ಬೆಂಗಳೂರು
ಎಲೆಕ್ಟ್ರಿಕ್ ಉಪಕರಣಗಳನ್ನು ಶೇಖರಿಸಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ 50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವ ದುರ್ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ತಲಘಟ್ಟಪುರದ ವಿನಾಯಕ ಚಿತ್ರಮಂದಿರದ ಬಳಿ ಗೋಡಾನ್ಗೆ ರಾತ್ರಿ 1.45ರ ಸುಮಾರಿನಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದು, ಕೆಲ ಹೊತ್ತಿನಲ್ಲೇ ಇಡೀ ಗೋಡಾನ್ಗೆ ಆವರಿಸಿದ್ದ ಬೆಂಕಿಯಿಂದ ದಟ್ಟಹೊಗೆ ಹೊರಬರಲಾರಂಭಿಸಿದೆ.
ಸ್ಥಳೀಯರು ಬೆಂಕಿ ನೋಡಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಮುಂಜಾನೆವರೆಗೂ ಶ್ರಮಿಸಿ ಬೆಂಕಿ ನಂದಿಸಿವೆ.
ಗೋಡಾನ್ನಲ್ಲಿ ಯಾರೂ ಇಲ್ಲದೆ ಇದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಯಿಂದ ಸುಮಾರು 50 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕ್ ವಸ್ತುಗಳು ಸುಟ್ಟುಹೋಗಿವೆ ಎಂದು ಮಾಲೀಕ ವಿಕ್ರಂ ರಾಜ್ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಕೋಣನಕುಂಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
