ಚಿತ್ರದುರ್ಗ:
ದಿನವಿಡಿ ಮೈಮುರಿದು ದುಡಿಯುವ ಶ್ರಮಿಕ ವರ್ಗದ ಹಮಾಲರು ಕಾಯಕ ಮಾಡುವ ಮೂಲಕ ಸುಂದರವಾದ ಬದುಕು ಕಟ್ಟಿಕೊಳ್ಳಬೇಕೆಂದು ಸಂಸದ ಬಿ.ಎನ್.ಚಂದ್ರಪ್ಪ ಹಮಾಲರಿಗೆ ತಿಳಿಸಿದರು.
ಹೂವು, ಹಣ್ಣು, ತರಕಾರಿ ಹಮಾಲಿ ಕ್ಷೇಮಾಭಿವೃದ್ದಿ ಸಂಘದಿಂದ ಶನಿವಾರ ಟೀಪು ಶಾದಿಮಹಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಮಾಲರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬುದ್ದ, ಬಸವ, ಏಸು, ಅಂಬೇಡ್ಕರ್, ಪೈಗಂಬರ್ ಇವರುಗಳು ಕಾಯಕಕ್ಕೆ ಹೆಚ್ಚಿನ ಒತ್ತು ಕೊಟ್ಟವರು. ಶರಣರ ಮಾರ್ಗದರ್ಶನದಂತೆ ಹಮಾಲರು ದುಡಿದು ತಿನ್ನಬೇಕು. ಯಾರಿಗೂ ಮೋಸ, ಅನ್ಯಾಯ ಮಾಡಬಾರದು. ಮತ್ತೊಬ್ಬರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದೆಂದು ಹಮಾಲರಿಗೆ ಕಿವಿಮಾತು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಎಂದು ಹಮಾಲರಿಗೆ ಕರೆ ನೀಡಿದರು.ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಮಾಲರಿಗೆ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೆ ನೆರವು ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮಲ್ಲಿ ಗುರುತಿನ ಚೀಟಿಯಿರಬೇಕು. ಎಲ್ಲಾ ಯೋಜನೆಗಳ ಸದುಪಯೋಗಪಡಿಸಿಕೊಳ್ಳಲು ಆಧಾರ್ ಕಾರ್ಡ್ ಮುಖ್ಯವಾಗಿ ಬೇಕು. ಗ್ಯಾಸ್ ಸಿಲಿಂಡರ್ ಸಬ್ಸಿಡಿ ನೇರವಾಗಿ ನಿಮ್ಮ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮ ಆಗುತ್ತದೆ. ಫುಟ್ಪಾತ್ ವ್ಯಾಪಾರಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗಿದೆ. ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಂಡು ಕಾಲಕ್ಕೆ ತಕ್ಕಂತೆ ನೀವುಗಳು ಬದಲಾವಣೆಯಾಗಬೇಕು ಎಂದು ತಿಳಿಸಿದರು.
144 ವಿವಿಧ ರೀತಿಯ ಅಸಂಘಟಿತ ಕಾರ್ಮಿಕರಿಗೆ ದೇಶದ ಪ್ರಧಾನಿ ನರೇಂದ್ರಮೋದಿರವರು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕಾರ್ಮಿಕರ ಎಂಟು ಸಾವಿರ ಕೋಟಿ ರೂ. ಸೆಸ್ ಸರ್ಕಾರದಲ್ಲಿ ಬಿದ್ದಿದೆ. ಯಾರಿಗೂ ಪ್ರಯೋಜನವಾಗುತ್ತಿಲ್ಲ. ಸೆಸ್ ಹಣ ಕಾರ್ಮಿಕರಿಗೆ ನೀಡುವಂತೆ ಸರ್ಕಾರದ ಮೇಲೆ ಅನೇಕ ಒತ್ತಡಗಳು ಬರುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ನೆರವು ನೀಡಿದೆ. ಬಳಸಿಕೊಳ್ಳಿ ಎಂದು ಹಮಾಲರಿಗೆ ಹೇಳಿದರು.
ಬಡ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನಮ್ಮಲ್ಲಿ ಅನುಕೂಲವಿಲ್ಲ ಎಂದು ಕೊರಗುವ ಕಾಲ ಈಗ ದೂರವಾಗಿದೆ. ಹತ್ತಿಪ್ಪತ್ತು ಲಕ್ಷ ರೂ.ಗಳನ್ನು ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವುದು. ಗಾಂಧಿವೃತ್ತದಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಹಿಂದಿನ ನಗರಸಭೆಯವರು ಕೆಡವಿದ್ದಾರೆ. ವ್ಯವಸ್ಥಿತವಾಗಿ ಸೂಪರ್ ಮಾರುಕಟ್ಟೆ ನಿರ್ಮಿಸಿ ಕೊಡುತ್ತೇವೆ. ರಸ್ತೆ ಅಗಲೀಕರಣಕ್ಕೆ ಮೂರು ಕೋಟಿ ರೂ.ಗಳನ್ನು ನೀಡಲಾಗಿದೆ.
ಕೆಲವೊಮ್ಮೆ ಬಡವರಿಗೆ ಅವಕಾಶ ಸಿಗುವುದಿಲ್ಲ. ಸ್ಥಿತಿವಂತರೆ ಸರ್ಕಾರದ ಸವಲತ್ತುಗಳನ್ನು ಬಾಚಿಕೊಳ್ಳುತ್ತಾರೆ. ಕ್ರಮೇಣವಾಗಿ ಎಲ್ಲವನ್ನು ಸರಿಪಡಿಸಿ ನಿಜವಾದ ಅರ್ಹ ಬಡವರಿಗೆ ಅವಕಾಶ ಮಾಡಿಕೊಡುತ್ತೇನೆ. ಸಂತೆಹೊಂಡದ ಮುಂಭಾಗ ಸಿಮೆಂಟ್ ರಸ್ತೆಯಾಗುತ್ತಿದೆ. ಸ್ವಲ್ಪ ತಡವಾಗಿದೆ. ಸಮಾಧಾನದಿಂದ ಸಹಭಾಳ್ವೆಯಿಂದ ಜೀವಿಸುವುದನ್ನು ಕಲಿಯಿರಿ ಎಂದು ಹಮಾಲರಿಗೆ ತಿಳಿಸಿದರು.
