ತುಮಕೂರು
ಸಂಸದರಾಗಿದ್ದ ಜಿ ಎಸ್ ಬಸವರಾಜು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಅವರ ಆರೋಪದ ಪ್ರಶ್ನೆಗೆ ತಿರುಗೇಟು ನೀಡಿದ ಜಿಎಸ್ಬಿ, ತಾವು ಶ್ರಮಿಸಿದ ವಿವಿಧ 55 ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿ, ಅಭಿವೃದ್ಧಿ ಚರ್ಚೆಗೆ ತಾವು ಸಿದ್ದ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ನೇತ್ರಾವತಿ ತಿರುವು ಯೋಜನೆಗೆ ಹೋರಾಟ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಹೇಳಿರುವ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಅಪ್ರಬುದ್ಧರು. ಅವರು ಪ್ರಾಥಮಿಕ ಶಾಲೆಯಲ್ಲಿ ಭೌಗೋಳಿಕ ವಿಷಯ ಓದಿಲ್ಲ. ನೇತ್ರಾವತಿ ನದಿ ಪಾತ್ರದಲ್ಲಿಯೇ ಎತ್ತಿನ ಹೊಳೆ ಉಪ ನದಿ ಇದೆ ಎಂಬುದನ್ನು ಪ್ರಾಥಮಿಕ ಶಾಲಾ ಮಟ್ಟದ ಪುಸ್ತಕದಲ್ಲಿ ಓದಿ ತಿಳಿಯಲಿ ಎಂದು ಹೇಳಿದರು.
ಮಲೆನಾಡಿನ ಜನ ನೇತ್ರಾವತಿ ನದಿ ತಿರುವು ಯೋಜನೆಗೆ ವಿರೋಧ ವ್ಯಕ್ತಪಡಿಸಿದಾಗ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಯೋಜನೆಯ ಒಂದು ಭಾಗಕ್ಕೆ ಎತ್ತಿನ ಹೊಳೆ ಎಂದು ಹೆಸರಿಸಿ ಯೋಜನೆ ಜಾರಿಗೊಳಿಸಲಾಯಿತು. ಇದರ ಬಗ್ಗೆ ಪರಮೇಶ್ವರ್ ಅವರಿಗೆ ಮಾಹಿತಿ ತಿಳಿದಿರಲಿಕ್ಕಿಲ್ಲ.
ಪೈಪ್ ಲೈನ್ ಲಾಬಿ ವಿರೋಧಿಸಿ ತುಮಕೂರು ಜಿಲ್ಲೆವರೆಗೂ ತೆರೆದ ಕಾಲುವೆ ಮಾಡಿಸಿರುವುದು ಅವರ ಗಮನಕ್ಕೆ ಬಂದಿಲ್ಲ. ತೆರೆದ ಕಾಲುವೆ ಅರಸಿಕೆರೆಯಿಂದ ಬೈರಗೊಂಡ್ಲುವರೆಗೂ ಪರಮಶಿವಯ್ಯನವರು ಸಿದ್ದಪಡಿಸಿದ್ದ ವರದಿಯಲ್ಲಿ ಒಂದು ಮೀಟರ್ ಸಹ ಬದಲಾಗಿಲ್ಲ. ಎತ್ತಿನ ಹೊಳೆ ಯೋಜನೆಯ ಕಡತ ತೆಗೆಸಿ ನೋಡಲಿ, ಮಾಹಿತಿ ದೊರೆಯಲಿದೆ ಎಂದು ಡಾ. ಪರಮೇಶ್ವರ್ ಅವರಿಗೆ ಹೇಳಿದರು.
ಈಗ ನಿರ್ಮಾಣವಾಗುತ್ತಿರುವ ಎತ್ತಿನ ಹೊಳೆ ಕಾಲುವೆಯನ್ನೇ ವಾಟರ್ ಗ್ರಿಡ್ ಕೆನಾಲ್ ಆಗಿ ಘೋಷಿಸಿ, ನೇತ್ರಾವತಿ, ಹೇಮಾವತಿ, ಲಿಂಗನಮಕ್ಕಿ, ಭದ್ರಾ ಯೋಜನೆಯಿಂದ ಜಿಲ್ಲೆಗೆ ನೀರು ತರಲು ಶ್ರಮಿಸಿದ್ದು ನಾನೆ. ಮಳೆಗಾಲದಲ್ಲಿ ಮಾತ್ರವಲ್ಲ, ಲಿಂಗನಮಕ್ಕಿ ಯೋಜನೆ ಜಾರಿಯಾದರೆ ಬೇಸಿಗೆಯಲ್ಲೂ ಜಿಲ್ಲೆಗೆ ನೀರು ಬರಲಿದೆ. ಹೇಮಾವತಿ ವಾಟರ್ ಫ್ಲಡ್ ಕಾಲುವೆಯಿಂದ ಮಳೆಗಾಲದಲ್ಲಿ ಅರಬ್ಬೀ ಸಮುದ್ರಕ್ಕೆ ಹರಿದು ಹೋಗುತ್ತಿರುವ ಸುಮಾರು 80 ಟಿಎಂಸಿ ಅಡಿ ನೀರನ್ನು ಜಿಲ್ಲೆಗೆ ತರಬಹುದು. ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸುವ ಯೋಜನೆಗಾಗಿ ಕೆಲಸ ಮಾಡಿದ್ದೇನೆ ಎಂದು ಬಸವರಾಜು ಹೇಳಿದರು.
