ದಾವಣಗೆರೆ
ಇಲ್ಲಿನ ಇಎಸ್ಐ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡಬೇಕು. ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಹಾಗೂ ಶ್ರೀ ಆಂಜನೇಯ ಮಿಲ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಕಾರ್ಮಿಕರು ನಗರದಲ್ಲಿ ಶನಿವಾರ ಧರಣಿ ನಡೆಸಿದರು.
ನಗರದ ಆಶೋಕ ರಸ್ತೆಯಲ್ಲಿನ ಕಾಮ್ರೇಡ್ ಪಂಪಾಪತಿ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಮಿಕರು, ಜಯದೇವ ವೃತ್ತದ ಮುಖಾಂತರ ನಿಟುವಳ್ಳಿಯಲ್ಲಿರುವ ಇಎಸ್ಐ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಎದುರು ಕೆಲ ಕಾಲ ಧರಣಿ ನಡೆಸಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ಮುಖಂಡ ಹೆಚ್.ಜಿ.ಉಮೇಶ್, ಈ ಇಎಸ್ಐ ಆಸ್ಪತ್ರೆಗೆ ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳ ಕಾರ್ಮಿಕರು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬಂದು ದಾಖಲಾಗುತ್ತಾರೆ. ಅಲ್ಲದೇ, ಹೊರ ರೋಗಿಗಳ ವಿಭಾಗದಲ್ಲಿ ಸಾವಿರಾರು ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇಎಸ್ಐ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಇಲ್ಲಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳೀಯವಾಗಿ ಸೌಲಭ್ಯವಿಲ್ಲದ ಕಾಯಿಲೆಗಳಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ಇಎಸ್ಐ ಇಲಾಖೆಗೆ ಹೊಂದಾಣಿಕೆಯಾಗಿರುವ ಖಾಸಗಿ ಆಸ್ಪತ್ರೆಗೆ ತಲಾನದಾನ ಪತ್ರ ನೀಡಿ ಕಳುಹಿಸುತ್ತಿದ್ದಾರೆ. ಈ ರೀತಿ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರವನ್ನು ಇಲಾಖೆಯಿಂದ ಪಡೆಯುತ್ತಿವೆ. ಇದರಿಂದಾಗಿ ಕಾರ್ಮಿಕರ ರಾಜ್ಯ ವಿಮಾ ಯೋಜನೆಗೆ ಮಾತ್ರವಲ್ಲದೇ ಕಾರ್ಮಿಕರ ಹಣವೂ ಲೂಟಿ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಹಲವಾರು ವರ್ಷಗಳಿಂದ ಆಸ್ಪತ್ರೆ ಅಭಿವೃದ್ಧಿ ಸಮಿತಿಗೆ ಸ್ಥಳೀಯ ಕಾರ್ಮಿಕ ಸದಸ್ಯರನ್ನು ನೇಮಕ ಮಾಡಿಕೊಂಡಿಲ್ಲ. ಅಲ್ಲದೇ, ಹಲವಾರು ವರ್ಷಗಳಿಂದ ಸಭೆಯನ್ನೇ ಕರೆದಿಲ್ಲ. ಹೀಗಾಗಿ ಕಾರ್ಮಿಕರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಆದ್ದರಿಂದ ಈ ಕೂಡಲೇ ಸ್ಥಳೀಯ ಕಾರ್ಮಿಕರನ್ನು ಸದಸ್ಯರನ್ನಾಗಿ ನೇಮಿಸಬೇಕು. ಸಭೆ ಕರೆದು ಚರ್ಚಿಸಬೇಕು. ತಜ್ಞ ವೈದ್ಯರಾದ ಜನರಲ್ ಸರ್ಜರಿ, ಕಣ್ಣಿನ ತಜ್ಞರು, ಎಕ್ಸರೇ ತಜ್ಞರು, ಮಕ್ಕಳ ತಜ್ಞರು, ನುರಿತ ತಜ್ಞರು, ಅರವಳಿಕೆ ತಜ್ಞರು, ರಕ್ತ ಪರೀಕ್ಷಾ ಪ್ರಯೋಗಾಲಯದ ತಜ್ಞರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಡಯಾಲಿಸಿಸ್, ಅಲ್ಟ್ರಾಸೌಂಡ್, ಡಿಜಿಟಲ್ ಎಕ್ಸರೇ ಇಲ್ಲದ ಕಾರಣ ವಿವಿಧ ಕಡೆಗಳಿಂದ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಪ್ರಾದೇಶಿಕ ನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕು. ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಧರಣಿಯಲ್ಲಿ ಎಐಟಿಯುಸಿ ಹಾಗೂ ಶ್ರೀ ಆಂಜನೇಯ ಮಿಲ್ ಎಂಪ್ಲಾಯಿಸ್ ಯೂನಿಯನ್ನ ಮುಖಂಡರುಗಳಾದ ಆವರಗೆರೆ ಚಂದ್ರು, ಎಸ್.ಜಯಪ್ಪ, ಶಿವಕುಮಾರ್, ಕೃಷ್ಣಮೂರ್ತಿ, ಎಲ್.ರಮೇಶ್, ಚಿತ್ರಪ್ಪ, ಅಬ್ದುಲ್ ಅಜೀಜ್, ಶೇಷಮ್ಮ, ಕೃಷ್ಣಮೂರ್ತಿ, ಭೈರಮ್ಮ, ಮಂಜಮ್ಮ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
