ಹಿಂದೂ ಮಹಾ ಗಣಪತಿಗೆ ಅದ್ದೂರಿ ವಿದಾಯ

ದಾವಣಗೆರೆ

    ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆ ಶನಿವಾರ ದೇವನಗರಿಯಲ್ಲಿ ಅದ್ದೂರಿಯಾಗಿ ನಡೆಯಿತು.

    ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ಮಾದರಿಯಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿ ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಹಿಂದು ಮಹಾ ಗಣಪತಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು, ಬಿಜೆಪಿ ಯುವ ಮುಖಂಡ ಬಿ.ಜೆ.ಅಜಯಕುಮಾರ್, ಪಾಲಿಕೆ ಮಾಜಿ ಸದಸ್ಯರುಗಳಾದ ಶಿವಗಂಗಾ ಬಸವರಾಜ್, ಡಿ.ಕೆ.ಕುಮಾರ್ ಮತ್ತಿತರರು ಶ್ರೀಗಣಪತಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

     ಹೈಸ್ಕೂಲ್ ಮೈದಾನದಿಂದ ಆರಂಭವಾದ ಹಿಂದೂ ಮಹಾ ಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯು ಅಕ್ಕಮಹಾದೇವಿ ರಸ್ತೆ (ಎವಿಕೆ ರಸ್ತೆ), ನಾಯಕ ಹಾಸ್ಟೆಲ್ ಎದುರಿನ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ಜಯದೇವ ವೃತ್ತಕ್ಕೆ ಶೋಭಯಾತ್ರೆ ಸಮಾಗಮಾಗೊಂಡಾಗ ಅಂದಾಜು ನಾಲ್ಕು ಗಂಟೆಯಾಗಿತ್ತು. ತದ ನಂತರ ಕುವೆಂಪು ರಸ್ತೆ(ಲಾಯರ್ ರಸ್ತೆ)ಯ ಮೂಲಕ ಪಿಬಿ ರಸ್ತೆ ಸೇರಿದ ಮೆರವಣಿಗೆಯು ರಾಜನಹಳ್ಳಿ ಹನುಮಂತಪ್ಪ ಕಲ್ಯಾಣ ಮಂಟಪ, ಅರುಣ ಚಿತ್ರ ಮಂದಿರ, ವಿನೋಬ ನಗರದ ಮೂಲಕ ಪಿಬಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ, ಅಲ್ಲಿಂದ ಬಾತಿಕೆರೆಗೆ ತೆರಳಿ ಮೂರ್ತಿಯ ವಿಸರ್ಜನೆ ಮಾಡಲಾಯಿತು.

    ಮೆರವಣಿಗೆಯ ಆರಂಭದಲ್ಲಿ ಶ್ರೀಶೈಲ ಮಠದ ಆನೆ ಗಾಂಭಿರ್ಯದ ಹೆಜ್ಜೆ ಹಾಕುತ್ತಾ ಸಾಗಿತು. ಅದರ ಹಿಂದೆ ಡೊಳ್ಳು ಕುಣಿತ, ನಂದಿಕೋಲು, ಚಂಡೆ, ಡ್ರಮ್ ಇನ್ನಿತರೇ ಕಲಾ ತಂಡಗಳು ಭಾಗವಹಿಸಿದ್ದವು. ಅಲ್ಲದೇ, ಅಂಬೇಡ್ಕರ್, ಬುದ್ಧ, ಶಿವ, ಬಸವಣ್ಣ, ಶಿವಾಜಿ ಸೇರಿದಂತೆ ಇತರೆ ದಾರ್ಶನಿಕರ ಉತ್ಸವ ಮೂರ್ತಿಗಳು ಶೋಭಾಯಾತ್ರೆಗೆ ವಿಶೇಷ ಕಳೆ ತುಂಬಿದ್ದವು.

    ಪುರುಷರಿಗಾಗಿ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಈ ಡಿಜೆಗಳಿಂದ ಹೊರಡುತ್ತಿದ್ದ ವಿವಿಧ ಹಾಡುಗಳ ಸದ್ದಿಗೆ ತಕ್ಕಂತೆ ಯುವಕರು-ಯುವತಿಯರು ಬಿಸಿಲನ್ನೂ ಲೆಕ್ಕಿಸದೇ ಹುಚ್ಚೆದ್ದು ಕುಣಿದರು. ಅದರಲ್ಲೂ ಮತ್ತೆ, ಮತ್ತೆ ಕೇಳಿಬಂದ ಬನಾಯೆಂಗೇ ಮಂದಿರ್ ಹಾಡಿಗೆ ಯುವಕರು, ಯುವತಿಯರು, ಚಿಣ್ಣರು ಕುಣಿದು ಕುಪ್ಪಳಿಸಿದರು.

    ಮೆರವಣಿಗೆ ಸಾಗುತ್ತಿದ್ದ ಮಾರ್ಗದ ಉದ್ದಕ್ಕೂ ಪಕ್ಕದಲ್ಲಿದ್ದ ಕಟ್ಟಡ, ಮರಗಳ ಮೇಲೆ ನಿಂತಿದ್ದ ಸಾರ್ವಜನಿಕರು ಸಿಳ್ಳೆ, ಕೇಕೆ ಹಾಕುವ ಮೂಲಕ ಯುವಕ-ಯುವತಿಯರನ್ನು ಹುರಿದುಂಬಿದಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಶೋಭಾಯಾತ್ರೆ ತೆರಳಿದ ಎವಿಕೆ ರಸ್ತೆ, ಅಂಬೇಡ್ಕರ್ ಸರ್ಕಲ್, ಜಯದೇವ ವೃತ್ತ, ಗಾಂಧಿ ವೃತ್ತ, ಅರುಣ ಸರ್ಕಲ್ ಹೀಗೆ ಹಲವು ಸರ್ಕಲ್‍ಗಳು ಕೇಸರಿ ಬಟ್ಟೆಯಿಂದ ಅಲಂಕೃತಗೊಂಡಿದ್ದವು. ಅಲ್ಲದೇ ಮಾರ್ಗದ ಉದ್ದಕ್ಕೂ ಅಳವಡಿಸಿದ್ದ ನೂರಾರು ಫ್ಲೆಕ್ಸ್‍ಗಳು ಸ್ವಾಗತ ಕೋರುತ್ತಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿ ದಣಿದವರ ದಾಹ ಹಾಗೂ ಹಸಿವು ನೀಗಿಸಲು ಅಲ್ಲಲ್ಲಿ ನೀರು, ಪಾನಕ, ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದರು.

      ಇನ್ನೂ ಶೋಭಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಡ್ರೋಣ್, ಸಿಸಿ ಕ್ಯಾಮೇರಾಗಳ ಜೊತೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಿತ್ತು.ಶೋಭಯಾತ್ರೆಯಲ್ಲಿ ಭಾಗವಹಿಸಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಯುವಕರು ಸ್ವಯಂ ಪ್ರೇರಿತರಾಗಿ, ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link