ಹೊನ್ನಾಳಿ:
ಶಿಕ್ಷಕರು ಅಂಗವಿಕಲ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಹಾಗೂ ಶಿಕ್ಷಕರು ಅಂಗವಿಕಲ ಮಕ್ಕಳಿಗೆ ಧೈರ್ಯ ತುಂಬಿದರೆ ಮಕ್ಕಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಂಗವಿಕಲತೆಯನ್ನು ಹೊಂದಿರುವ ಅನೇಕರು ತಮ್ಮ ಸ್ವ ಸಾಮಥ್ರ್ಯದಿಂದ ದೊಡ್ಡ ಸಾಧನೆ ಮಾಡಿದ್ದಾರೆ. ಸಾಧನೆ ಮಾಡಲು ಸಹಕಾರ ಹಾಗೂ ಮಾರ್ಗದರ್ಶನ ಮುಖ್ಯ ಎಂದು ಹೇಳಿದರು.ಅಂಗವಿಕಲತೆ ಎನ್ನುವುದು ಶಾಪವಲ್ಲ. ವೈಜ್ಞಾನಿಕ ವೈಚಿತ್ರ್ಯ ಹಾಗೂ ವೈರುದ್ಧ್ಯಗಳಿಂದ ಕೆಲವು ಬಾರಿ ಅಂಗವಿಕಲತೆ ಉಂಟಾಗುತ್ತದೆ. ಇದು ಹುಟ್ಟಿನಿಂದಲೇ ಬರಬಹುದು ಇಲ್ಲವೇ ನಂತರದ ಸಮಯದಲ್ಲಿ ವಿವಿಧ ಕಾರಣಗಳಿಂದಾಗಿ ಬರಬಹುದು ಎಂದು ವಿವರಿಸಿದರು.
ಅಂಗವಿಕಲ ಮಕ್ಕಳನ್ನು ಪಡೆದ ಪೋಷಕರಿಗೆ ತೀವ್ರವಾದ ನೋವಾಗುವುದು ಸಹಜ. ಆದರೆ, ಆ ನೋವನ್ನು ತಡೆದುಕೊಂಡು ಮಕ್ಕಳ ಸೇವೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಂಗವಿಕಲರಿಗೆ ಅನೇಕ ಸವಲತ್ತುಗಳನ್ನು ಈಗ ನೀಡುತ್ತಿವೆ. ಅವುಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.ಬಿಇಒ ಜಿ.ಇ. ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಪಂ ಅಧ್ಯಕ್ಷೆ ಸುಲೋಚನಮ್ಮ ಫಾಲಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಗಿರಿಜಮ್ಮ, ಪಪಂ ಸದಸ್ಯ ಕೆ.ವಿ. ಶ್ರೀಧರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಕರಿಬಸಯ್ಯ, ಇಸಿಓಗಳಾದ ಮುದ್ದನಗೌಡ, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
