ಬೆಂಗಳೂರು
ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಸರ್ಕಾರ ವಹಿಸದೆ ಹೋದಲ್ಲಿ ಡಿ. 28 ರಿಂದ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಡಿಯೂರಪ್ಪ ಸುಖಾಸುಮ್ಮನೆ ಹೇಳಿಕೆ ಕೊಟ್ಟು ವರ್ಚಸ್ಸು ಕೆಡಿಸಿಕೊಳ್ಳುವುದು ಬೇಡ. ನ್ಯಾಯಾಂಗ ತನಿಖೆ ಆಗದೆ ಹೊರತು ಸತ್ಯಾಂಶ ಹೊರಗೆ ಬರುವುದಿಲ್ಲ.
ಜಿಲ್ಲಾಧಿಕಾರಿಯಿಂದ ನ್ಯಾಯಾಂಗ ತನಿಖೆ ಆಗುವುದಿಲ್ಲ. ನ್ಯಾಯಾಧೀಶರಿಂದಾಗಬೇಕು ಎಂದು ಆಗ್ರಹಿಸಿದರು.ಸಿಎಎ ಹೋರಾಟದ ಎನ್ನುವುದು ಜಾತಿ ಧರ್ಮದ ಹೋರಾಟವಲ್ಲ. ಇದು ಅಂಬೇಡ್ಕರ್ ಅವರ ಸಂವಿಧಾನ ಉಳಿಸುವ ಹೋರಾಟ. ಎರಡು ವರ್ಷದ ಹಿಂದೆಯೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ. ಜಾರ್ಖಂಡ್ನಲ್ಲಿ ಬಿಜೆಪಿ ಸೋತಿದೆ. ಕರ್ನಾಟಕದಲ್ಲಿ ಅದೃಷ್ಟದಿಂದಲೇನೋ ಯಡಿಯೂರಪ್ಪಗೆ ಅಧಿಕಾರ ಸಿಕ್ಕಿದೆ. ಈಗ ವಿನಾಕಾರಣ ಹೇಳಿಕೆ ಕೊಟ್ಟು ಅವರು ಅವಕಾಶ ಕಳೆದುಕೊಳ್ಳಬಾರದು ಎಂದು ಕುಟುಕಿದರು.
ಕಲ್ಲುಹೊಡೆದ ಮೇಲೆ ಗೋಲಿ ಹೊಡೆದರೋ, ಗುಂಡು ಹೊಡೆದು ನಂತರ ಕಲ್ಲು ಹೊಡೆದರೋ ನ್ಯಾಯಾಂಗ ತನಿಖೆಯಿಂದಷ್ಟೇ ಇದೆಲ್ಲ ಸತ್ಯಾಂಶ ಹೊರಬರಬೇಕು. ಐಸಿಯುಗೆ ಪೊಲೀಸರು ಏಕೆ ಹೋದರು? ಪೌರತ್ವ ಕಾಯಿದೆಗೆ ಸಾಬರಿಗೆ ಚಿಂತೆಯೆ ಇಲ್ಲ. ಸ್ವಾತಂತ್ರ್ಯ ಹೋರಾಟವನ್ನು ಸಾಬರೇ ಶುರು ಮಾಡಿದ್ದು. ಈಗ ಸಿಎಎ ಹೋರಾಟವನ್ನು ಸಾಬರೆ ಶುರು ಮಾಡಿದ್ದಾರೆ. ನ್ಯಾಯಾಂಗ ತನಿಖೆಗೆ ಆದೇಶ ಮಾಡದೆ ಹೋದರೆ ಇದೇ ಡಿ. 28 ರಿಂದ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಇಬ್ರಾಹಿಂ ತಮ್ಮ ಎಂದಿನ ಶೈಲಿಯಲ್ಲಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
