ಸ್ಮಾರ್ಟ್‍ಸಿಟಿ ಚರ್ಚೆಗಾಗಿ ಪಾಲಿಕೆ ಸಭೆ ಮುಂದೂಡಿಕೆ

ತುಮಕೂರು
     ಸ್ಮಾರ್ಟ್‍ಸಿಟಿ ಯೋಜನೆಯಡಿ ತುಮಕೂರು ನಗರದಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಕಾಮಗಾರಿಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸುವ ಸಲುವಾಗಿ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಮೂರನೇ ದಿನ ಸಮಾವೇಶಗೊಂಡ ಕೆಲ ಹೊತ್ತಿನಲ್ಲೇ ಮುಂದೂಡಲ್ಪಟ್ಟಿತು.
   ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆಯ ಮೂರನೇ ದಿನದ ಮುಂದುವರೆದ ಸಭೆ ಸಮಾವೇಶಗೊಂಡಿತು. ತುಮಕೂರು ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ಸದಸ್ಯರುಗಳು ಸಜ್ಜಾಗಿ ಬಂದಿದ್ದು, ತುದಿಗಾಲಲ್ಲಿ ನಿಂತಿದ್ದರು.
    ಆದರೆ ಪಾಲಿಕೆಯ ಆಯುಕ್ತ ಟಿ.ಭೂಪಾಲನ್ ಅವರು ಬೆಂಗಳೂರಿನ ಹೈಕೋರ್ಟ್‍ಗೆ ತೆರಳಿದ್ದಾರೆಂದು ಹಾಗೂ ಅವರ ಬದಲು ಪಾಲಿಕೆಯ ಉಪ ಆಯುಕ್ತ (ಕಂದಾಯ) ಯೋಗಾನಂದ್ ಉಪಸ್ಥಿತಿಯಲ್ಲಿ ಸಭೆ ನಡೆಯುವುದೆಂದು ತಿಳಿದುಬಂದಾಗ, ಸದಸ್ಯರ ಉತ್ಸಾಹ ತಣ್ಣಗಾಯಿತು. ಆಯುಕ್ತರಿಲ್ಲದೆ ಸಭೆ ನಡೆಸುವುದು ಸೂಕ್ತವಲ್ಲವೆಂದು ಹೇಳುತ್ತ, ಸಭೆಯನ್ನು ಮುಂದೂಡಲು ಪಟ್ಟು ಹಿಡಿದರು. ಹೀಗಾಗಿ ಸೆ.24 ಕ್ಕೆ ಸಭೆಯನ್ನು ಮುಂದೂಡಲಾಯಿತು.
   ಈ ಸಭೆಯಲ್ಲಿ ಸದಸ್ಯರು ವಿಷಯವನ್ನು ಚರ್ಚಿಸಬಹುದು. ಎಲ್ಲವೂ ನಿರ್ಣಯವಾಗುತ್ತದೆ. ಸಭಾ ನಡವಳಿಯಲ್ಲಿ ದಾಖಲಾಗುತ್ತದೆ. ಅದನ್ನು ನಾವು ಆಯುಕ್ತರ ಗಮನಕ್ಕೆ ತರುತ್ತೇವೆ. ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅಲ್ಲದೆ ಸ್ಮಾರ್ಟ್‍ಸಿಟಿ ಕಂಪನಿಗೆ ಪಾಲಿಕೆಯ ಮೇಯರ್, ಉಪಮೇಯರ್ ಮತ್ತು ಇಬ್ಬರು ಸದಸ್ಯರುಗಳೂ ನಿರ್ದೇಶಕರಾಗಿದ್ದು, ಅವರು ಎಲ್ಲ ವಿಷಯವನ್ನೂ ಸ್ಮಾರ್ಟ್‍ಸಿಟಿ ಕಂಪನಿ ಸಭೆಯಲ್ಲಿ ಚರ್ಚಿಸಬಹುದಾಗಿದೆ ಎಂದು ಉಪ ಆಯುಕ್ತರು ಸಭೆಗೆ ಹೇಳಿದರೂ, ಸದಸ್ಯರು ಒಪ್ಪಲಿಲ್ಲ. ಆಯುಕ್ತರೇ ಸಭೆಯಲ್ಲಿರಬೇಕು. ಆದ್ದರಿಂದ ಸಭೆ ಮುಂದೂಡಿ ಎಂಬ ಒಕ್ಕೊರಲ ಬೇಡಿಕೆ ಮುಂದಿಟ್ಟರು. 
