾಳಧನದ ಜಾಡ್ಯ ಹೆಚ್ಚಲು ಈವರೆಗೆ ನಮ್ಮಲ್ಲಿರುವ ತೆರಿಗೆ ವ್ಯವಸ್ಥೆಯೇ ಕಾರಣ.
ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ತೆರಿಗೆಯ ಜೊತೆಗೆ ಕೇಂದ್ರ ಸರ್ಕಾರ, ರಾಜ್ಯಗಳಲ್ಲಿ ವಿಧಿಸುತ್ತಿದ್ದ ತೆರಿಗೆ ಹೀಗೆ ಹಲವಾರು ತೆರಿಗೆಗಳಿಂದಾಗಿ ವಸ್ತುಗಳ ವೆಚ್ಚ ಹೆಚ್ಚಳವಾಗುತ್ತಿತ್ತು. ವರ್ತಕರು ತೆರಿಗೆ ಕಳ್ಳತನಕ್ಕಿಳಿದು ಲೆಕ್ಕ ತೋರಿಸದ, ತೆರಿಗೆ ಕಟ್ಟದ ಕಾಳಧನ ಸಂಗ್ರಹವಾಗುತ್ತಿತ್ತು. ಇನ್ನು ಮುಂದೆ ಇದೆಲ್ಲವೂ ನಿಂತು ಹೋಗಲಿದೆ ಎಂಬ ಹೇಳಿಕೆಗಳೆ ಈಗ ಹುಸಿಯಾಗ ತೊಡಗಿವೆ.
ವರ್ತಕರಿಗಾಗಲಿ, ಸೇವಾ ಕ್ಷೇತ್ರದಲ್ಲಿರುವವರಿಗಾಗಲಿ ಹೆಚ್ಚು ಹೊರೆ ಬೀಳದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಗಳು ಈಗ ಉಳಿದಿಲ್ಲ. ಕಾಳಧನಕ್ಕೆ ಕಡಿವಾಣ ಹಾಕಿ ರಾಷ್ಟ್ರದ ಆದಾಯವನ್ನು ಹೆಚ್ಚಿಸಲಾಗುವುದು ಎಂಬ ಕನಸು ಪರಿಪೂರ್ಣವಾಗಿ ನನಸಾದಂತೆ ಕಾಣುತ್ತಿಲ್ಲ.
ಏಕ ತೆರಿಗೆ ನೀತಿಯಲ್ಲೂ ವಂಚನೆ ಮಾಡಬಹುದು ಎಂಬುದನ್ನು ಈಗಾಗಲೇ ತೆರಿಗೆ ವಂಚಕರು ತೋರಿಸಿ ಕೊಟ್ಟಿದ್ದಾರೆ. ರಾಷ್ಟ್ರಾದ್ಯಂತ 2019ರ ನವೆಂಬರ್ ತಿಂಗಳವರೆಗೆ ಜಿ.ಎಸ್.ಟಿ. ವಂಚನೆಯ 6641 ಪ್ರಕರಣಗಳು ದಾಖಲಾಗಿದ್ದವು. ದೆಹಲಿ, ಕೋಲ್ಕತ್ತಾ ಸೇರಿದಂತೆ ಉತ್ತರ ಭಾರತ ರಾಜ್ಯಗಳಲ್ಲಿ ಇಂತಹ ವಂಚನೆ ಪ್ರಕರಣಗಳು ಹೆಚ್ಚು ಹೆಚ್ಚು ಕಂಡುಬಂದಿವೆ. ದೆಹಲಿಯಲ್ಲಿ ಸಂಸ್ಥೆಯೊಂದು 500 ನಕಲಿ ಬಿಲ್ಗಳನ್ನು ಸೃಷ್ಟಿಸಿ ವಂಚನೆ ಮಾಡಿದೆ.
