ತುರುವೇಕೆರೆ:
ಇಡೀ ಜಗತ್ತು ಕಂಡ ಅತ್ಯಂತ ಸರಳ ಮತ್ತು ತ್ಯಾಗ ಸಜ್ಜನಿಕೆಯ ಮಹಾ ಪುರುಷರಲ್ಲಿ ಗಾಂಧೀಜಿಯವರು ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಜಿ.ಪಂ.ಮಾಜಿ ಸದಸ್ಯ ಹಾಗೂ ರೋಟರಿ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಂ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ರೋಟರಿ ಕ್ಲಬ್ ವತಿಯಿಂದ 152 ನೇ ಮಹಾತ್ಮ ಗಾಂಧೀಜಿ ಅವರ ಜನ್ಮದಿನಾಚರಣೆ ಪ್ರಯುಕ್ತ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ರೋಟರಿ ಉಧ್ಯಾನವನವನ್ನು ಸ್ವಚ್ಚಗೊಳಿಸಿದ ಸಂಧರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಮನುಷ್ಯ ತನ್ನ ವೃತ್ತಿಯಲ್ಲಿ ದೇವರನ್ನು ಕಾಣಬೇಕಿದೆ. ಆಡಂಬರದ ಜೀವನಕ್ಕಿಂತ ಸರಳ ಬದುಕಿನ ಸೂತ್ರಗಳನ್ನು ಇಡೀ ಜಗತ್ತಿಗೆ ಮಾದರಿ ಆಗಿ ನೀಡಿದ ಮಹಾನುಭಾವ ಅವರು. ಆಧುನಿಕ ಯಂತ್ರ ಕೈಗಾರಿಕೆಗಳು ಬಂದು ಶ್ರಮ ಮತ್ತು ದೇಶಿ ಗುಡಿಕೈಗಾರಿಕೆಗಳನ್ನೇ ಮೂಲೆ ಗುಂಪಾಗಿಸಿ ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆ ಹಿಂದೆ ಬೀಳುವಂತಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ತಲೆದೋರಲಿದೆ ಎಂಬುವುದು ಗಾಂಧೀಜಿಯವರ ವಿಷಾದವಾಗಿತ್ತು ಎಂದರು.
ರೋಟರಿ ಅಧ್ಯಕ್ಷ ಎಸ್.ಎನ್.ರಾಜಣ್ಣ ಮಾತನಾಡಿ ಮಹಾತ್ಮ ಗಾಂದೀಜಿಯವರ “ಗ್ರಾಮ ರಾಜ್ಯ ಮತ್ತು ಸ್ವಚ್ಚ ಭಾರತ್” ಎಂಬ ಪರಿಕಲ್ಪನೆಗಳು ಪ್ರಪಂಚದ ಎಲ್ಲಾ ದೇಶಗಳಿಗೂ ಇಂದಿಗೂ ಮಾದರಿಯಾಗಿದ್ದು ಗಾಂಧೀಜಿಯವರ ಸ್ವಚ್ಚ ಭಾರತ ನಿರ್ಮಾಣದ ಕನಸು ನನಸಾಗಬೇಕಿದೆ ಎಂದರು.
ರಾಷ್ಟ್ರವು ಇಂದು ತನ್ನ ಇಬ್ಬರು ಶ್ರೇಷ್ಠ ಪುತ್ರರಾದ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ಶಾಸ್ತ್ರಿ ಅವರಿಗೆ ನಮನಗಳನ್ನು ಸಲ್ಲಿಸುತ್ತಿದೆ. ಪಟ್ಟಣದಲ್ಲಿ ಹಲವು ಆಯಾಮಗಳಲ್ಲಿ ಸುಧಾರಣೆ ತರಲು ಯೋಜನೆಗಳನ್ನು ರೂಪಿಸಿದ್ದು, ಇದಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಅಧಿಕಾರಿಗಳು ಹಾಗೂ ನಾಗರೀಕರ ಸಹಕಾರ ಅಗತ್ಯವಾಗಿದ್ದು ನಮ್ಮೊಂದಿಗೆ ಕೈಜೋಡಿಸಬೇಕಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಮಂಜುಳಾದೇವಿ ತಿಳಿಸಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ರೋಟರಿ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಗುಪ್ತಾ, ರೋಟರಿ ಮಾಜಿ ಅಧ್ಯಕ್ಷ ಡಾ. ಚೇತನ್, ಕಾರ್ಯದರ್ಶಿ ರಾಜಪ್ಪ, ಖಜಾಂಚಿ ಸತೀಶ್ಕುಮಾರ್, ಪತ್ರಕರ್ತರ ಸಂಘದ ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಮಲ್ಲಿಕಾರ್ಜುನ್ ದುಂಡ, ರೋಟರಿ ಪದಾಧಿಕಾರಿಗಳಾದ ಬಿಎಮ್ಎಸ್. ಉಮೇಶ್, ಬಸವರಾಜು, ಗ್ರಂಥಾಲಯ ರಾಮಚಂದ್ರು, ವಾಡೇಕರ್, ಜಯರಾಮ್, ಶಶಿಧರ್, ಶಿವರಾಜು ಸೇರಿದಂತೆ ಪೌರ ಕಾರ್ಮಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
