ಕೊರಟಗೆರೆ
ಗ್ರಾ.ಪಂ. ವ್ಯಾಪ್ತಿಗೆ ಬರುವ ಅಂಗಡಿ ಮಳಿಗೆಗಳನ್ನು ಕಳೆದ 20 ವರ್ಷಗಳ ಹಿಂದೆ ಬಹಿರಂಗ ಹರಾಜಿನ ಮೂಲಕ ಅಂಗಡಿ ಪಡೆದು ಇಲ್ಲಿಯವರೆಗೂ ಸಮರ್ಪಕವಾಗಿ ಬಾಡಿಗೆ ಸಂದಾಯ ಮಾಡದ 15ಕ್ಕೂ ಹೆಚ್ಚು ಅಂಗಡಿಗಳನ್ನ ಸ್ವತಃ ಪ.ಪಂ.ಕಾರ್ಯನಿರ್ವಹಣಾಧಿಕಾರಿಗಳ ಮುಖೇನ ಗ್ರಾ.ಪಂ. ಅಧ್ಯಕ್ಷರು ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಅಂಗಡಿ ಮಳಿಗೆಗಳಲ್ಲಿನ ವಸ್ತುಗಳನ್ನು ಹೊರಗಿಟ್ಟು ಬೀಗ ಜಡಿದ ಘಟನೆ ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಜರುಗಿದೆ.
ತಾಲ್ಲೂಕಿನ ತೋವಿನಕೆರೆ ಗ್ರಾ.ಪಂ ವ್ಯಾಪ್ತಿಗೆ ಬರುವ ತೋವಿನಕೆರೆ ಬಸ್ ನಿಲ್ದಾಣದಲ್ಲಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿರುವ 15 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ಕಳೆದ 20 ವರ್ಷಗಳ ಹಿಂದೆ ಸರ್ಕಾರಿ ನಿಯಮದಂತೆ ನಿಗದಿತ ಠೇವಣಿ ಹಣ ಇಟ್ಟು ಬಾಡಿಗೆ ಪಡೆದಿದ್ದು ಹರಾಜಿನ ಅವಧಿ ಮುಗಿದಿದ್ದರೂ ಅಂಗಡಿ ಮಾಲಿಕರು ಅಂಗಡಿ ತೆರವು ಮಾಡದೆ ಅಂಗಡಿಯನ್ನು ಮತ್ತೊಬ್ಬರಿಗೆ ಬಾಡಿಗೆ ನೀಡಿ ಹೆಚ್ಚು ಹಣ ಪಡೆಯುತ್ತಿರುವುದಲ್ಲದೆ, ಅವಧಿಗೂ ಮೀರಿ ನೋಟಿಸ್ ಜಾರಿಗೊಳಿಸಿದರೂ ತಲೆ ಕೆಡಿಸಿಕೊಳ್ಳದ ಅಂಗಡಿ ಮಾಲಿಕರ ವಿರುದ್ದ ಗ್ರಾ.ಪಂ. ಕಾರ್ಯಾಚರಣೆ ನಡೆಸಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಹೊರಗಿಟ್ಟು ಕಾನೂನು ರೀತಿಯಲ್ಲಿ ಬೀಗ ಜಡಿದಿದ್ದಾರೆ ಎನ್ನಲಾಗಿದೆ.