ಅಕ್ರಮಗಳ ಬಗ್ಗೆ ದೂರು
    ಮೊದಲಿಗೆ ಕಾಂಗ್ರೆಸ್‍ನ ಜೆ.ಕುಮಾರ್   ಸ್ಮಾರ್ಟ್‍ಸಿಟಿ ಕಾಮಗಾರಿಗಳಲ್ಲಿ ಅಕ್ರಮಗಳಾಗುತ್ತಿವೆಯೆಂಬ ದೂರುಗಳಿವೆ. ಆದ್ದರಿಂದ ಈ ಬಗ್ಗೆ ನಾವು ಸಮಗ್ರವಾಗಿ ಚರ್ಚಿಸಬೇಕು. ಪಾಲಿಕೆಯ ಆಯುಕ್ತರೇ ಈಗ ಸ್ಮಾರ್ಟ್‍ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವುದರಿಂದ ಅವರು ಇದ್ದರೆ ಮಾತ್ರ ನಮ್ಮ ಚರ್ಚೆಗೆ ಸೂಕ್ತ ಉತ್ತರ ದೊರಕುತ್ತದೆ. ಆದ್ದರಿಂದ ಆಯುಕ್ತರ ಸಮ್ಮುಖವೇ ಸಭೆ ನಡೆಯಬೇಕು ಎಂದು ಒತ್ತಾಯಿಸಿದರು. 
    ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂಗ್ರೆಸ್‍ನ ಸೈಯದ್ ನಯಾಜ್   ಸಹ ಇದಕ್ಕೆ ದನಿಗೂಡಿಸಿದರು. ನಾವು ಚರ್ಚಿಸಬೇಕಾದ ಅನೇಕ ವಿಷಯಗಳಿವೆ. ಅದಕ್ಕೆ ಆಯುಕ್ತರ ಹಾಜರಿ ಅನಿವಾರ್ಯವಾಗಿದೆ. ಈಗ ಸಭೆಯಲ್ಲಿ ಉಪ ಆಯುಕ್ತರಿದ್ದರೂ, ಇಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಮುಂದೆ ಇವರು ಹೊಣೆ ಹೊರುವುದಿಲ್ಲ. ಆದ್ದರಿಂದ ಆಯುಕ್ತರಿರಲೇಬೇಕು ಎಂದು ಹೇಳಿದರು.
    ಜೆಡಿಎಸ್‍ನ ಧರಣೇಂದ್ರ ಕುಮಾರ್   ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಮಾರ್ಟ್‍ಸಿಟಿ ಕಾಮಗಾರಿಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಅನೇಕ ಕಾಮಗಾರಿಗಳು ಅವೈಜ್ಞಾನಿಕವಾಗಿದೆ. ಈ ಬಗ್ಗೆ ಆಯುಕ್ತರ ಸಮ್ಮುಖವೇ ಚರ್ಚಿಸಬೇಕಾಗುತ್ತದೆ ಎಂದರು.