ಉತ್ತರಾಖಂಡ್ನಲ್ಲಿ ಉತ್ಪಾದಕ ಕಂಪನಿಯೊಂದು ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಗುಜರಾತ್, ಮಹಾರಾಷ್ಟ್ರಗಳಲ್ಲಿ ಅಸ್ತಿತ್ವವೇ ಇಲ್ಲದ ಸಂಸ್ಥೆಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡಿರುವ ವಂಚನೆಯೂ ಬಯಲಾಗಿದೆ. ಕೋಲ್ಕತ್ತಾದಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ಗೆ ಸಂಬಂಧಿಸಿದಂತೆ 4 ಜನರ ಮೇಲೆ ಕಳೆದ ನವೆಂಬರ್ನಲ್ಲಿ ಕೇಸು ದಾಖಲಿಸಿ 400 ಕೋಟಿಯಷ್ಟು ಬೃಹತ್ ಮೊತ್ತದ ಕಳ್ಳತನವನ್ನು ಪತ್ತೆ ಮಾಡಲಾಗಿದೆ. ಇಂತಹ ಸುಳ್ಳು ವಂಚನೆಯಿಂದ 4 ವ್ಯಕ್ತಿಗಳು ಸರ್ಕಾರದ ಬೊಕ್ಕಸಕ್ಕೆ 400 ಕೋಟಿಯಷ್ಟು ನಷ್ಟವನ್ನುಂಟು ಮಾಡಿದ್ದರು.
ಬೆಂಗಳೂರಿನ ಚಿಕ್ಕಬಾಣಾವಾರದಲ್ಲಿ 203 ಕೋಟಿ ತೆರಿಗೆ ವಂಚನೆಗೆ ಸಂಬಂಧಿಸಿದಂತೆ 3 ವ್ಯಕ್ತಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಅಧಿಕಾರಿಗಳು ಅಲ್ಲಿನ ಕಂಪನಿಗೆ ದಾಳಿ ನಡೆಸಿದಾಗ ಬೇರೆಯವರ ಹೆಸರಿನಲ್ಲಿ 12 ಕಂಪನಿಗಳು ಇರುವುದು, ಸುಳ್ಳು ಲೆಕ್ಕದ ವಂಚನೆ ಮಾಡಿರುವುದು ತನಿಖೆಯಲ್ಲಿ ಬಯಲಾಯಿತು. ನಕಲಿ ಬಿಲ್ಗಳು ಪತ್ತೆಯಾದವು. ಹೀಗೆ ಅಲ್ಲಲ್ಲಿ ಜಿ.ಎಸ್.ಟಿ. ವ್ಯವಸ್ಥೆಯೊಳಗೂ ನಕಲಿ ಬಿಲ್ ಸೃಷ್ಟಿಸುವ ವಂಚನೆ ಎಸಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಡಿಜಿಟಲ್ ಇಂಡಿಯಾ, ಆನ್ಲೈನ್ ವ್ಯವಹಾರ ಹೀಗೆ ಹಲವು ಹೆಸರುಗಳೊಂದಿಗೆ ಜಾರಿಗೆ ತಂದ ಹೊಸ ವ್ಯವಸ್ಥೆಯೊಳಗೂ ಕದಿಯುವ ಖದೀಮರು ಹುಟ್ಟಿಕೊಳ್ಳುತ್ತಿದ್ದಾರೆಂದರೆ ನಮ್ಮ ವ್ಯವಸ್ಥೆ ಅದೆಷ್ಟು ಹದಗೆಟ್ಟು ಹೋಗಿದೆ ಎಂಬುದನ್ನು ಊಹಿಸಿಕೊಳ್ಳಿ.
2018ರ ನವೆಂಬರ್ ತಿಂಗಳಿನಲ್ಲಿ 1200 ಕೋಟಿ ರೂ.ಗಳ ಬೃಹತ್ ಮೊತ್ತದ ಅತಿದೊಡ್ಡ ಜಿ.ಎಸ್.ಟಿ. ವಂಚನೆ ಜಾಲವನ್ನು ಕರ್ನಾಟಕ ತೆರಿಗೆ ಅಧಿಕಾರಿಗಳು ಬಯಲಿಗೆಳೆದಿದ್ದರು. ಸರಕು ಮತ್ತು ಸೇವಾ ತೆರಿಗೆಯ ನಕಲಿ ಸರಕು ಪಟ್ಟಿ (ಇನ್ವಾಯ್ಸ್) ಸಲ್ಲಿಸಿ ಹುಟ್ಟುವಳಿ ತೆರಿಗೆ ಜಮೆಗೆ ಕೋರಿಕೆ ಸಲ್ಲಿಸಿದ್ದ ವಂಚಕರ ಸಂಚು ಬಯಲಾಗಿತ್ತು. 1200 ಕೋಟಿ ರೂ. ಟರ್ನ್ ಓವರ್ ನಕಲಿ ಬಿಲ್ ಸಲ್ಲಿಸಿ ಸುಮಾರು 200 ಕೋಟಿ ರೂ. ಕ್ಲೇಮ್ ಮಾಡಿಕೊಂಡಿರುವ ಮೂವರನ್ನು ಅಧಿಕಾರಿಗಳು ಬಂಧಿಸಿದ್ದರು.
ಬೆಂಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಸೇರಿದಂತೆ 25 ಕಡೆ ಶೋಧ ನಡೆಸಿ ನಕಲಿ ಕಂಪನಿಗಳ ವಂಚನೆಯನ್ನು ಪತ್ತೆ ಹಚ್ಚಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಹುಟ್ಟುವಳಿ ತೆರಿಗೆ ಜಮೆ (ಐಟಿಸಿ) ಪಡೆದುಕೊಳ್ಳುವ ಉದ್ದೇಶದಿಂದಲೇ ನಕಲಿ ಹೆಸರು ಮತ್ತು ವಿಳಾಸ ನೀಡಿ ಕಬ್ಬಿಣ, ಉಕ್ಕು ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳನ್ನು ಸೃಷ್ಟಿಸಿ ವಂಚನೆ ಎಸಗಲಾಗಿದ್ದ ಭಾರೀ ಮೊತ್ತದ ಪ್ರಕ್ರರಣ ಇದಾಗಿತ್ತು. ಇಂತಹ ಹಲವಾರು ವಂಚನೆ ಪ್ರಕರಣಗಳು ಬಯಲಾಗುತ್ತಲೇ ಬಂದಿವೆ.
ಇಲ್ಲಿ ಒಂದು ಮಾತು ಹೇಳಲೇಬೇಕಾಗುತ್ತದೆ. ಕಾನೂನು ಬದಲಾಗಬಹುದು, ತಿದ್ದುಪಡಿಯಾಗಬಹುದು. ಹೊಸ ಹೊಸ ಸಾಫ್ಟ್ವೇರ್ಗಳು ಬಂದು ಕೂರಬಹುದು. ಆದರೆ ಇವನ್ನೆಲ್ಲಾ ಹ್ಯಾಂಡಲ್ ಮಾಡುವವರು ಅದೇ ಜನ ಅಲ್ಲವೆ? ಯಂತ್ರಗಳು ಬದಲಾದರೂ ಮನುಷ್ಯರು ಹೇಗೆ ಬದಲಾಗುತ್ತಾರೆ? ಈವರೆಗೆ ತಿಂದು ತೇಗಿದವರು, ಜನರನ್ನು ರೋಸಿ ಗೋಳು ಹೊಯ್ದುಕೊಂಡವರು ಸುಮ್ಮನೆ ಇದ್ದುಬಿಡುತ್ತಾರೆಯೇ? ಅಧಿಕಾರಿಗಳೇ ಈ ವ್ಯವಸ್ಥೆಯಲ್ಲಿ ಸಿಕ್ಕಿಬಿದ್ದಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ.
ಈ ವ್ಯವಸ್ಥೆಯು ಅದೇ ಹಾದಿಯಲ್ಲಿದೆ. ನರಳಿ, ಕಷ್ಟ ಅನುಭವಿಸುತ್ತಿರುವವರು ಮಾತ್ರ ಮಧ್ಯಮ ವರ್ಗದವರು, ನ್ಯಾಯೋಚಿತವಾಗಿ ಟ್ಯಾಕ್ಸ್ ಕಟ್ಟುವವರು ಮತ್ತು ಇದಕ್ಕೆ ಪ್ರೋತ್ಸಾಹಿಸುತ್ತಿರುವ ವೃತ್ತಿನಿರತರು.
ಕೇಂದ್ರ-ರಾಜ್ಯಗಳ ನಡುವೆ ಸಂಘರ್ಷ
ಜಿ.ಎಸ್.ಟಿ. ವ್ಯವಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ದೇಶಾದ್ಯಂತ ಒಂದೇ ನೀತಿ ಎಂಬ ಏಕರೂಪದ ತೆರಿಗೆ ಸುಧಾರಣೆಯನ್ನು ಜಾರಿಗೆ ತರುವಾಗ ರಾಜ್ಯ ಸರ್ಕಾರಗಳು ಇದಕ್ಕೆ ಅಪಸ್ವರ ಎತ್ತಿದ್ದವು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಭರವಸೆ ನೀಡಿ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡುವುದಾಗಿ ಹೇಳಿತ್ತು. ಆದರೆ ರಾಜ್ಯ ಸರ್ಕಾರಗಳಿಗೆ ಬರಬೇಕಾಗಿರುವ ಎಸ್.ಜಿ.ಎಸ್.ಟಿ. ತೆರಿಗೆ ಬಾಕಿ ಉಳಿಸಿಕೊಳ್ಳುತ್ತಿರುವುದು, ಪಾವತಿಸದೆ ಇರುವುದು ಸಂಘರ್ಷಕ್ಕೆ ಕಾರಣವಾಗಿದೆ.
