ಬೆಂಗಳೂರು:
ದೇಶದಲ್ಲಿ ಉದ್ಯಮಿಗಳಿಗೆ ಸ್ವಾತಂತ್ರ್ಯ, ತೆರಿಗೆ ಸಂಗ್ರಹ ವಿಧಾನ ಇನ್ನಷ್ಟು ಸರಳ ಹಾಗೂ ಸಂಗ್ರಹಿಸಿದ ತೆರಿಗೆಯ ದಕ್ಷ ಬಳಕೆ ಸವಾಲುಗಳನ್ನು ಸರ್ಕಾರಗಳು ಸಮರ್ಥವಾಗಿ ನಿರ್ವಹಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದರು.
ಜಿಎಸ್ಟಿ ಜಾರಿಯಾಗಿ ನಿನ್ನೆಗೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರೀಯ ತೆರಿಗೆ (ಜಿಎಸ್ಟಿ) ಪ್ರಧಾನ ಮುಖ್ಯ ಆಯುಕ್ತರ ಕಚೇರಿಯು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಎಸ್ಟಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಉದ್ಯಮಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರಗಳು ಹಲವು ಅನುಮತಿ ನೀಡಿಕೆ ವಿಚಾರದಲ್ಲಿ ತಮ್ಮ ಕಿರುಕುಳ ಮುಂದುವರಿಸಿದ್ದು, ಇದನ್ನು ನಿವಾರಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಈ ಹಿಂದೆ ಅಂದರೆ 1973ರಲ್ಲೇ ಬ್ರಿಟನ್ನಿನಲ್ಲಿ ವ್ಯಾಟ್ ತೆರಿಗೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿತ್ತು. ದೇಶದಲ್ಲಿ 43 ವರ್ಷಗಳ ನಂತರ ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದಿದ್ದು, ಅದರ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರ ತನ್ನ ಬದ್ಧತೆ ತೋರಿಸಿದೆ. ರಾಜ್ಯ ಸರ್ಕಾರಗಳು ಇದಕ್ಕೆ ಸಹಕಾರ ನೀಡಿವೆ. 300 ವರ್ಷಗಳಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸಿಗದ ಗೌರವ ಈಗ ದೊರಕಿದೆ ಎಂದು ಹೇಳಿದರು.
ಇದೇ ಅವಕಾಶ ಬಳಸಿಕೊಂಡು ದೇಶದ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಇದಕ್ಕೆ ಎಲ್ಲರೂ ಶಕ್ತಿ ಮೀರಿ ಶ್ರಮಿಸಬೇಕಾಗಿದ್ದು. ವೈಯಕ್ತಿಕ ಸುಖವನ್ನು ಬದಿಗೊತ್ತಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ದುಡಿಯುವ ಮನೋಭಾವನೆ ಮೂಡಬೇಕು ಎಂದು ಅಭಿಪ್ರಾಯಪಟ್ಟರು.
ಕೇಂದ್ರ ತೆರಿಗೆ ಇಲಾಖೆ ಬೆಂಗಳೂರು ವಲಯದ ಪ್ರಧಾನ ಮುಖ್ಯ ಆಯುಕ್ತ ಡಿ.ಪಿ.ನಾಗೇಂದ್ರ ಕುಮಾರ್, ಮುಂದಿನ ಅಕ್ಟೋಬರ್ 1ರಿಂದ ಎರಡನೇ ಹಂತದ ಜಿಎಸ್ಟಿ ಜಾರಿಗೆ ಬರಲಿದ್ದು, ಬಳಿಕ ಜಿಎಸ್ಟಿ ಇನ್ನಷ್ಟು ಸರಳವಾಗಿರಲಿದೆ ಎಂದು ತಿಳಿಸಿದರು.ಆದಾಯ ತೆರಿಗೆ ಇಲಾಖೆ (ಕರ್ನಾಟಕ ಮತ್ತು ಗೋವಾ ವಲಯ) ಪ್ರಧಾನ ಮುಖ್ಯ ಆಯುಕ್ತ ಬಿ.ಆರ್.ಬಾಲಕೃಷ್ಣನ್, ಕೇಂದ್ರೀಯ ತೆರಿಗೆ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/nrn.gif)