    ಪಕ್ಷೇತರ ಸದಸ್ಯ ವಿಷ್ಣುವರ್ಧನ  ಮಾತನಾಡಿ, ಇಡೀ ನಗರವನ್ನು ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳಿಗೆಂದು ಅಗೆದುಹಾಕಲಾಗಿದೆ. ಏನು ನಡೆಯುತ್ತಿದೆಯೆಂಬುದೇ ಅರ್ಥವಾಗುತ್ತಿಲ್ಲ. ಆದ್ದರಿಂದ ಆಯುಕ್ತರು ಬರುವವರೆಗೂ ಸಭೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
   ಮತ್ತೆ ಮಾತನಾಡಿದ ಸೈಯದ್ ನಯಾಜ್, ನಗರಾದ್ಯಂತ ಗ್ಯಾಸ್ ಸಂಪರ್ಕಕ್ಕೆ ರಸ್ತೆಗಳನ್ನು ಅಗೆಯಲಾಗುತ್ತಿದೆ. ಜೊತೆಗೆ 24/7 ಕುಡಿಯುವ ನೀರಿನ ಪೂರೈಕೆಗಾಗಿಯೂ ಅಗೆಯಲಾಗುತ್ತಿದೆ. ಈ ಬಗ್ಗೆ ಸದಸ್ಯರಿಗೆ ಸೂಕ್ತ ಮಾಹಿತಿಯಿದ್ದರೆ ಮಾತ್ರ ಆಯಾ ವಾರ್ಡ್‍ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಸಭೆಗೆ ಸಂಬಂಧಿಸಿದ ಗುತ್ತಿಗೆದಾರರೂ ಹಾಜರಿರಬೇಕಾಗುತ್ತದೆ ಎಂದು ನುಡಿದರು.
 
     ಜೆಡಿಎಸ್‍ನ ಟಿ.ಕೆ.ನರಸಿಂಹಮೂರ್ತಿ ,ಜೆ.ಡಿ.ಎಸ್.ನ ಎಂ.ಕೆ.ಮನು, ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ ಮೊದಲಾದವರು ಮಾತನಾಡಿ, ಸಭೆಯನ್ನು ಮುಂದೂಡುವುದೇ ಒಳಿತೆಂದು ಅಭಿಪ್ರಾಯಪಟ್ಟರು.
     ಈ ವಿಷಯವಾಗಿ ಕೆಲಹೊತ್ತು ಚರ್ಚೆ ನಡೆಸಿದ ಬಳಿಕ ಈ ಸಭೆಯನ್ನು ಮುಂದೂಡುತ್ತಿರುವುದಾಗಿಯೂ, ಸೆ. 24 ರಂದು ಸಭೆ ನಡೆಸುವುದಾಗಿಯೂ ಮೇಯರ್ ಲಲಿತಾ ರವೀಶ್ ಪ್ರಕಟಿಸಿದರು. ಸಭೆಯಲ್ಲಿ ಉಪಮೇಯರ್ ಬಿ.ಎಸ್.ರೂಪಶ್ರೀ ಹಾಗೂ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು. 
3 ನೇ ದಿನದ ಸಭೆ
     ಪಾಲಿಕೆಯ ಸಾಮಾನ್ಯ ಸಭೆಯು ಸೆ.11 ರಂದು ನಡೆಯಿತು. ಅಂದು ಸಂಜೆ ಸಭೆಯನ್ನು ಮರುದಿನಕ್ಕೆ ಅಂದರೆ ಸೆ.12 ಕ್ಕೆ ಮುಂದೂಡಲಾಗಿತ್ತು. ಎರಡನೇ ದಿನವಾದ ಸೆ. 12 ರಂದು ಇಡೀ ದಿನ ಸಭೆ ನಡೆದು ಸಂಜೆ ಮತ್ತೆ ಸೆ. 16 ಕ್ಕೆ ಮುಂದೂಡಲ್ಪಟ್ಟಿತ್ತು. ಮೂರನೆಯ ದಿನವಾದ ಸೆ.16 ರಂದು ಸಭೆ ಸಮಾವೇಶಗೊಂಡರೂ ಯಾವುದೇ ಚರ್ಚೆಯನ್ನೂ ನಡೆಸದೆ ಮತ್ತೆ ಸೆ.24 ಕ್ಕೆ ಮುಂದೂಡಲ್ಪಟ್ಟಿದೆ.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link