ದಾವಣಗೆರೆ
ರೈತರ ಸಂಕಷ್ಟಗಳಿಗೆ ಸರಿಯಾಗಿ ಸ್ಪಂದಿಸದೇ ಗ್ರಾಮಲ್ಲೆಕ್ಕಾಧಿಕಾರಿ ಮತ್ತು ಕಂದಾಯ ಅಧಿಕಾರಿಗಳು ರೈತರ ಪಾಲಿಗೆ ಮಾರಕವಾಗಿದ್ದಾರೆ ಎಂದು ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಬಾಡ ಗ್ರಾಮದ ರೈತ ರಾಜಪ್ಪ ಎಂಬುವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ, ಅಲ್ಲಿನ ಗ್ರಾಮಲೆಕ್ಕಾಧಿಕಾರಿ ಮತ್ತು ಕಂದಾಯ ಅಧಿಕಾರಿ ಸರಿಯಾಗಿ ಮಹಜರು ಮಾಡದೇ, ಮೃತ ರೈತ ಕೈಗಡ ಸಾಲ ಮಾತ್ರ ಹೊಂದಿದ್ದರೆಂಬುದಾಗಿ ವರದಿ ನೀಡಿರುವ ಕಾರಣ ಈ ಆತ್ಮಹತ್ಯೆ ಪ್ರಕರಣದಲ್ಲಿ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಪಪ್ಪ ಬಿ. ಮುದಗಲ್, ಆತ್ಮಹತ್ಯೆ ಘಟನೆ ಸಂಭವಿಸಿದ ಮೂರು ತಿಂಗಳೊಳಗೆ ಪ್ರಕರಣವನ್ನು ಮರು ಪರಿಶೀಲಿಸುವಂತೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಮೃತ ರೈತ ಕೈಗಡ ಸಾಲ ಹೊಂಡಿರುವುದರಿಂದ ಆತ್ಮಹತ್ಯೆ ಪರಿಶೀಲನಾ ಸಭೆಯಲ್ಲಿ ಈ ಪ್ರಕರಣವನ್ನು ತಿಸ್ಕರಿಸಲಾಗಿದೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಯಿಸಿದ ಅಧ್ಯಕ್ಷೆ ಶೈಲಜಾ ಬಸವರಾಜ್, ಆ ರೈತ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಎನ್ನುವುದಕ್ಕೆ ಬ್ಯಾಂಕ್ ಮತ್ತು ಸೊಸೈಟಿಯಲ್ಲಿ ಬೆಳೆಸಾಲ, ಕೈಗಡ ಸಾಲ ಇದೆ. ಇದನ್ನು ಪರಿಶೀಲನೆ ನಡೆಸದೇ ವರದಿಯನ್ನು ನೀಡಿದ ಪರಿಣಾಮ ಆ ರೈತನ ಕುಟುಂಬಕ್ಕೆ ತಲುಪಬೇಕಾದ ಪರಿಹಾರ ತಲುಪುತ್ತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ನಿರ್ವಹಿಸುವ ಕಾರ್ಯವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಈ ವೇಳೆ ಜಿ ಪಂ ಸಿಇಓ ಹೆಚ್.ಬಸವರಾಜೇಂದ್ರ, ಮತ್ತೊಮ್ಮೆ ಅಪೀಲು ಹಾಕಿ, ಪುನಃ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು ಮೃತ ರೈತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕರ್ನಾಟಕ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರ ಹರಿಹರ ಹೋಬಳಿಗೆ ಸರಬರಾಜು ಮಾಡಿದ ಭತ್ತದ ಬಿತ್ತನೆ ಬೀಜ (ಬಿಟಿಪಿ 5204) ಕಲಬೆರೆಕೆ ಹೊಂದಿರುವುದಾಗಿ ಭಾನುವಳ್ಳಿ, ಸಾಲಕಟ್ಟೆ ಹಾಗೂ ಇತರೆ ಗ್ರಾಮದವರು ದೂರು ನೀಡಿದ ಅರ್ಜಿಯನ್ವಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದಿಂದ ನಿಯೋಜನೆಗೊಂಡ ವಿಜ್ಞಾನಿಗಳೊಂದಿಗೆ ಸಮಸ್ಯಾತ್ಮಕ ತಾಲೂಕುಗಳನ್ನು ಭೇಟಿ ಮಾಡಿ ವರದಿ ಪಡೆಯಲಾಗಿದ್ದು, ವರದಿಯಲ್ಲಿರುವಂತೆ ಶೇ.20.74 ಇತರೆ ಭತ್ತ ತಳಿಗಳು ಬಿಪಿಟಿ 5204 ಭತ್ತದೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟವರನ್ನು ನ್ಯಾಯಾಂಗ ಕ್ರಮಕ್ಕೆ ನೀಡಲಾಗಿದೆ ಎಂದು ಶರಣಪ್ಪ ಮುದಗಲ್ ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷ ಸಿ.ಸುರೇಂದ್ರನಾಯ್ಕ್ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಿಮೆ ಪಾವತಿಸಿದವರಲ್ಲಿ ಕೆಲವರಿಗೆ ಪರಿಹಾರ ಬಂದಿದೆ, ಕೆಲವರಿಗೆ ಬಂದಿಲ್ಲ. ಕೆಲವು ರೈತರಿಗೆ ವಿಮೆ ಮೊತ್ತ ಬಾರದಿರುವುದಕ್ಕೆ ಕಾರಣ ಏನು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಜಂಟಿ ನಿರ್ದೇಶಕ, ನಮಗೆ ಯಾವ ಯಾವ ರೈತರಿಗೆ ಪರಿಹಾರ ನೀಡಲಾಗಿದೆ ಎಂಬ ಪಟ್ಟಿ ಮಾತ್ರ ಬರಲಿದೆ. ಹಾಗೂ ಅದರಲ್ಲಿ ಆಯ್ಕೆಯಾಗದ ರೈತರ ಆಧಾರ್ಕಾರ್ಡ್, ಬ್ಯಾಂಕ್ ಅಕೌಂಟ್ಗೆ ಲಿಂಕ್ ಸೇರಿದಂತೆ ಇತರೆ ದೋಷಗಳ ಕಾರಣಗಳಿವೆ. ಈ ಪಟ್ಟಿಯನ್ನು ತಮಗೆ ತಲುಪಿಸಲಾಗುವುದು ಎಂದರು.
ಜಿ.ಪಂ. ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ನೀಡುವ ಸಬ್ಸಿಡಿ ಮೊತ್ತವು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್ ಮಾತನಾಡಿ, ಪ್ರಕೃತಿ ವಿಕೋಪ ಮತ್ತು ಬರಗಾಲದಿಂದ ಹಾನಿಗೊಳಗಾಗಿರುವ ತೋಟಗಾರಿಕೆ ಬೆಳೆಗಳಿಗೆ ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶಕ್ಕೆ ಅಲ್ಲಿ ಅವಕಾಶ ಇಲ್ಲ ಎಂದರು.
2018-19 ನೇ ಸಾಲಿನಲ್ಲಿ 3 ಕೋಟಿ ರೂ. ಅನುದಾನ ಬಂದಿದ್ದು, ಬಾಕಿ ಇರುವ ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಇದರಲ್ಲಿ ರೂ.31 ಲಕ್ಷ ಹಲವು ಸಮಸ್ಯೆಗಳಿಂದ ಬಳಕೆಯಾಗದೇ ಸರ್ಕಾರಕ್ಕೆ ವಾಪಾಸ್ಸಾಗಿದೆ. ಇತರೆ ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯು ಈ ವಿಚಾರದಲ್ಲಿ ಪ್ರಗತಿ ಸಾಧಿಸಿದೆ ಎಂದ ತೋಟಗಾರಿಕೆ ಇಲಾಖೆ ನಿರ್ದೇಶಕ, ಸಮಯಕ್ಕೆ ಸರಿಯಾಗಿ ಹಣ ಅರ್ಹ ರೈತರಿಗೆ ಅನುದಾನ ನೀಡಲು ಸರ್ಕಾರದಿಂದ ಅನುದಾನ ಬರುವುದಿಲ್ಲ.
