ಬೆಂಗಳೂರು
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಿಬ್ಬಂದಿ ಹಾಗೂ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವೇತನ ಪರಿಷ್ಕರಣೆಯಲ್ಲಿನ ತಾರತಮ್ಯ ವಿರೋಧಿಸಿ ಅ.14ರಿಂದ ದೇಶಾದ್ಯಂತದ 9 ಘಟಕದ ಸುಮಾರು 19 ಸಾವಿರ ನೌಕರರು ಕಚೇರಿಯಿಂದ ದೂರವುಳಿದು ಮುಷ್ಕರ ನಡೆಸುತ್ತಿದ್ದರು.
ಮುಷ್ಕರದ ಸಿಂಧುತ್ವ ಪ್ರಶ್ನಿಸಿ ಎಚ್ಎಎಲ್ ಆಡಳಿತ ಮಂಡಳಿ ರಿಟ್ ಅರ್ಜಿ ಸಲ್ಲಿಸಿತ್ತು. ನೌಕರರ ಮುಷ್ಕರದಿಂದಾಗಿ ಕಂಪನಿಗೆ ಪ್ರತಿ ದಿನ ? 17 ಕೋಟಿ ನಷ್ಟವಾಗುತ್ತಿದೆ. ಇದರಿಂದ ರಕ್ಷಣಾ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಕಂಪನಿಯಲ್ಲಿ ಅರ್ಜಿಯಲ್ಲಿ ತಿಳಿಸಿತ್ತು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರ ನೀಡಬೇಕು ರಾಜೀ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತು.
ಸಂಸ್ಥೆಯ ಸಿಬ್ಬಂದಿ, ನೌಕರರು ನಿಯಮದಂತೆ ಕೆಲಸ ಮಾಡಬೇಕು. ಪ್ರತಿಭಟನೆ, ಮುಷ್ಕರದ ಮೂಲಕ ಕಂಪನಿಯ ದೈನಂದಿನ ಕಾರ್ಯ ನಿರ್ವಹಣೆಗೆ ತೊಂದರೆ ಮಾಡುವಂತಿಲ್ಲ ಎಂದು ನ್ಯಾಯಪೀಠ ನಿರ್ದೇಶಿಸಿತು. ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ ಅಡಿ ರಾಜಿ ಸಂಧಾನಕ್ಕೆ ಅವಕಾಶವಿರುವುದರಿಂದ ಮುಷ್ಕರಕ್ಕೆ ಮುಂದಾಗುವುದು ಸರಿಯಲ್ಲ ಮತ್ತು ಅದರಿಂದ ಭಾರಿ ನಷ್ಟವಾಗುವ ಜೊತೆಗೆ ರಕ್ಷಣಾ ಪಡೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ತೀರ್ಪು ಹೊರಬೀಳುತ್ತಿದ್ದಂತೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಎಚ್ ಎಎಲ್, ನೌಕರರು ಕೂಡಲೇ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಡಬೇಕು, ಇಲ್ಲವಾದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








