ತುಮಕೂರು:
ಸರಕಾರದ ವಿವಿಧ ಇಲಾಖೆಗಳ ಕಟ್ಟಡ ದುರಸ್ತಿ ಮತ್ತು ನಿರ್ಮಾಣದ ವೇಳೆ ಕ್ಯೂರಿಂಗ್ಗೆ ಹೆಚ್ಚಿನ ಒತ್ತು ನೀಡುವಂತೆ ವಿವಿಧ ನಿರ್ಮಾಣ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾರದ ನರಸಿಂಹಮೂರ್ತಿ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಶಾಲೆಗಳು,ಸರಕಾರಿ ಕಚೇರಿಗಳು ದುರಸ್ತಿ ಮತ್ತು ಹೊಸ ಕಟ್ಟಡ ನಿರ್ಮಾಣದ ವೇಳೆ ಆರ್.ಸಿ.ಸಿ. ಮತ್ತು ಇಟ್ಟಿಗೆ ಕಟ್ಟಡ ನಿರ್ಮಾಣದ ವೇಳೆ ಕ್ಯೂರಿಂಗ್ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದು, ಇದರಿಂದ ಕಟ್ಟಡಗಳ ಗುಣಮಟ್ಟ ಹಾಳಾಗುತ್ತಿದ್ದು, ಬಹುಬೇಗ ಕಟ್ಟಡಗಳು ತಮ್ಮ ಸತ್ವ ಕಳೆದುಕೊಂಡು ಕಟ್ಟಡ ನಿರ್ಮಾಣದ ಉದ್ದೇಶ ವಿಫಲವಾಗುವುದರ ಜೊತೆಗೆ, ಸಾರ್ವಜನಿಕರ ಹಣವೂ ಪೋಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿಶೇಷವಾಗಿ ನಿರ್ಮಿತಿ ಕೇಂದ್ರ ಮತ್ತು ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬರುತ್ತಿದ್ದು,ಅಧಿಕಾರಿಗಳು ತಾವು ನಿರ್ಮಿಸುತ್ತಿರುವ ಕಟ್ಟಡಗಳು ನಮ್ಮ ಮನೆಗಳು ಎಂದು ತಿಳಿದು, ಕನಿಷ್ಠ 20 ದಿನ ಕ್ಯೂರಿಂಗ್ ಮಾಡಿದರೆ ಕಟ್ಟಡಗಳು ಹೆಚ್ಚು ದಿನ ಬಾಳಿಕೆ ಬರಲಿವೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ನಿರ್ಮಿತಿ ಕೇಂದ್ರ, ಕೆ.ಆರ್.ಇ.ಡಿ.ಎಲ್.,ಪಿಆರ್ಇಡಿ, ಆರ್.ಡಬ್ಲ್ಯ ಎಸ್ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ನಗರದಲ್ಲಿ ನಿರ್ಮಾಣವಾಗಿರುವ ಮಹಾತ್ಮಗಾಂಧಿ ಕ್ರೀಡಾಂಗಣ ಸೇರಿದಂತೆ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣಗಳ ನಿರ್ವಹಣೆ, ಕ್ರೀಡಾಪಟುಗಳಿಗೆ ಗೌರವಧನ,ಗ್ರಾಮೀಣ ಕ್ರೀಡಾಕೇಂದ್ರಗಳ ನಿರ್ಮಾಣ ಸೇರಿದಂತೆ ಒಟ್ಟು 1.10 ಕೋಟಿ ರೂಗಳ ಅನುದಾನ ನೀಡಿದ್ದು,ಕ್ರೀಡಾಂಗಣಗಳ ನಿರ್ವಹಣೆಗೆ ಬಿಡುಗಡೆಯಾದ 60 ಲಕ್ಷ ರೂಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ 5 ಲಕ್ಷ ರೂಗಳಂತೆ ಹಂಚಿಕೆ ಮಾಡಲಾಗಿದೆ. ಕ್ರೀಡಾಶಾಲೆ ನಿರ್ವಹಣೆಗೆ 25 ಲಕ್ಷ ರೂ ಕಾಯ್ದಿರಿಸಲಾಗಿದೆ ಎಂದು ವಿವರ ನೀಡಿದರು. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಅಧುನೀಕರಣ ಸ್ಮಾರ್ಟಸಿಟಿಯಿಂದ ನಡೆಯುತ್ತಿದ್ದು, ಇಲಾಖೆಗೂ, ಕಾಮಗಾರಿಗೂ ಸಂಬಂಧವಿಲ್ಲವೆಂದರು.
