ಹುಳಿಯಾರು:
ಕೃಷ್ಣಜನ್ಮಾಷ್ಠಮಿಯಲ್ಲಿ ಭಗವದ್ಗೀತಾ ಪುಸ್ತಕಗಳನ್ನು ಹಂಚಿ ಪ್ರತಿಯೊಬ್ಬರೂ ಗೀತಾಸಾರ ತಿಳಿಯುವ ಸಂಸ್ಕಾರದ ಬೀಜ ಬಿತ್ತುವ ಅಭಿಯಾನವಾಗಿ ಮಾರ್ಪಡಿಸುವಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಲಹೆ ನೀಡಿದರು.
ಹುಳಿಯಾರು ಸಮೀಪದ ದೊಡ್ಡ ಎಣ್ಣೇಗೆರೆ ಜ್ಞಾನಬಾರತಿ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಕೃಷ್ಣಜನ್ಮಾಷ್ಠಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಣರಂಗದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಮಾಡಿದ ಉಪದೇಶವೇ ಭಗವದ್ಗೀತಾ. ಮುಸ್ಲಿಂಮರಿಗೆ ಕುರಾನ್ ಹಾಗೂ ಕ್ರಿಶ್ಚಿಯನ್ರಿಗೆ ಬೈಬಲ್ ಹೇಗೆ ಧರ್ಮಗ್ರಂಥವೋ ಹಾಗೆ ಹಿಂದುಗಳಿಗೆ ಭಗವದ್ಗೀತಾ. ಭಗವದ್ಗೀತೆಯು ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಔಷಧಿಯಂತಿದೆ. ಭಗವದ್ದೀತೆಯ ಸಂದೇಶವನ್ನು ಸಂಪೂರ್ಣವಾಗಿ ಅರಿತರು ಮಾನಸಿಕ ಖಿನ್ನತೆ, ಸ್ವಾರ್ಥ, ಅಹಂಕಾರ, ಧ್ವೇಷ, ಅಸೂಹೆ ಇವುಗಳಿಂದ ದೂರಬಂದು ನೆಮ್ಮದಿಯ ಬದುಕು ನಡೆಸಬಹುದು ಎಂದರಲ್ಲದೆ. ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಾಲೆಗಳಲ್ಲಿ ಭಗವದ್ದೀತೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುವಂತೆ ಕಿವಿ ಮಾತು ಹೇಳಿದರು.
ಶ್ರೀ ಕೃಷ್ಣ ಹುಟ್ಟಿ 5 ಸಾವಿರ ವರ್ಷಗಳು ಕಳೆದಿದ್ದರೂ ಇಂದಿಗೂ ಆತನ ಜನ್ಮದಿನಾಚರಣೆ ಆಚರಿಸುತ್ತಿದ್ದೇವೆಂದರೆ ಆತನ ಜೀವಿತಾವಧಿ ಸಾಧನೆ ಎಂತಹುದು ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕಿದೆ. ಹುಟ್ಟು ಮತ್ತು ಸಾವು ಆಕಸ್ಮಿಕವಾಗಿದ್ದು ಇವೆರಡರ ನಡುವೆ ಲೋಕ ಮೆಚ್ಚುವ ಕೆಲಸ ಮಾಡಿದಾಗ ಮಾತ್ರ ಸತ್ತರೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಬಹುದಾಗಿದೆ. ಹಾಗಾಗಿ ಸ್ವಾರ್ಥ ಬಿಟ್ಟು ಪರೋಪಕಾರ ಜೀನವ ನಡೆಸುವಂತೆಯೂ ಕರೆ ನೀಡಿದರಲ್ಲದೆ ಶ್ರೀಕೃಷ್ಣ ಹುಟ್ಟಿದ ಮಥುರಾ ಹಾಗೂ ಆತ ಬೆಳೆದ ಬೃಂದಾವನ ನನ್ನನ್ನು ಪದೇ ಪದೇ ಕಾಡುತ್ತಿದ್ದು ಒಂದೆರಡು ಬಾರಿ ಹೋಗಿ ಬಂದಿದ್ದರೂ ಮತ್ತೆ ಮತ್ತೆ ಹೋಗಬೇಕೆನ್ನಿಸುವ ಸ್ಥಳವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಬಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಅವರು ವಹಿಸಿದ್ದರು. ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಶಿರಾ ನಗರಸಭೆ ಸದಸ್ಯ ಅಭೀಬ್ ಖಾನ್, ಶಿಕ್ಷಕ ಟಿ.ಎಸ್.ರವಿ, ನಿವೃತ್ತ ಶಿಕ್ಷಕ ಶಾಂತವೀರಪ್ಪ, ಗ್ರಾಪಂ ಅಧ್ಯಕ್ಷ ಕಾಟಲಿಂಗಯ್ಯ, ಮಾಜಿ ಅಧ್ಯಕ್ಷ ರಹಮತ್ ಉಲ್ಲಾ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