ಗ್ರಾ.ಪಂ.ಅಧ್ಯಕ್ಷೆ ಸಿದ್ದಗಂಗಮ್ಮ ಮಾತನಾಡಿ ಗ್ರಾ.ಪಂ.ಗೆ ಸೇರಿದ ಅಂಗಡಿ ಮಳಿಗೆ ಬಾಡಿಗೆ ಪಡೆದ ಮಾಲಿಕರು ಬಾಡಿಗೆ ಸರಿಯಾಗಿ ನೀಡದೆ ಇರುವ ಹಿನ್ನೆಲೆಯಲ್ಲಿ ಬಾಡಿಗೆ ಹಣದ ಆದಾಯದಿಂದ ಗ್ರಾ.ಪಂ. ನೌಕರರಿಗೆ ವೇತನ ನೀಡಬೇಕಾಗಿದ್ದು ಹಾಗೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಸಾಧ್ಯತೆ ಇದ್ದು, ಹಿನ್ನೆಲೆಯಲ್ಲಿ ಅಂಗಡಿಯ ಕೆಲ ಮಾಲಿಕರು ಗ್ರಾ.ಪಂ. ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಬಾಡಿಗೆ ನೀಡದ ಅಂಗಡಿಗಳನ್ನು ತೆರವುಗೊಳಿಸುವಂತೆ ಗ್ರಾ.ಪಂ. ಸಭೆಯಲ್ಲಿ ತೀರ್ಮಾನಿಸಿ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ತೋವಿನಕೆರೆ ಗ್ರಾ.ಪಂ. ಉಪಾಧ್ಯಕ್ಷ ಕೆಂಪಣ್ಣ ಮಾತನಾಡಿ ಗ್ರಾ.ಪಂ. ವತಿಯಿಂದ ಕಳೆದ 20 ವರ್ಷಗಳ ಹಿಂದೆ 15 ಅಂಗಡಿಗಳನ್ನು ನಿರ್ಮಾಣ ಮಾಡಿ ಹರಾಜಿನ ಮೂಲಕ ಬಾಡಿಗೆಗೆ ನೀಡಿದ್ದು ಅವಧಿ ಮುಗಿದಿದ್ದರೂ ಅಂಗಡಿ ಮಾಲಿಕರು ಅಂಗಡಿ ತೆರವುಗೊಳಿಸದೆ ಸರ್ಕಾರಿ ನಿಯಮದಂತೆ ಬಾಡಿಗೆ ಹೆಚ್ಚು ಮಾಡದೆ ಉದಾಸೀನ ಮನೋಭಾವ ತೋರುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾ.ಪಂ. ನಿಂದ ನೋಟಿಸ್ ಜಾರಿ ಮಾಡಿ ಅವಧಿ ಮುಗಿದಿರುವ ಅಂಗಡಿಗಳಿಗೆ ಬೀಗ ಹಾಕಿದ್ದರೂ ರಾತ್ರಿ ವೇಳೆ ಬೀಗಗಳನ್ನು ಹೊಡೆದು ಮತ್ತೆ ಅಂಗಡಿ ಪ್ರಾರಂಭಿಸಿದ್ದ ಹಿನ್ನೆಲೆಯಲ್ಲಿ ಗ್ರಾ.ಪಂ.ಯ 24 ಸದಸ್ಯರು ತೀರ್ಮಾನ ಕೈಗೊಂಡು ಅಂಗಡಿ ಖಾಲಿ ಮಾಡಿಸಿರುವುದಾಗಿ ತಿಳಿಸಿದ ಅವರು, ಈ ಅಂಗಡಿ ಮಳಿಗೆಗಳ ಹಿಂಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಶಾಲೆಯ ಅಭಿವೃದ್ದಿಗಾಗಿ ಅಂಗಡಿ ಮಳಿಗೆಯಿಂದ ಬರುವ ಬಾಡಿಗೆ ಹಣದಲ್ಲಿ ಅರ್ಧ ಭಾಗ ಶಾಲೆಗೆ ನೀಡಲು ಗ್ರಾ.ಪಂ. ತೀರ್ಮಾನಿಸಿದ್ದು, ಅಂಗಡಿ ಮಾಲಿಕರು ಬಾಡಿಗೆಯನ್ನೆ ನೀಡದ ಹಿನ್ನೆಲೆಯಲ್ಲಿ ಶಾಲೆಯ ಅಭಿವೃದ್ಧಿ ಕುಂಟಿತವಾಗಿದ್ದು ಈ ಕ್ರಮಕೈಗೊಂಡಿರುವುದಾಗಿ ಸಮರ್ಥಿಸಿಕೊಂಡರು.
ಬಾಡಿಗೆ ಅಂಗಡಿ ಪಡೆದು ಬೇಕರಿ ನಡೆಸುತ್ತಿರುವ ಅಂಗಡಿ ಮಾಲಿಕ ಜಯರಾಮೇಗೌಡ ಮಾತನಾಡಿ ಗ್ರಾ.ಪಂ. ನಿಂದ ಹರಾಜಿನಲ್ಲಿ ಅಂಗಡಿ ಪಡೆದಿದ್ದು ನಿಗದಿತ ಬಾಡಿಗೆ ನೀಡುತ್ತಿದ್ದು, ಈ ಬಗ್ಗೆ ಅಂಗಡಿ ಖಾಲಿಮಾಡಿಸುವ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದ್ದರೂ ಗ್ರಾ.ಪಂ. ಸದಸ್ಯರು ಮತ್ತು ನೌಕರರು ದುಂಡಾವರ್ತಿ ಮಾಡಿ ಅ.21 ರಂದು ಶನಿವಾರ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿದ್ದ ವಸ್ತುಗಳನ್ನು ರಸ್ತೆಗೆ ಎಸೆದು ನನಗೆ ಸುಮಾರು 4 ರಿಂದ 5 ಲಕ್ಷ ನಷ್ಠ ಉಂಟು ಮಾಡಿರುವುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
