ಸರ್ಕಾರಗಳು ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು : ಕೆ ಎನ್ ಆರ್

ತುಮಕೂರು

    ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣ ಸಂಬಂಧ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು ಎಂದು ಸಕಾರವನ್ನು ಒತ್ತಾಯಿಸಿ ನ್ಯಾ. ಎ.ಜೆ. ಸದಾಶಿವ ಆಯೋಗ ಜಾರಿ ಹಕ್ಕೋತ್ತಾಯ ಸಮಿತಿ ಸೊಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿತ್ತು.

   ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಹೋರಾಟ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಕೆ.ಎನ್.ರಾಜಣ್ಣ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಒತ್ತಾಯಿಸಿ ಬಹಳ ದಿನದಿಂದ ಹೋರಾಟ ನಡೆಯುತ್ತಲೇ ಇದೆ.

   ನ್ಯಾಯುಯತ ಬೇಡಿಕೆಗಳಿಗೆ ಯಾವುದೇ ಸರ್ಕಾರ ಸ್ಪಂದನೆ ಮಾಡದಿದ್ದರೆ ಆ ಸಮುದಾಯಗಳಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಆದಷ್ಟು ಬೇಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

   ಈ ಬೇಡಿಕೆ ದಲಿತ ಸಮುದಾಯದ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ, ದಲಿತ ಸಮುದಾಯದಲ್ಲಿ ಇರುವ ಹಲವಾರು ಉಪಪಂಗಡಗಳು, ಶೋಷಣೆಗೆ ಒಳಗಾಗಿರುವ ಎಲ್ಲರಿಗೂ ಈ ವರದಿ ಅನುಷ್ಠಾನದ ಅಗತ್ಯವಿದೆ. ದಲಿತ ಸಮುದಾಯ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತಾ ಬಂದಿದೆ. ಸಂವಿಧಾನ ಬದ್ಧವಾದ ಹಕ್ಕುಗಳನ್ನು ಗಳಿಸಲು ತೀವ್ರವಾದ ಹೋರಾಟ ಮಾಡಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ಹೇಳಿದರು.

     ಯಾವುದೇ ರೀತಿಯ ಒಳಸಂಚು, ರಾಜಕೀಯ ಪಕ್ಷಗಳ ಚಿತಾವಣೆಗೆ ಯಾರೂ ಕೂಡಾ ಹೆದರಬಾರದು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ಅಗತ್ಯತೆ ಇದ್ದೇ ಇರುತ್ತದೆ. ಈ ಹೋರಾಟವನ್ನು ಎಲ್ಲರೂ ಜತೆಗೂಡಿ ಮಾಡೋಣ. ಈ ಅಹೋರಾತ್ರಿ ಧರಣಿಗೆ ನನ್ನ ಬೆಂಬಲ ಸದಾಕಾಲ ಇರುತ್ತದೆ. ಒಳಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿ ತಾಲ್ಲೂಕು ಮಟ್ಟದಲ್ಲೂ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.

    ದಲಿತ ಮುಖಂಡರಾದ ವಾಲೆಚಂದ್ರಯ್ಯ ಮಾತನಾಡಿ, ಒಳಮೀಸಲಾತಿ ವರ್ಗೀಕರಣ ಜಾರಿಯಾಗಬೇಕು. ನಾವು ಈ ದೇಶದ ಮೂಲ ವಾಸಿಗಳು. ನಮಗೆ ಆಗಿರುವ ಅನ್ಯಾಯ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಸಂಖ್ಯೆಯನ್ನೂ ಸಹ ಹೆಚ್ಚಿಸಬೇಕಾಗಿದೆ ಎಂದರು.

    ಒಳಮೀಸಲಾತಿ ವರ್ಗೀಕರಣ ಜಾರಿಯಾಗದಿದ್ದರೆ ನಾವೆಲ್ಲಾ ಪ್ರಾಣ ತ್ಯಾಗ ಮಾಡಲೂ ಸಿದ್ದರಾಗಿದ್ದೇವೆ. ಮಾದಿಗ ಜನಾಂಗವನ್ನು ಕೇವಲ ವೋಟ್ ಬ್ಯಾಂಕ್ ಮಾತ್ರ ಮಾಡಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಸೌಲಭ್ಯ ಒದಗಿಸಿಕೊಡುವಲ್ಲಿ ಮಾತ್ರ ನಿರ್ಲಕ್ಷ್ಯ ತೋರಿವೆ ಎಂದು ದೂರಿದರು.

    ನಮ್ಮ ಜನಾಂಗ ಬಹಳ ಹಿಂದುಳಿದಿದೆ. ಮಾದಿಗ ಜನಾಂಗ ಬಿಜೆಪಿ, ಕಾಂಗ್ರೆಸ್ ಎಲ್ಲ ಪಕ್ಷಗಳಿಗೂ ಮತ ಹಾಕಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಮುಂದಾಗಲೇಬೇಕು ಎಂದು ಒತ್ತಾಯಿಸಿದರು. ಅಹೋರಾತ್ರಿ ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮೆಳೆಕಲ್ಲಹಳ್ಳಿ, ಜೆಸಿಬಿ ವೆಂಕಟೇಶ್, ರಾಮಯ್ಯ, ಮೋಹನ್ ಪರಮೇಶ್, ಶಿವರಾಜು, ಬಂಡೆ ಕುಮಾರ್, ಮುನಿರಾಜು, ರಾಮಮೂರ್ತಿ, ಕೆಂಪರಾಜು ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link