ವಯಸ್ಸಾದವರು, ವಿಧವೆಯರು, ಮಕ್ಕಳು ನೋಡಿಕೊಳ್ಳದೆ ಮನೆಯಿಂದ ಹೊರ ಬಂದವರು ಹೀಗೆ ಅನೇಕರು ರಸ್ತೆ ಬದಿ ಕುಳಿತು ಹೂವು ಹಣ್ಣು ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂತಹವರಿಗೆ ಮಳಿಗೆ ನೀಡಬೇಕಾಗಿದೆ ಉಳ್ಳವರು ಸಹಕರಿಸಿ ಎಂದು ಮನವಿ ಮಾಡಿದ ಶಾಸಕರು ದುಡಿದು ತಿನ್ನಲು ಎಲ್ಲರಿಗೂ ಅವಕಾಶ ಮಾಡಿಕೊಡೋಣ. ಗುರುತಿನ ಚೀಟಿ ಇಲ್ಲದಿದ್ದರೆ ಯಾವ ಪ್ರಯೋಜನವಾಗುವುದಿಲ್ಲ ಎಂದು ಹಮಾಲರನ್ನು ಎಚ್ಚರಿಸಿದರು.
ಹೌಸಿಂಗ್ ಫಾರ್ ಆಲ್ ಸ್ಕೀಂನಡಿ 1800 ಮನೆಗಳನ್ನು ಕಟ್ಟಿಸುತ್ತೇವೆ. ಯಾವುದೇ ತಾರತಮ್ಯವಿಲ್ಲದೆ ನಿಜವಾದ ಬಡವರಿಗೆ ಮನೆಗಳನ್ನು ಕೊಡುತ್ತೇನೆ. ವೆಂಕಟೇಶ್ವರ ಟಾಕೀಸ್ ಎದುರುಗಡೆಯಿರುವ ಕೊಳಗೇರಿಗಳಿಗೆ 91 ಮನೆಗಳು ಮಂಜೂರಾಗಿದೆ. ಆರ್.ಸಿ.ಸಿ.ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಪ್ರತಿ ವರ್ಷ ನಗರಕ್ಕೆ ಮೂರರಿಂದ ನಾಲ್ಕು ಸಾವಿರ ಬಡವರು ಬರುತ್ತಾರೆ. ಹಾಗಾಗಿ ಮನೆಗಳ ಸಮಸ್ಯೆ ಇನ್ನು ಪೂರ್ಣವಾಗಿ ಬಗೆಹರಿಸಲು ಆಗುತ್ತಿಲ್ಲ.
ಎಲ್ಲಿಯೂ ಜಾಗ ಇಲ್ಲ. ಹೊಸದಾಗಿ ಖರೀಧಿಸಬೇಕು. ಅಂಬೇಡ್ಕರ್, ವಾಜಪೇಯಿ ಹೆಸರಿನ ಮೇಲೆ ಮನೆಗಳನ್ನು ನೀಡುತ್ತೇವೆ, ಹಳೆ ಮನೆಗಳು ಇದ್ದವರು, ನಿವೇಶನವಿದ್ದವರಿಗೆ ಮನೆ ಕಟ್ಟಿಕೊಳ್ಳಲು ಸಾಮಾನ್ಯ ವರ್ಗದವರಿಗೆ ಮೂರು ಲಕ್ಷ ರೂ., ಪರಿಶಿಷ್ಟ ಜಾತಿಗೆ ಮೂರುವರೆ ಲಕ್ಷ ರೂ.ಗಳನ್ನು ನೀಡಲಾಗುವುದು. ಎಲ್ಲರೂ ಸರ್ಕಾರದಿಂದ ಸಿಗುವ ಸೌಕರ್ಯಗಳನ್ನು ಸದುಪಯೋಗಪಡೆದುಕೊಳ್ಳಿ ಎಂದು ಹಮಾಲರಲ್ಲಿ ವಿನಂತಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ನಗರಸಭೆ ಸದಸ್ಯರುಗಳಾದ ಹರೀಶ್, ದಾವೂದ್, ಹಜರತ್ ಗರೀಬ್ಷಾವಲಿ ದರ್ಗಾ ಕಮಿಟಿ ಆಡಳಿತಾಧಿಕಾರಿ ಸೈಯದ್ ಅಫಾಖ್ ಅಹಮದ್, ನಗರಸಭೆ ಮಾಜಿ ಸದಸ್ಯ ಅಶ್ವಖ್ ಅಹಮದ್, ಸಮಾಜ ಸೇವಕ ದಾದಾಪೀರ್, ಜಾನಪದ ಹಾಡುಗಾರ ಚಂದ್ರಪ್ಪ ಕಾಲ್ಕೆರೆ, ಹೂವು, ಹಣ್ಣು, ತರಕಾರಿ ಹಮಾಲರ ಕ್ಷೇಮಾಭಿವೃದ್ದಿ ಸಂಘಧ ಅಧ್ಯಕ್ಷ ಸನಾವುಲ್ಲಾ ವೇದಿಕೆಯಲ್ಲಿದ್ದರು. ಶ್ರೀನಿವಾಸ್ ಮಳಲಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
