ದಾವಣಗೆರೆ:
ಚಿಕ್ಕಮಗಳೂರಿನ ದತ್ತಾತ್ರೇಯ ಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕು. ಅಲ್ಲಿರುವ ಘೋರಿಗಳನ್ನು ನಾಗೇನಹಳ್ಳೀಗೆ ಸ್ಥಳಾಂತರಿಸಬೇಕು ಹಾಗೂ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಪ್ರಮುಖ ಪರಶುರಾಮ್ ನಡುಮನಿ ಮಾತನಾಡಿ, ಬಾಬಾಬುಡನ್ ದರ್ಗಾ ಹಾಗೂ ದತ್ತಾತ್ರೇಯ ಪೀಠ ಬೇರೆ, ಬೇರೆವು ಎಂಬುದಕ್ಕೆ ದಾಖಲೆಗಳಿವೆ. ಈ ಪೀಠದಿಂದ ಸುಮಾರು 14 ಕಿ.ಮೀ. ದೂರವಿರುವ ನಾಗೇನಹಳ್ಳಿಯಲ್ಲಿ ಬಾಬಾಬುಡನ್ ದರ್ಗಾ ಇದೆ. ಆದರೂ ದತ್ತಾತ್ರೇಯ ಪೀಠವನ್ನು ಬಾಬಾಬುಡನ್ ದರ್ಗಾ ಎಂಬುದಾಗಿ ಹೇಳುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವೇ ದತ್ತ ಪೀಠ ವಿವಾದನ್ನು ಸೌಹಾರ್ದಯುತವಾಗಿ ಬಗೆ ಹರಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ರಾಜ್ಯ ಸರ್ಕಾರ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸದೆಯೇ ಹಿಂದಿನಂತಯೇ ಮೌಲಿಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದು ಅತ್ಯಂತ ಖಂಡನೀಯ. ತಕ್ಷಣವೇ ದತ್ತಾತ್ರೇಯ ಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕು. ಅಲ್ಲಿರುವ ಘೋರಿಗಳನ್ನು ಸ್ಥಳಾಂತರಿಸಬೇಕು ಹಾಗೂ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಿದ್ಯಾರ್ಥಿ ಸೇನಾ ಅಧ್ಯಕ್ಷ ನೂತನ್ ಆಚಾರ್ಯ, ಶ್ರೀರಾಮ ಸೇನೆಯ ಪ್ರಶಾಂತ್ ಮತ್ತೂರು, ಡಿ.ಬಿ. ವಿನೋದ್ ರಾಜ್, ಮತ್ತಿ ಕುಮಾರ್, ಮೋಹನ್, ಶರತ್ ಬಿ. ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
