ಚಳ್ಳಕೆರೆ
ಸಾರ್ವಜನಿಕರ ಆರೋಗ್ಯದ ಬಗ್ಗೆ ಸದಾಕಾಲ ವಿಶೇಷ ಜಾಗೃತಿಯನ್ನು ವಹಿಸುತ್ತಿರುವ ಆರೋಗ್ಯ ಇಲಾಖೆಯ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕಿದೆ. ವಿಶೇಷವಾಗಿ ಆಗತಾನೇ ಹುಟ್ಟಿದ ಮಕ್ಕಳಿಂದ ಹಿಡಿದು 2 ವರ್ಷದ ಮಕ್ಕಳ ತನಕ ಯಾವುದೇ ರೋಗ ಸೊಂಕು ಉಂಟಾಗದಂತೆ ಇಂದ್ರ ಧನುಷ್ ಲಸಿಕೆ ಅಂದೋಲನ ಡಿ.2ರಿಂದ ಪ್ರಾರಂಭವಾಗಲಿದ್ದು, ಈ ಅಂದೋಲನ ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಕೈಜೋಡಿಸುವಂತೆ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮನವಿ ಮಾಡಿದರು.
ಅವರು, ಬುಧವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದ್ರ ಧನುಷ್ ಕಾರ್ಯಕ್ರಮ ಯಶಸ್ವಿ ಅನುಷ್ಠಾನದ ಬಗ್ಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಇಲಾಖೆ ಹಂತ ಹಂತವಾಗಿ ಅನೇಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲ್ಲೂಕಿನಾದ್ಯಂತ ಜನರ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ತಾಲ್ಲೂಕಿನಾದ್ಯಂತ ಈವರೆಗೆ ಕೇವಲ 192 ಲಸಿಕೆ ವಂಚಿತ ಮಕ್ಕಳು ಹಾಗೂ 18 ಗರ್ಭಿಣಿ ಮಹಿಳೆಯರು ಪತ್ತೆಯಾಗಿದ್ದು, ಡಿ.2ರಿಂದ 9ರ ತನಕ ಈ ಅಂದೋಲನವನ್ನು ನಡೆಸುವ ಸಂದರ್ಭದಲ್ಲಿ ನಗರದ ಹಾಗೂ ಗ್ರಾಮಾಂತರ ಪ್ರದೇಶ, ಗುಡ್ಡಗಾಡು ಪ್ರದೇಶಗಳು, ಅಲೆಮಾರಿ ಜನಾಂಗ ವಾಸಿಸುವ ಸ್ಥಳಗಳು, ಗ್ರಾಮಾಂತರ ಪ್ರದೇಶ ವ್ಯಾಪ್ತಿಯಿಂದ ಪ್ರತ್ಯೇಕವಾಗಿ ವಾಸಿಸುವ ಕುಟುಂಬಗಳು ಹೀಗೆ ಹಲವಾರು ರೀತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವರು.
ಈ ಕಾರ್ಯಕ್ರಮಕ್ಕೆ ಅಧಿಕಾರಿ ವರ್ಗದ ಜೊತೆಗೆ ಚುನಾಯಿತ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಸದಸ್ಯರು, ಮಹಿಳಾ ಸಂಘಗಳ ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ಈಗಾಗಲೇ ಎಲ್ಲಾ ಶಾಲೆಗಳಿಗೂ ಮಾಹಿತಿಯನ್ನು ನೀಡಿದ್ದು, ಡಿ.2 ರಿಂದ 9ರ ತನಕ ವಿಶೇಷವಾಗಿ ಪುಟ್ಟ ಮಕ್ಕಳು ಶಾಲೆಯಲ್ಲಿಯೇ ತಪ್ಪದೆ ಹಾಜರಿರುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಶಿಕ್ಷಣ ಇಲಾಖೆ ಹೆಚ್ಚು ಸಹಕಾರ ನೀಡಲಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಶಿಶು ಮತ್ತು ಮಹಿಳಾ ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ, ನಗರಸಭೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಎನ್.ಪ್ರೇಮಕುಮಾರ್ ಸ್ವಾಗತಿಸಿದರು. ಎಸ್.ಬಿ.ತಿಪ್ಪೇಸ್ವಾಮಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