ರೈತರಿಗೆ ಸಮಯಕ್ಕುನುಗುಣವಾಗಿ ಸಬ್ಸಿಡಿಯನ್ನು ನೀಡಲು ವಿಳಂಬವಾಗುತ್ತಿದೆ. ಸರ್ಕಾರ ಅನುದಾನ ನೀಡಿದಲ್ಲಿ ಬಂದ ಅನುದಾನವೆಲ್ಲವೂ ರೈತರ ಬಾಕಿ ಮೊತ್ತಕ್ಕೆ 10 ದಿನಗಳಲ್ಲಿ ಜಮಾ ಮಾಡಲಾಗುವುದು ಎಂದರು.ಸಿಇಓ ಹೆಚ್.ಬಸವರಾಜೇಂದ್ರ ಮಾತನಾಡಿ, ಬಂದ ಪ್ರಸ್ತಾವನೆ ಹಾಗೂ ಕ್ರಿಯಾ ಯೋಜನೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಇನ್ನು ಹತ್ತು ದಿನಗಳಲ್ಲಿ ಬರುವ ಎಲ್ಲಾ ಕ್ರಿಯಾಯೋಜನೆಗಳನ್ನು ಪರಿಶೀಲನೆ ನಡೆಸಿ ಸೂಕ್ತ ಎನಿಸಿದರೆ ಅನುಮೋದನೆ ನೀಡಲಾಗುವುದು. ಎಲ್ಲಾ ಇಲಾಖೆಗಳು ಸಹ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇದೇ ಕ್ರಮವನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಸದಸ್ಯೆ ಜೆ.ಸವಿತಾ, ಜಗಳೂರು ತಾಲೂಕಿನಲ್ಲಿ ಇನ್ನು ಬಾಕಿ ಬಿಲ್ಲುಗಳಿವೆ. ಅವುಗಳ ಪಾವತಿ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮೀಣ ನೀರು ಸರಬರಾಜು ವಿಭಾಗದ ರಾಜು, ಇನ್ನೊಂದು ವಾರದಲ್ಲಿ ಎಲ್ಲಾ ಬಿಲ್ಲುಗಳಿಗೆ ಐಎಂಎಸ್ ಆದ ನಂತರ ಪಾವತಿ ಮಾಡಲಾಗುವುದು ಎಂದರು.
ಜಿ.ಪಂ. ಉಪಾಧ್ಯಕ್ಷ ಸುರೇಂದ್ರನಾಯ್ಕ್ ಮಾತನಾಡಿ, ಬೋರ್ವೆಲ್ ರಿಚಾರ್ಜ್ಗೆ ವೈಯಕ್ತಿಕವಾಗಿ ಮಾಡಿದರೆ 18 ಸಾವಿರ, ಗ್ರಾ.ಪಂ ವ್ಯಾಪ್ತಿಯ ಬೋರ್ವೆಲ್ಗಳಿಗೆ ಮಾಡಿದರೆ 70 ಸಾವಿರ ಅನುದಾನ ನೀಡಲಾಗುತ್ತಿದೆ. ಬೋರ್ವೆಲ್ ರಿಚಾರ್ಜ್ ಕಾರ್ಯ ಎರಡು ಒಂದೇ ಯಾಗುತ್ತದೆ ಅಲ್ಲವೇ. ಸರ್ಕಾರಿ ಬೋರ್ವೆಲ್ಗಳಿಗೆ ರಿಚಾರ್ಜ್ ಮಾಡಲು ಆಳ, ಬಳಕೆಯಲ್ಲಿ ಉಪಕರಣ ಹೆಚ್ಚರಿಬಹುದು. ಆದರೆ ಕೆಲಸ ಮಾತ್ರ ಒಂದೆ. ರೈತರ ವೈಯಕ್ತಿಕ ಕಾಮಗಾರಿಗೂ ಹೆಚ್ಚನ ಅನುದಾನ ನೀಡಬೇಕು. ರೈತನ ಏಳಿಗೆಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ಸಿಇಓ ಬಸವರಾಜೇಂದ್ರ ಪ್ರತಿಕ್ರಯಿಸಿ, ಈ ಕುರಿತು ಸರ್ಕಾರಕ್ಕೆ ಮನವಿ ಕಳುಹಿಸುವುದಾಗಿ ತಿಳಿಸಿ, ಸರ್ಕಾರ ಅನುಮತಿ ನೀಡಿದಲ್ಲಿ ಜಗಳೂರು ತಾಲೂಕಿಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕರ್ನಾಟಕದಲ್ಲಿ ಪ್ರಾರಂಭವಾಗಿಲ್ಲದ 9 ಕೇಂದ್ರಗಳ ಪೈಕಿ ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿಯು ಒಂದಾಗಿದೆ. ಕಂಟ್ರಾಕ್ಟ್ರ್ ಕುಶಾಲ್ ಶೆಟ್ಟಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಕಡತವು ಕಮಿಷನರ್ ಹಂತದಲ್ಲಿತ್ತು. ಇನ್ನೊಂದು ವಾರದಲ್ಲಿ ಖುದ್ದಾಗಿ ಹೊನ್ನಾಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆಂದು ಮಾಹಿತಿ ನೀಡಿದರು.