ರಾಜ್ಯಗಳಿಗೆ ನಷ್ಟ ಪರಿಹಾರದ ರೂಪದಲ್ಲಿ ಕೇಂದ್ರ ಸರ್ಕಾರ ನೀಡಬೇಕಾಗಿದ್ದ ಜಿ.ಎಸ್.ಟಿ. ಪಾಲನ್ನು ಬಾಕಿ ಉಳಿಸಿಕೊಂಡಿರುವ ಕಾರಣ ರಾಜ್ಯದಲ್ಲಿ ವಿತ್ತಿಯ ಕೊರತೆ ಎದುರಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಆರ್ಥಿಕ ಸಂಕಷ್ಟದಿಂದ ರಾಜ್ಯ ಸರ್ಕಾರ ಬಳಲಿ ಬೆಂಡಾಗಿ ಹೋಗಿದೆ. ಒಂದು ಕಡೆ ಪ್ರವಾಹ ಪೀಡಿತ ಸಂತ್ರಸ್ಥರಿಗೆ ನೆರವಾಗಬೇಕು. ಅವರಿಗೆ ಪರಿಹಾರಕ್ಕಾಗಿ ಹಣ ಒದಗಿಸಬೇಕು. ಮತ್ತೊಂದು ಕಡೆ ಹಿಂದಿನ ಸಮ್ಮಿಶ್ರ ಸರ್ಕಾರ ಘೋಷಿಸಿದ್ದ ರೈತರ ಸಾಲ ಮನ್ನಾ ಯೋಜನೆಯತ್ತ ಗಮನ ಹರಿಸಬೇಕು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯಕ್ಕೀಗ ಬೇಕಾಗಿರುವುದು ಕೇಂದ್ರ ಸರ್ಕಾರದ ನೆರವು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವಿರೋಧ ಪಕ್ಷದ ರೀತಿಯಂತೆ ಯಡಿಯೂರಪ್ಪ ಅವರು ಕೇಂದ್ರದ ಅನುದಾನಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದಾರೆ.
ಸರ್ಕಾರದ ಕೆಲವು ಮಾಹಿತಿಗಳನ್ನು ಗಮನಿಸಿದರೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿದ್ದ ಜಿ.ಎಸ್.ಟಿ. ರೂಪದ 7 ಸಾವಿರ ಕೋಟಿ ರೂ.ಗಳಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳೇ ಹೇಳಿದ್ದಾರೆ. 2019ರ ಡಿಸೆಂಬರ್ ಅಂತ್ಯಕ್ಕೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ 7039 ಕೋಟಿ ಜಿ.ಎಸ್.ಟಿ. ಪರಿಹಾರದಲ್ಲಿ 3669 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಲಾಯಿತು. ಜಿ.ಎಸ್.ಟಿ. ಪಾಲು ಸೇರಿದಂತೆ ವಿವಿಧ ರೂಪದ ಅನುದಾನ ಕೇಂದ್ರದಿಂದ ರಾಜ್ಯಗಳಿಗೆ ಬರಬೇಕು.
ನರೇಗಾ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಲ್ಲದೆ ಕೆಲವು ವಿಶೇಷ, ಆಪತ್ತು ಸಂದರ್ಭಗಳಿಗೂ ಹಣ ಬಿಡುಗಡೆ ಮಾಡಬೇಕು. ಸರ್ಕಾರಗಳು ತೆರಿಗೆಯನ್ನೇ ಹೆಚ್ಚು ನಂಬಿಕೊಂಡು ಕುಳಿತಿರುವಾಗ ತೆರಿಗೆ ವ್ಯವಸ್ಥೆಯೇ ಸುಧಾರಿಸಲಿಲ್ಲವೆಂದರೆ ಜನೋಪಯೋಗಿ ಯೋಜನೆಗಳು ಸಾಫಲ್ಯಗೊಳ್ಳುವುದಾದರೂ ಹೇಗೆ?
ಮುಂದುವರಿಯುವುದು….
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
