ಬೆಂಗಳೂರು
ಕೋವಿಡ್-19 ರ ಲಾಕ್ಡೌನ್ ಹಾಗೂ ನಿಷೇಧಾಜ್ಞೆ ಸಂದರ್ಭದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದ ಸಂದರ್ಭದಲ್ಲಿ ಅಕ್ರಮ ಮಾರಾಟಕ್ಕೆ ಅವಕಾಶ ಕಲ್ಪಿಸಲು ಕೆಲ ತಂಬಾಕು ಸಗಟು ಮಾರಾಟಗಾರರಿಂದ ಪೊಲೀಸರು ಲಂಚ ಪಡೆದಿದ್ದ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಬೆಂಗಳೂರು ನಗರದ ಸಿಸಿಬಿ ಘಟಕದಲ್ಲಿನ ಕೆಲ ಪೊಲೀಸ್ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಸಹಾಯದಿಂದ ಕೆಲ ಡಿಸ್ಟ್ರಿಬ್ಯೂಟರ್ಸ್ ರವರೊಂದಿಗೆ ಸಂಪರ್ಕವಿರಿಸಿ ತಮ್ಮ ಅಧಿಕಾರವನ್ನು ದುರುಯೋಗಪಡಿಸಿಕೊಂಡು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿ ಲಂಚದ ಹಣ ಪಡೆದಿರುವುದು ಇಲಾಖಾ ಪೂರ್ವಾಭಾವಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಇದೇ ರೀತಿ ಎನ್-95 ನಕಲಿ ಮಾಸ್ಕ್ ಮಾರಾಟ ಜಾಲದ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡುವ ನೆಪದಲ್ಲಿಯೂ ಸಹ ಲಂಚದ ಹಣ ಪಡೆದಿರುವುದು ಇಲಾಖಾ ಪೂರ್ವಾಭಾವಿ ವಿಚಾರಣೆ ವೇಳೆ ಕಂಡು ಬಂದಿದೆ.
ಈ ಮೇಲ್ಕಂಡ ಪ್ರಕರಣಗಳ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪತ್ರ ಬರೆದು ತಂಬಾಕು ಉತ್ಪನ್ನಗಳ ಡಿಸ್ಟ್ರಿಬ್ಯೂಟರ್ಸ್ ರವರಿಂದ ಪಡೆದ ಲಂಚದ ಪಡೆದ ಮತ್ತು ಎನ್-95 ನಕಲಿ ಮಾಸ್ಕ್ ಮಾರಾಟ ಜಾಲದ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸಕ್ಷಮ ಪ್ರಾಧಿಕಾರ ಪೂರ್ವಾನುಮತಿ ನೀಡಿದೆ.
ಸಿಸಿಬಿಯ ಆರ್ಥಿಕ ಅಪರಾಧ ದಳ ಎಸಿಪಿ ಎಂ.ಪ್ರಭುಶಂಕರ್, ಬೆಂಗಳೂರಿನಲ್ಲಿ ಸಿಗರೇಟ್ಗಳನ್ನು ಡಿಸ್ಟ್ರಿಬ್ಯೂಟ್ ಮಾಡುವ ಡಿಸ್ಟ್ರಿಬ್ಯೂಟಿಂಗ್ ಏಜೆನ್ಸಿಯ ಮಾಲೀಕರೊಬ್ಬರಿಂದ ಹಾಗೂ ಇತರೆ ಡಿಸ್ಟ್ರಿಬ್ಯೂಟರ್ಗಳ ಪರವಾಗಿ ಲಾಕ್ಡೌನ್ ಅವಧಿಯಲ್ಲಿ ನಗರದಾದ್ಯಂತ ಇರುವ ಅಂಗಡಿಗಳಿಗೆ ಹೆಚ್ಚಿನ ಬೆಲೆಗೆ ಸಿಗರೇಟ್ಗಳನ್ನು ವಿತರಿಸಿ ಅಕ್ರಮ ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದರು.ಇವರು ಮದ್ಯವರ್ತಿಗಳ ಮುಖೇನ ಲಂಚದ ಹಣ ಸ್ವೀಕರಿಸಿದ್ದು, ಈ ಬಗ್ಗೆ ಅರೋಪಿಗಳಾದ ಎಂ.ಪ್ರಭುಶಂಕರ್, ಇನ್ಸ್ಪೆಕ್ಟರ್ಗಳಾದ ಆರ್.ಎಂ.ಅಜಯ್, ನಿರಂಜನ್ಕುಮಾರ್ ಮತ್ತಿತರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಎಂ.ಪ್ರಭುಶಂಕರ್ ಅವರು ಬೆಂಗಳೂರಿನ ಹನುಮಂತನಗರದಲ್ಲಿ ಡಿಸ್ಟ್ರಿಬ್ಯೂಟರ್ ಒಬ್ಬರನ್ನು ಸಿಸಿಬಿ ಕಚೇರಿಗೆ ಕರೆಯಿಸಿಕೊಂಡು ಲಾಕ್ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟ ಮಾಡುತ್ತಿರುವ ವಿಚಾರದಲ್ಲಿ ಲಂಚದ ಹಣಕ್ಕಾಗಿ ಒತ್ತಾಯಿಸಿ ಮದ್ಯವರ್ತಿಯ ಮುಖೇನ ಲಂಚದ ಹಣವನ್ನು ಸ್ವೀಕರಿಸಿದ್ದು, ಈ ಬಗ್ಗೆ ಅರೋಪಿ ಎಂ.ಪ್ರಭುಶಂಕರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಎನ್-95 ನಕಲಿ ಮಾಸ್ಕ್ ಜಾಲದ ಕುರಿತಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡುವ ನೆಪದಲ್ಲಿ ಲಂಚದ ಹಣ ಸ್ವೀಕರಿಸಿದ್ದಾರೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಇನ್ಸ್ಪೆಕ್ಟರ್ ಆರ್.ಎಂ.ಅಜಯ್ ಹಾಗು ಇತರರ ವಿರುದ್ದವೂ ಪ್ರಕರಣ ದಾಖಲಾಗಿದೆ. 3 ಪ್ರಕರಣಗಳು ದಾಖಲಾಗಿದ್ದು, ಪ್ರಕರಣದಲ್ಲಿ ಅಧಿಕಾರಿಗಳ ಮತ್ತು ಖಾಸಗಿ ವ್ಯಕ್ತಿಗಳ ಪಾತ್ರದ ಕುರಿತಂತೆ ತನಿಖೆ ಮುಂದುವರೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