ನಾನು ಸಂಸದನಾಗಿದ್ದ ಅವಧಿಯಲ್ಲಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದೇನೆ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ನನ್ನ ಸಾಧನೆಗಳೇ ತಿಳಿದಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಯೋಜನೆ, ತುಮಕೂರು ನಗರ ರೈಲು ನಿಲ್ದಾಣ, ಪವರ್ ಗ್ರಿಡ್, ಹಸಿರು ತುಮಕೂರು, ಸ್ಮಾರ್ಟ್ಸಿಟಿ ಬರಲು ಕಾರಣ. ಹೀಗೆ ಹತ್ತಾರು ಯೋಜನೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.
ತುಮಕೂರು ವಿವಿ ತಂದಿದ್ದು ನಾನು ಎಂದು ಡಾ.ಜಿ.ಪಮೇಶ್ವರ್ ಹೇಳಿಕೊಳ್ಳುತ್ತಾರೆ
. ಆದರೆ ತುಮಕೂರು ವಿವಿ ಬರಲು ಮುಖ್ಯ ಕಾರಣ ನಾನು. ತುಮಕೂರು, ಕೋಲಾರ ಜಿಲ್ಲೆ ಸೇರಿಸಿ ಪ್ರತ್ಯೇಕ ವಿಶ್ವವಿದ್ಯಾಲಯ ಮಾಡಿ ಎಂದು ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣರಿಗೆ ಮನವಿ ಮಾಡಿದ್ದು ನಾನು. ಅವರ ಮನವೊಲಿಸಿ ವಿವಿ ಆರಂಭಕ್ಕೆ ಒಪ್ಪಿಗೆ ಪಡೆಯಲಾಯಿತು. ಆಗ ಸಚಿವರಾಗಿದ್ದ ಪರಮೇಶ್ವರ್ ವಿವಿಗೆ ಅನುಮತಿ ನೀಡಿದರು. ಆದರೆ ಅವರು ನಾನೇ ವಿವಿ ತಂದಿದ್ದು ಎಂದು ಹೇಳಿಕೊಳ್ಳುತ್ತಾರೆ. ಅದರ ಚಿಂತನೆ ಯಾರದ್ದು? ಎಸ್.ಎಂ.ಕೃಷ್ಣ ಅವರ ಮನ ಒಲಿಸಿದ್ದು ಯಾರು ಎಂಬುದು ಪರಮೇಶ್ವರ್ಗೆ ತಿಳಿದಿಲ್ಲ ಎಂದು ಹೇಳಿದರು.
ತಮ್ಮ 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಹಲವಾರು ಕಾರ್ಯಕ್ರವiಗಳು ಕಾರ್ಯಗತಗೊಳ್ಳಲು ಕಾರಣನಾಗಿದ್ದೇನೆ ಎಂದು ಹೇಳಿ, 55 ಯೋಜನೆಗಳ ಪಟ್ಟಿಯನ್ನು ಜಿಎಸ್ಬಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ಅಭಿವೃದ್ಧಿ ವಿಷಯಗಳ ಬಹಿರಂಗ ಚರ್ಚೆಗೆ ತಾವು ಸಿದ್ದ ಎಂದು ಡಾ. ಪರಮೇಶ್ವರ್ ಅವರಿಗೆ ಸವಾಲು ಹಾಕಿದರು.ಜಿಲ್ಲಾ ಪಂಚಾಯ್ತಿ ಸದಸ್ಯರಾದ ವೈ.ಹೆಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್, ಮುಖಂಡರಾದ ಕುಂದರನಹಳ್ಳಿ ರಮೇಶ್, ಹಾಲನೂರು ಲೇಪಾಕ್ಷಿ, ಹೊನ್ನುಡಿಕೆ ಲೋಕೇಶ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
