ಶಿರಾ
ದೇಶಕ್ಕೆ ಅನ್ನ ನೀಡುವ ಅನ್ನದಾತನ ಬದುಕಿನಲ್ಲಿ ನೂರೆಂಟು ಸಮಸ್ಯೆಗಳಿದ್ದರೂ ಅಂತಹ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಮ್ಮನ್ನಾಳುವ ಸರ್ಕಾರಗಳು ಕೂಡ ವಿಫಲಗೊಂಡಿದ್ದು, ರೈತನ ಬದುಕನ್ನು ಹಸನುಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದ ಶ್ರೀ ಸಾಕ್ಷಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಕೈಗೊಳ್ಳಲಾಗಿದ್ದ 2018-19ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ರೈತ ದಿನಾಚರಣೆ ಹಾಗೂ ಕಿಸಾನ್ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶಾದ್ಯಂತ ರೈತ ದಿನವನ್ನು ಆಚರಣೆ ಮಾಡಲಾಗುತ್ತಿದೆಯಾದರೂ, ರೈತರ ಮೂಲ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುವಲ್ಲಿ ಸರ್ಕಾರಗಳೇ ವಿಫಲವಾಗಿರುವುದು ದುರಂತದ ಸಂಗತಿ. ದೇಶದ ಬೆನ್ನೆಲುಬು, ಅನ್ನದಾತ ಎಂದು ರೈತನನ್ನು ಹೊಗಳುವ ಸರ್ಕಾರಗಳು, ರೈತನು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಯಾವುದೇ ಖಾಸಗಿ ಕಾರ್ಖಾನೆಗಳು ತಾವು ನಿರ್ವಹಣೆ ಮಾಡುವ ವಸ್ತುಗಳ ಬೆಲೆಯನ್ನು ನಿರ್ಧರಿಸಿ ಮಾರುಕಟ್ಟೆಗೆ ಬಿಡುವ ಹಕ್ಕನ್ನು ಹೊಂದಿವೆದರೂ, ನಮ್ಮ ರೈತ ಬೆಳೆಯುವ ಯಾವುದೇ ಬೆಳೆಗೆ ರೈತನೆ ಬೆಲೆ ನಿಗದಿಪಡಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ. ಇದು ನಮ್ಮ ದೇಶದ ದುರಂತವೂ ಹೌದು ಎಂದರು.
ನಮ್ಮನ್ನಾಳುವ ಸರ್ಕಾರಗಳು ರೈತನು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡುವಂತಹ ಮಾರುಕಟ್ಟೆಗಳನ್ನು ಸೃಷ್ಟಿ ಮಾಡಬೇಕಿದೆ. ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ವಂಚನೆಯನ್ನು ನಿಗ್ರಹಗೊಳಿಸದೇ ಇದ್ದಲ್ಲಿ ರೈತನ ಬದುಕು ಎಂದೂ ಕೂಡ ಹಸನಾಗುವುದೇ ಇಲ್ಲ ಎಂದು ಬಿ.ಸತ್ಯನಾರಾಯಣ್ ಹೇಳಿದರು.
ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಮಾತನಾಡಿ, ಮಳೆ-ಬೆಳೆ ಇಲ್ಲದೆ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಬೆಳೆ ವಿಮಾ ಯೋಜನೆಯನ್ನು ಸಕಾಲಕ್ಕೆ ತಲುಪುವಂತೆ ಮಾಡುವ ಕೆಲಸವಾಗಬೇಕು ಎಂದರು.ಜಿಲ್ಲಾ ಹಾಲು ಒಕ್ಕೂಟದ ನಿದೇಶಕ ಎಸ್.ಆರ್.ಗೌಡ ಮಾತನಾಡಿ, ದೇಶದ ಅಭಿವೃದ್ಧಿಗೆ ರೈತರೇ ಜೀವಾಳ. ಇಡೀ ದೇಶಕ್ಕೆ ಶಕ್ತಿ ತುಂಬುವ ಕೆಲಸ ರೈತನಿಂದ ಆಗುತ್ತಿದೆ. ಅನೇಕ ರೈತ ಕುಟುಂಬದ ಮಕ್ಕಳೆ ಐ.ಎ.ಎಸ್. ಹಾಗೂ ಕೆ.ಎ.ಎಸ್.ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ವಿಶೇಷವೂ ಆಗಿದ್ದು, ಇದನ್ನು ಮನಗಂಡ ಸರ್ಕಾರಗಳು ರೈತ ಕುಟುಂಬಗಳಿಗೆ ಆಸರೆಯಾಗಬೇಕು ಎಂದರು.
ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ಜಿ.ಪಂ. ಸದಸ್ಯೆ ಗಿರಿಜಮ್ಮ ಶ್ರೀರಂಗಪ್ಪ ಯಾದವ್, ಕೃಷಿಕ ಸಮಾಜದ ಅಧ್ಯಕ್ಷ ಎನ್.ಸಿ.ಮಂಜುನಾಥ್, ನೇರಲಗುಡ್ಡ ತಿಮ್ಮಯ್ಯ, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ತಾ.ಪಂ. ಸದಸ್ಯ ಪುಟ್ಟರಾಜು, ಚಂದ್ರಶೇಖರ್, ತಾರೆಗೌಡ, ರೈತ ಸಂಘದ ಪದಾಧಿಕಾರಿಗಳಾದ ಪರಮಶಿವಯ್ಯ, ನಾದೂರು ಕೆಂಚಪ್ಪ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