ಹಣ ವಾಪಸ್ಸಾಗದಂತೆ ಎಚ್ಚರಿಕೆ ವಹಿಸಿ:ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳ ಕಟ್ಟಡ ದುರಸ್ತಿಗಾಗಿ ಬಿಡುಗಡೆಯಾಗಿದ್ದ ಸುಮಾರು 22 ಲಕ್ಷ ರೂ ಹಣ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ವಾಪಸ್ಸಾಗಿದೆ. ಅನುಧಾನವೇ ಇಲ್ಲದ ಈ ಸಮಯದಲ್ಲಿ ಬಿಡುಗಡೆಯಾದ ಅನುದಾನ ವಾಪಸ್ಸಾದರೆ ಹೇಗೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತ ಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷರು,ಯಾವುದೇ ಇಲಾಖೆಯ ಅನುಧಾನ ವಾಪಸ್ಸಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಎಂದು ನಿರ್ಮಾಣ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 381 ಅಂಬೇಡ್ಕರ್ ಭವನ ನಿರ್ಮಾಣ:ತುಮಕೂರು ಜಿಲ್ಲೆಯಲ್ಲಿ 2016-17 ರಿಂದ ಇದುವರೆಗೂ 381 ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಸರಕಾರದಿಂದ ಅನುಮೋಧನೆ ದೊರೆತ್ತಿದ್ದು,161 ಕಾಮಗಾರಿಗಳು ಪೂರ್ಣ ಗೊಂಡಿವೆ.76 ಕಾಮಗಾರಿಗಳು ವಿವಿಧ ಹಂತದಲ್ಲಿದ್ದು,36ಕ್ಕೆ ಇದುವರೆಗೂ ನಿವೇಶನ ದೊರೆತ್ತಿಲ್ಲ.ಈ ಮೊದಲು ಒಂದು ಕಟ್ಟಡಕ್ಕೆ 10 ಲಕ್ಷ ಇದ್ದ ಅನುದಾನವನ್ನು ಪ್ರಸ್ತುತ 20 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ.ಆರಂಭವಾಗದ ಕೆಲವು ಕಡೆಗಳಲ್ಲಿ ಹೊಸ ಅನುಧಾನದ ರೀತಿ ಕ್ರಿಯಾಯೋಜನೆ ತಯಾರಿಸಿ, ಅನುದಾನ ನೀಡಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರೇಮನಾಥ್ ತಿಳಿಸಿದರು.
ಜಾಗದ ಸಮಸ್ಯೆ ಇರುವ ಸುಮಾರು 36 ಅಂಬೇಡ್ಕರ್ ಭವನಗಳಿಗೆ ಸ್ಥಳ ದೊರಕಿಸಿಕೊಡುವ ನಿಟ್ಟಿನಲ್ಲಿ ಅಯಾಯ ತಾಲೂಕು ತಹಶೀಲ್ದಾರರೊಂದಿಗೆ ಗ್ರಾಮಪಂಚಾಯಿತಿಗಳ ಪಿಡಿಓ ಹಾಗೂ ಕಂದಾಯ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರವಾಸ ಏರ್ಪಡಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಶ್ರೀಮತಿ ಶಾರದ ನರಸಿಂಹಮೂರ್ತಿ ಸೂಚಿಸಿದರು.
ಜಿಲ್ಲೆಯ ಪಾವಗಡ ತಾಲೂಕಿನ ಗೋವಿಂದನಹಳ್ಳಿಯಲ್ಲಿ ಮುಚ್ಚಿ ಹೋಗಿದ್ದ ಶಾಲೆಯೊಂದು ಪುನಃ ಆರಂಭವಾಗಿ, ದೇವಾಲಯದ ಆವರಣದಲ್ಲಿ ನಡೆಯುತ್ತಿದೆ.ಹಾಲಿ ಇದ್ದ ಶಾಲಾ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು,ಶಾಲಾ ಆವರಣದಲ್ಲಿಯೇ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ತಾತ್ಕಾಲಿಕವಾಗಿ ಶಾಲೆಗೆ ನೀಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಸಾಮಾನ್ಯ ಸ್ಥಾಯಿ ಸಮಿತಿ ಸದಸ್ಯರಾದ ತಿಮ್ಮಯ್ಯ, ಶ್ರೀಮತಿ ರೇಣುಕಾ,ಶ್ರೀಮತಿ ಶಿವಮ್ಮ, ಶ್ರೀಮತಿ ಅಂಬುಜ,ಶ್ರೀಮತಿ ಭಾರತಿ ಹಿತೇಶ್ ಹಾಗೂ ಸದಸ್ಯ ಕಾರ್ಯದರ್ಸಿ ಹಾಗೂ ಡಿ.ಎಸ್.ಓನ್ ಕೃಷ್ಣಮೂರ್ತಿನ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
