ಮನಿಷಾ ಹತ್ಯೆ ಖಂಡಿಸಿ ಜನಪರ ಸಂಘಟನೆಗಳ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ

    ದೇಶದಲ್ಲಿ ಅತ್ಯಾಚಾರ, ಹತ್ಯೆಗಳು ಸಾಮಾನ್ಯವಾಗುತ್ತಿವೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಮಹಿಳೆಯರ ರಕ್ಷಣೆ ಮಾಡಬೇಕು ಎಂದು ತಾಲ್ಲೂಕು ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ ಹೇಳಿದರು. ಪಟ್ಟಣದ ನೆಹರು ಸರ್ಕಲ್ ನಲ್ಲಿ ಉತ್ತರ ಪ್ರದೇಶದ ಯುವತಿ ಮನಿಷಾ ಅತ್ಯಾಚಾರವನ್ನು ಖಂಡಿಸಿ ವಿವಿಧ ಸಂಘಟನೆಗಳು ಮೇಣದ ಬತ್ತಿ ಹಿಡಿದು ಅವರ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿದರು.

    ನಿರ್ಭಯ ಪ್ರಕರಣಕ್ಕೆ ನ್ಯಾಯ ದೊರಕಿಸುವಾಗಲೇ ಸಾಕಷ್ಟು ಸಮಯ ವ್ಯರ್ಥವಾಯಿತು, ಆದರೂ ಕೊನೆಗೂ ನ್ಯಾಯ ದೊರಕಿತು. ಅಂತಹ ಆರೋಪಿಗಳಿಗೆ ಭಯಾನಕ ಶಿಕ್ಷೆಯನ್ನು ಕೊಟ್ಟ ಮೇಲೂ ಪುನಃ ಇಂತಹ ಹೇಯ ಕೃತ್ಯ ನಡೆಯುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹದು. ದಲಿತ ಹೆಣ್ಣು ಮಕ್ಕಳ ಮೇಲೇ ಇಂತಹ ಕೃತ್ಯಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಯುವ ಜನರು ಹೆಣ್ಣುಮಕ್ಕಳಿಗೆ ಗೌರವ ನೀಡಿ, ಸ್ನೇಹಿತರಂತೆ ಕಾಣಿ, ಎಲ್ಲೇ ಈ ತರಹ ಘಟನೆಗಳು ನಡೆದರೂ ಖಂಡಿಸಿ ಎಂದರು.

    ಸಾಮಾಜಿಕ ಕಾರ್ಯಕರ್ತ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಹೆಣ್ಣಿಗೆ ತನ್ನದೇ ಆದ ಸ್ಥಾನವನ್ನು ಶರಣರು ನೀಡಿದ್ದಾರೆ ಆದರೆ ಅಂತಹ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತಿಯೊಬ್ಬ ನಾಗರೀಕರು ಖಂಡಿಸಬೇಕು. ಸಂಸ್ಕೃತಿ ಮತ್ತು ಗೌರವದ ಬಗ್ಗೆ ಮಾತನಾಡಿದರೂ ಅದರ ಬಗ್ಗೆ ನಡೆದುಕೊಳ್ಳುದ ರೀತಿನೀತಿಗಳು ಸರಿಯಲ್ಲ. ಅರ್ಧ ರಾತ್ರಿ ಸುಡುವಂತಹ ಕೆಟ್ಟ ಪರಂಪರೆಯನ್ನು ನಾಗರೀಕ ಸಮಾಜದಲ್ಲಿರುವ ನಾವೆಲ್ಲರೂ ಖಂಡಿಸಬೇಕು ಎಂದು ಆಗ್ರಹಿಸಿದರು.

    ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಾತನಾಡಿ, ದೇಶದಲ್ಲಿ ಮೇಲ್ವರ್ಗದವರು ಏನೇ ಮಾಡಿದರೂ ಸಹಿಸಿಕೊಳ್ಳಬೇಕು ಎನ್ನುವಂತಹ ಸ್ಥಿತಿ ಉತ್ತರ ಪ್ರದೇಶ ಸರ್ಕಾರ ಮಾಡುತ್ತಿದೆ, ಪಕ್ಷಾತೀತವಾಗಿ ಮನಿಷಾ ರವರ ಪರವಾಗಿ ನ್ಯಾಯ ಕೇಳುತ್ತಿದ್ದೇವೆ, ಸರ್ಕಾರದ ನೀಚ ವರ್ತನೆಯನ್ನು ಖಂಡಿಸುತ್ತೇವೆ ಎಂದು ಆಗ್ರಹಿಸಿದರು.

   ಕಾರ್ಯಕ್ರಮದಲ್ಲಿ ಮುಖಂಡ ಸಿ.ಡಿ.ಚಂದ್ರಶೇಖರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಚಂದ್ರಶೇಖರ್ ಚಿಕ್ಕರಾಂಪುರ, ಕಿರಣ್ ನಿಶಾನಿ, ಪವನ್ ಸೇರಿದಂತೆ ಹಲವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap