ಶ್ರೀಲಂಕಾ ಸ್ಪೋಟ : ವಿದೇಶಿಯರ ಮೇಲೆ ತೀವ್ರ ನಿಗಾ ವಹಿಸಿದ ಪೊಲೀಸರು

ಬೆಂಗಳೂರು

       ಶ್ರೀಲಂಕಾದ ಕೊಲಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟೆಚ್ಚರ ವಹಿಸಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

       ನಗರಕ್ಕೆ ದೇಶ ವಿದೇಶಗಳಿಂದ ಬರುವವರು ಅನುಮಾನಾಸ್ಪದ ವ್ಯಕ್ತಿಗಳು ವಸ್ತುಗಳ ತಪಾಸಣೆಗಳನ್ನು ತೀವ್ರಗೊಳಿಸಲಾಗಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನಕಣ್ಣಿಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

       ನಗರದಲ್ಲಿನ ಭದ್ರತಾ ಕ್ರಮಗಳ ಸಂಬಂಧ ನಗರದ ಮಾಲ್‍ಗಳು, ಪಂಚತಾರಾ ಹೊಟೇಲ್‍ಗಳ ಮಾಲೀಕರು, ಪ್ರಮುಖ ಚರ್ಚ್‍ಗಳು, ದೇವಾಲಯಗಳು, ಮಸೀದಿಗಳ ಮುಖ್ಯಸ್ಥರ ತುರ್ತು ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ದಾಳಿ ನಡೆಯುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಸೇರಿ ಯಾವುದೇ ತನಿಖಾ ಸಂಸ್ಥೆಗಳಿಂದ ಮಾಹಿತಿ ಬಂದಿಲ್ಲ ಎಂದರು.

       ಮುಂಜಾಗೃತ ಕ್ರಮವಾಗಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ನಗರದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ನಗರದ ಎಲ್ಲಾ ಮಾಲ್‍ಗಳು, ಪಂಚತಾರಾ ಹೊಟೇಲ್‍ಗಳ ಮಾಲೀಕರು, ಪ್ರಮುಖ ಚರ್ಚ್, ದೇವಸ್ಥಾನ, ಮಸೀದಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದರು.

      ಮಾಲ್‍ಗಳಿಗೆ ಪ್ರತಿದಿನ ಸಾವಿರಾರು ಮಂದಿ ಭೇಟಿನೀಡಲಿದ್ದಾರೆ. ಅದರಂತೆ, ಪ್ರಮುಖ ಚರ್ಚ್, ದೇವಾಲಯ, ಮಸೀದಿಗಳಲ್ಲಿ ಪ್ರಾರ್ಥನೆಗಾಗಿ ನೂರಾರು ಮಂದಿ ಆಗಮಿಸಲಿದ್ದು, ಅವರ ಭದ್ರತೆಗಾಗಿ ಕೈಗೊಂಡಿರುವ ಕ್ರಮಗಳು, ಒದಗಿಸಿರುವ ಸೌಲಭ್ಯಗಳು, ರಕ್ಷಣಾ ಕ್ರಮಗಳ ಕುರಿತು ಮಾಃಇತಿ ಪಡೆಯಲಾಗಿದೆ ಎಂದು ಹೇಳಿದರು.

       ಕೊಲಂಬೋದ ಶಾಂಗ್ರಿಲಾ ಹೊಟೇಲ್‍ನಲ್ಲಿ ಸಿಸಿಟಿವಿ ಅಳವಡಿಸಿ ಭದ್ರತೆಗಳನ್ನು ಕೈಗೊಂಡಿದ್ದರೂ ಅದನ್ನು ಬೇಧಿಸಿ, ಭಯೋತ್ಪಾದಕರು ದುಷ್ಕೃತ್ಯ ಮೆರೆದಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪಂಚತಾರಾ ಹೊಟೇಲ್‍ಗೆ ಆಗಮಿಸುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸುವುದು ಹೊಟೇಲ್ ಆವರಣ ಪ್ರವೇಶಿಸುತ್ತಲೇ ಅವರ ಬಗ್ಗೆ ನಿಗಾವಹಿಸುವುದು, ಅನುಮಾನಾಸ್ಪದ ವಸ್ತುಗಳನ್ನು ಕಂಡರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ ಎಂದರು.

     ಮಾಲ್‍ಗಳು, ಪಂಚತಾರಾ ಹೊಟೇಲ್‍ಗಳು, ಪ್ರಮುಖ ದೇವಾಲಯ, ಚರ್ಚ್‍ಗಳು, ಮಸೀದಿಗಳಲ್ಲಿ ಕಡ್ಡಾಯವಾಗಿ ಲೋಹ ಶೋಧಕ ಯಂತ್ರಗಳನ್ನು ಅಳವಡಿಸಿ, ಒಳಪ್ರವೇಶಿಸುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಅವರು ಹೊತ್ತುತರುವ ಲಗೇಜ್‍ಗಳ ಬಗ್ಗೆ ನಿಗಾವಹಿಸಬೇಕು.

    ಸಾಧ್ಯವಾದಷ್ಟೂ ಆವರಣಗಳಲ್ಲೇ ತಪಾಸಣೆ ನಡೆಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ ಭಯೋತ್ಪಾದಕರು ಭದ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡೇ ದೃಷ್ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಾರೆ. ಇದರ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸುವುದು ಅತ್ಯಗತ್ಯ. ಯಾವುದನ್ನೂ ನಿರ್ಲಕ್ಷ್ಯಿಸುವುದು ಪೊಲೀಸರ ಗಮನಕ್ಕೆ ತರುವುದನ್ನು ತಡಮಾಡುವುದು ಸರಿಯಲ್ಲ. ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿಗೆ ಪ್ರತಿದಿನ ಹೊರರಾಜ್ಯ, ಹೊರದೇಶಗಳಿಂದ ಸಾವಿರಾರು ಮಂದಿ ಬಂದುಹೋಗಲಿದ್ದು, ಅವರ ಬಗ್ಗೆ ನಿಗಾವಹಿಸುವುದು ಅತ್ಯಂತ ಅಗತ್ಯ ಎಂದು ಹೇಳಿದರು.

        ಭದ್ರತಾ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಲೋಹ ಶೋಧಕ ಯಂತ್ರ ಸರಿಯಾಗಿ ಕೆಲಸ ಮಾಡದಿದ್ದರೆ, ಕೂಡಲೇ ಅದನ್ನು ದುರಸ್ತಿಗೊಳಿಸುವುದು, ಸಿಸಿಟಿವಿ ಕ್ಯಾಮರಾಗಳನ್ನು ಜಾಗೃತ ಸ್ಥಿತಿಯಲ್ಲಿಡುವುದು, ತಪಾಸಣೆ ನಡೆಸುವ ಸಿಬ್ಬಂದಿಗೆ ತರಬೇತಿ ನೀಡಿ ಸಜ್ಜುಗೊಳಿಸುವುದು, ಅಲ್ಲದೆ, ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕೆಂದು ಸಲಹೆ ನೀಡಲಾಗಿದೆ ಎಂದರು

        ಭದ್ರತೆಯಲ್ಲಿ ಅಗತ್ಯವೆನಿಸಿದರೆ, ಪೊಲೀಸರನ್ನು ಒದಗಿಸಲಾಗುವುದು, ಎಷ್ಟು ಮಂದಿ ಜನ ಸೇರಲಿದ್ದಾರೆ, ಅವರಿಗೆ ಯಾವ ರೀತಿಯ ಭದ್ರತೆ ಬೇಕು ಎನ್ನುವುದರ ಬಗ್ಗೆ ಸ್ಥಳೀಯ ಠಾಣೆಗಳ ಪೊಲೀಸರಿಗೆ ಮಾಹಿತಿ ನೀಡಿ ಅಗತ್ಯ ನೆರವು ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬಿ.ಕೆ. ಸಿಂಗ್, ಅಲೋಕ್ ಕುಮಾರ್, ಹರಿಶೇಖರನ್, ಡಿಸಿಪಿಗಳಾದ ಶಶಿಕುಮಾರ್, ರಾಹುಲ್ ಕುಮಾರ್, ಕಲಾಕೃಷ್ಣಸ್ವಾಮಿ, ರವಿ ಡಿ. ಚನ್ನಣ್ಣನವರ್, ದೇವರಾಜ್, ಅಬ್ದುಲ್ ಅಹದ್, ಇಶಾ ಪಂಥ್ ಅವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link