ಹೊಸದುರ್ಗ:
ಘಟಕವಿದ್ದರೂ ಗುಟುಕು ನೀರಿಲ್ಲ, ಜನಗಳಿಗೆ ನೀರಿಗಾಗಿ ಹೊಡೆದಾಟ, ಬಡಿದಾಟ ತಪ್ಪಿದ್ದಲ್ಲ. ಇದು ಪಟ್ಟಣದ ಹೊರವಲಯದ ಮಧುರೆ ಗ್ರಾ.ಪಂ ವ್ಯಾಪ್ತಿಯಲ್ಲಿರುವ 1 ನೇ ಯಲಕಪ್ಪನಹಟ್ಟಿ ಗ್ರಾಮದ ಸಮಸ್ಯೆ.ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷ ಹಾಗೂ ತಾತ್ಸಾರದಿಂದ ಶುದ್ದ ಕುಡಿಯುವ ನೀರಿನ ಘಟಕವೊಂದು ಕಳೆದ 20 ದಿನದಿಂದ ನಿರ್ವಹಣೆಯಿಲ್ಲದೆ ವಾಟರ್ ಫಿಲ್ಟರ್ನ ಮೋಟಾರ್ ಕೆಟ್ಟು ನಿಂತು ಜನರ ಉಪಯೋಗಕ್ಕಿಲ್ಲವಾಗಿದೆ. ಆದ್ದರಿಂದ ಜನರು ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿದ್ದರೂ ಎರಡು ದಿನಕ್ಕೊಮ್ಮೆ ಗ್ರಾ.ಪಂ ಇಂದ ಬರುವ ಟ್ಯಾಂಕರ್ ನೀರನ್ನು ಕುಡಿಯುತ್ತಿದ್ದಾರೆ.
20 ದಿನದ ಆಚೇ ಈ ಘಟಕವೂ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಇದನ್ನು ನೋಡಿಕೊಳ್ಳುವವರ ತಾತ್ಸಾರದಿಂದ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ.ಅಂದಿನಿಂದ ಇಂದಿನವರೆಗೆ ಗ್ರಾಮದ ಜನತೆ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಒಂದೇ ಘಟಕ ಆಸರೆ:
ನೂರಾರು ಕುಟುಂಬಗಳು ಶುದ್ದ ಕುಡಿಯುವ ನೀರಿಗೆ ಇದೊಂದೇ ಘಟಕವನ್ನು ನೆಚ್ಚಿಕೊಂಡಿವೆ. ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಶುದ್ದ ನೀರು ತರುವ ಅನಿವಾರ್ಯತೆ ಜನರದ್ದು. ಆದರೆ ಈ ಘಟಕದಲ್ಲಿ ನೀರು ದೊರೆಯದೇ ಪಕ್ಕದ ಗ್ರಾಮಕ್ಕೆ ತೆರಳಿ ನೀರನ್ನು ತಂದು ಕುಡಿಯುತ್ತಿದ್ದೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಯಿಸದ ಊರಿನ ಗ್ರಾಮಸ್ಥ.
ಘಟಕ ಬಂದ್ಗೆ ಕಾರಣವೇನು? :
ಈ ಗ್ರಾಮಕ್ಕೆ ನೀರು ಪೂರೈಕೆಗೆ ಜಿ.ಪಂ ವತಿಯಿಂದ 3ಕೊಳವೆ ಬಾವಿಗಳನ್ನು ಕೊರೆಸಿದ್ದರು.ಕೊಳವೆ ಬಾವಿಯ ನೀರು ಹೆಚ್ಚಿನ ಗಡಸುತನ ಹೊಂದಿದ್ದ ಕಾರಣಕ್ಕೆ ಮತ್ತು ಅಂತರ್ಜಲ ಕುಸಿತದಿಂದ ನೀರು ಅಲ್ಪ ಸ್ವಲ್ಪ ಬರುವುದರಿಂದ ನೀರು ಶುದ್ದೀಕರಣಗೊಳಿಸುವ ಫಿಲ್ಟರ್ ಯಂತ್ರ ಆಗಾಗ ಬ್ಲಾಕ್ ಆಗಿ ನಿರ್ವಹಣೆಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಘಟಕ ಬಂದ್ ಆಗಿದೆ ಎಂದು ಹೇಳಲಾಗುತ್ತಿದೆ.
ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ: ಫಿಲ್ಟರ್ ಯಂತ್ರಕೆಟ್ಟು ಇಪ್ಪತ್ತು ದಿನವಾದರೂ ಗ್ರಾ.ಪಂ ಅಧಿಕಾರಿಗಳುಇತ್ತ ಕಡೆ ಗಮನ ಹರಿಸಿಲ್ಲ. ಈ ಘಟಕವನ್ನು ಸರಿ ಮಾಡಿಸದೇ ನಿರ್ಲಕ್ಷ ತೋರುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿದ್ದರೂ ಟ್ಯಾಂಕರ್ ನೀರು ಕುಡಿಯುತಿದ್ದೇವೆ. ಪ್ರತಿ ಎರಡು ದಿನಕ್ಕೊಮ್ಮೆ ಟ್ಯಾಂಕರ್ ನಿಂದ ಫಿಲ್ಟರ್ಗೆ ನೀರು ತುಂಬಿಸಿ ಶುದ್ದ ನೀರನ್ನು ಕುಡಿಯುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ ಗ್ರಾಮದ ಗ್ರಾಮಸ್ಥರು.
ತಾಲ್ಲೂಕು ಆಡಳಿತ ಸಾರ್ವಜನಿಕರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದು ಇಂತಾ ಟ್ಯಾಂಕರ್ ನೀರನ್ನು ಕುಡಿದು ಆರೋಗ್ಯದಲ್ಲಿ ಏರು-ಪೇರಾಗುವ ಮುನ್ನ ಸಂಬಂಧಪಟ್ಟವರು ಶೀಘ್ರವೇ ಈ ಘಟಕ ಮರು ಚಾಲನೆಗೆ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/water-piltar-photo.gif)