ದಾವಣಗೆರೆ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಿದ್ದಪಡಿಸಿರುವ ಗಾಂಧಿಯವರ ಜೀವನ ಸಾಧನೆಯ ವಿವಿಧ ಘಟ್ಟಗಳನ್ನು ಗುರುತಿಸುವ ವಿನೂತನ ಗಾಂಧಿ ಸ್ತಬ್ದ ಚಿತ್ರ ವಾಹನವು ಇಂದು ಮಧ್ಯಾಹ್ನ 2 ಗಂಟೆಗೆ ಹರಪನಹಳ್ಳಿ ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದ್ದು ಉಪವಿಭಾಗಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಪುಷ್ಪಮಾಲೆ ಅರ್ಪಿಸುವ ಮೂಲಕ ಸ್ವಾಗತಿಸಿದರು.
ಗಾಂಧೀ-150 ಅಭಿಯಾನ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಉದ್ಘಾಟನೆಗೊಂಡಿರುವ 2 ಸ್ತಬ್ದ ಚಿತ್ರಗಳು ‘ಸತ್ಯ ಮಾರ್ಗ’ ಹಾಗೂ ‘ಶಾಂತಿ ಮಾರ್ಗ’ ಎಂಬ ಎರಡು ಮಾರ್ಗಗಳಲ್ಲಿ ಚಲಿಸುತ್ತಿವೆ. ಶಾಂತಿ ಮಾರ್ಗ ವಾಹನವು ಬೆಂಗಳೂರು, ಮುಳಬಾಗಿಲು, ಬಾಗೆಪಲ್ಲಿ, ಕೊರಟಗೆರೆ, ಪಾವಗಡ, ಮೊಳಕಾಲ್ಮೂರು ಮೂಲಕ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಗೆ ಇಂದು ಆಗಮಿಸಿದ್ದು, ಹರಪನಹಳ್ಳಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ವಾರ್ತಾಧಿಕಾರಿ ಅಶೋಕ್ಕುಮಾರ್ ಮಾತನಾಡಿ, ಈಗಾಗಲೇ ಮೊದಲ ಹಂತದ ಅಭಿಯಾನ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಸಂಚರಿಸಿದ್ದು, 2ನೇ ಹಂತದಲ್ಲಿ ಹರಪನಹಳ್ಳಿ ಹಾಗೂ ಹೊನ್ನಾಳಿ ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ಗಾಂಧೀಜಿಯವರ ಜೀವನ ಸಂದೇಶ ಸಾರುವ ಈ ಸ್ತಬ್ಧಚಿತ್ರವು ಸಾಗುವ ಮಾರ್ಗದಲ್ಲಿ ಸಿಗುವ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಅಹಿಂಸೆ, ಸತ್ಯಾಗ್ರಹ, ಸಮಾನತೆ, ಖಾದಿ ಗ್ರಾಮೋದ್ಯೋಗ, ಸ್ವಚ್ಚತೆ, ಶಿಕ್ಷಣ, ಮಹಿಳಾ ಉನ್ನತಿ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಈಗಾಗಲೇ 102 ತಾಲ್ಲೂಕುಗಳಲ್ಲಿ ಸ್ತಬ್ದಚಿತ್ರ ಸಂಚರಿಸಿದ್ದು, 2ನೇ ಹಂತದಲ್ಲಿ 72 ತಾಲ್ಲೂಕುಗಳಲ್ಲಿ ಸಂಚಾರ ನಡೆಸಲಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ರವಿ, ತಾಲ್ಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