ಸದಸ್ಯ ಎಂ.ಆರ್. ಮಹೇಶ್ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಮಳೆ ಬಂದು ಸೊಳ್ಳೆಗಳು ಹೆಚ್ಚಾಗಿವೆ.. ಅಲ್ಲಿನ ಜನರಿಗೆ ಮಲೇರಿಯಾ ರೋಗದ ಕುರಿತು ಅರಿವು ಮೂಡಿಸಿ ಎಂದರು.ಜಿ.ಪಂ. ಸದಸ್ಯೆ ಜೆ.ಸವಿತಾ ಮಾತನಾಡಿ, ಜಗಳೂರು ತಾಲೂಕಿನಲ್ಲಿ ಸರಿಯಾಗಿ ಡಾಕ್ಟರ್ಗಳು ಕಾರ್ಯ ನಿರ್ವಹಿಸುವುದಿಲ್ಲ. ಇನ್ನು ನರ್ಸ್ಗಳದ್ದು ಸಹ ಇದೇ ಹಣೆಬರಹವಾಗಿದೆ. ಒಟ್ಟಿನಲ್ಲಿ ಜಗಳೂರಿನಲ್ಲಿ ಯಾವ ಇಲಾಖೆಯ ಅಧಿಕಾರಿಗಳಿಗೂ ಕಾರ್ಯನಿರ್ವಹಿಸಲು ಇಷ್ಟವಿದ್ದಂತ್ತಿಲ್ಲ. ಅಣಬೂರು ವ್ಯಾಪ್ತಿಯಲ್ಲಿ 5 ಗ್ರಾಮ ಪಂಚಾಯಿತಿಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಮತ್ತೊಂದು ಪ್ರಾಥಮಿಕ ಕೇಂದ್ರದ ಅವಶ್ಯಕತೆಯಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೇ ಸಲ್ಲಿಸಲು ಹಿಂದೆ ಇದ್ದ ಅಧಿಕಾರಿಗಳಿಗೂ ತಿಳಿಸಿದರೂ ಕ್ರಮವಹಿಸಿಲ್ಲ. ನೀವಾದರೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮೇಲಾಧಿಕಾರಿ ಮತ್ತು ಜನಪ್ರತಿನಿಧಿಗಳನ್ನು ನಾವುಗಳು ಭೇಟಿ ಮಾಡಿ ಮುಂದಿನ ಕ್ರಮವನ್ನ ತೆಗೆದುಕೊಳ್ಳುತ್ತೇವೆ ಎಂದರು.
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, 2018-19ನೇ ಸಾಲಿನ ಪೀಠೋಪಕರಣಗಳನ್ನು ಗುತ್ತಿಗೆದಾರರು ಈಗಾಗಲೇ ಶಾಲೆಗಳಿಗೆ ಸರಬರಾಜು ಮಾಡಿದ್ದಾರೆ. ಪ್ರತಿ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು ಹಾಗೂ ಶೌಚಾಲಯ ನಿರ್ವಹಣೆಗೆ ಕಿರಿಯ ಪ್ರಾಥಮಿಕ ಶಾಲೆಗಳಿಗೆ 3 ಸಾವಿರ ರೂ. ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ. 4 ಸಾವಿರ ಹಾಗೂ ಪ್ರೌಢಶಾಲೆಗಳಿಗೆ ರೂ. 4,300 ಗಳ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ಸಿಇಓ ಹೆಚ್.ಬಸವರಾಜೇಂದ್ರ ಮಾತನಾಡಿ, ನೀವು ಇಲಾಖೆಯಿಂದ ಶಾಲೆಗಳಿಗೆ ನೀಡುವ ಅನುದಾನವು ಅಗತ್ಯ ಸೌಕರ್ಯಗಳಿಗೆ ಬಳಕೆಯಾಗದೇ ಪೋಲಾಗುತ್ತಿದೆ. ಪ್ರತಿ ಕಾಮಗಾರಿ ನಿರ್ಮಾಣದ ವೇಳೆ ಸ್ಥಳಕ್ಕೆ ಭೇಟಿ ನೀಡಿ ಮೊದಲು ಪರಿಶೀಲನೆ ನಡೆಸಿ. ಕೆಲವು ದಿನಗಳ ಹಿಂದೆ ಒಂದು ಶಾಲೆಗೆ ಭೇಟಿ ನೀಡಿದಾಗ 300 ವಿದ್ಯಾರ್ಥಿಗಳಿಗೆ ಕೇವಲ ಒಂದು ಶೌಚಾಲಯವಿದೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.ಸಭೆಯಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಜಗದೀಶ್, ಮುಖ್ಯ ಲೆಕ್ಕಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
