ಚಿತ್ರದುರ್ಗ:
ರಕ್ತ ಸಂಬಂಧದ ಮದುವೆಗಳು, ಅಂಗವೈಕಲ್ಯ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ. ಸಾರ್ವಜನಿಕರು ಆದಷ್ಟು ರಕ್ತ ಸಂಬಂಧದ ಮದುವೆ ನಿಲ್ಲಿಸಿ, ಅಂಗವೈಕಲ್ಯತೆಗೆ ಹೆಚ್ಚು ತುತ್ತಾಗುವವರನ್ನು ತಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಅವರು ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ‘ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿ ತಾಯಂದಿರು ಆಹ್ಲಾದಕರ ವಾತಾವರಣದಲ್ಲಿರಬೇಕು. ಅವರ ಮನಸ್ಸಿಗೆ ಘಾಸಿಯಾಗುವಂತೆ ಯಾರೂ ವರ್ತಿಸಬಾರದು. ಅವರು ನವಮಾಸಗಳು ಪೂರೈಸುವವರೆಗೂ ಖುಷಿಯಾಗಿದ್ದರೆ, ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಸುವುದಲ್ಲದೆ ಶಿಶು ಅಂಗವೈಕಲ್ಯತೆಯನ್ನು ತಡೆಯಬಹುದು. ದಿವ್ಯಾಂಗರು ತಮ್ಮ ವಿಶೇಷವಾದ ಸಾಮಥ್ರ್ಯದಿಂದ ಉನ್ನತ ಸ್ಥಾನಕ್ಕೇರಬೇಕು. ಶಿಕ್ಷಣ, ರಾಜಕೀಯ, ಸಾಮಾಜಿಕ, ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು ಎಂದರು
ಅಂಗವಿಕಲರಿಗಾಗಿ ನೀಡುವ ತ್ರಿಚಕ್ರ ಸ್ಕೂಟರ್ಗಾಗಿ ಜಿಲ್ಲೆಯಲ್ಲಿ ಸುಮಾರು 2000 ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ಹಾಕಿದ ಎಲ್ಲರಿಗೂ ಸ್ಕೂಟರ್ ವಿತರಿಸಲು ಚಿಂತನೆ ನಡೆದಿದ್ದು, ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ದಿವ್ಯಾಂಗರು ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಾ ಕೂರಬಾರದು, ತಮ್ಮ ಸ್ವಂತ ಸಾಮಥ್ರ್ಯದಿಂದ ಕೌಶಲ್ಯ ವೃದ್ಧಿಸಿಕೊಂಡು, ಆರ್ಥಿಕ ಬವಣೆ ನಿವಾರಿಸಿಕೊಳ್ಳಬೇಕು. ದಿವ್ಯಾಂಗರ ಆಸಕ್ತಿ ಮತ್ತು ಸಾಮಥ್ರ್ಯಕ್ಕನುಗುಣವಾಗಿ ಸಹಾಯ ನೀಡಲಾಗುತ್ತದೆ ಎಂದರು
ಜಿಲ್ಲೆಯಲ್ಲಿ ಪ್ರಸ್ತುತ 35 ಸಾವಿರ ವಿಕಲಚೇತನರಿದ್ದಾರೆ. ಮುಖ್ಯವಾಹಿನಿ ಬರದೆ ಇರುವ ಜಿಲ್ಲೆಯ ಅನೇಕ ವಿಕಲಚೇತನರನ್ನು ಸಮೀಕ್ಷೆ ಮೂಲಕ ಗುರುತಿಸಿ, ಸರ್ಕಾರಿ ಸೌಲಭ್ಯಗಳನ್ನು ಎಲ್ಲ ಅರ್ಹರಿಗೂ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಎಲ್ಲ ವಿಕಲಚೇತನರಿಗೆ ‘ಯುಡಿಐಡಿ ಕಾರ್ಡ್’ ನೀಡಲಾಗುತ್ತಿದ್ದು, ಪ್ರತಿಯೊಬ್ಬರು ಈ ಕಾರ್ಡ್ ಮಾಡಿಸುವುದರ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಯಬಹುದು. ಎಲ್ಲರೂ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಮಾತನಾಡಿ, ದಿವ್ಯವಾದ ಅಂಗ ಹೊಂದಿರುವವರೆ, ದಿವ್ಯಾಂಗರು. ದಿವ್ಯಾಂಗರಲ್ಲಿ ವಿಶೇಷವಾದ ಕೌಶಲ್ಯ ಹಾಗೂ ವಿಭಿನ್ನ ಸಾಮಥ್ರ್ಯವಿರುತ್ತದೆ. ಸರ್ಕಾರ ದಿವ್ಯಾಂಗರ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ಶೇ. 5 ರಷ್ಟು ಮೀಸಲಾತಿ ನಿಗದಿಪಡಿಸಿದೆ. ದಿವ್ಯಾಂಗರು ಅಬಲರಲ್ಲ ಸಬಲರು. ದಿವ್ಯಾಂಗರಿಗಾಗಿ ನಡೆಯುವ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲೇ ನಮ್ಮ ದೇಶ ಹೆಚ್ಚು ಪದಕಗಳನ್ನು ಗಳಿಸಿದೆ. ದೇಶದ ಕೀರ್ತಿ ಬೆಳಗಿಸಿದವರಲ್ಲಿ ದಿವ್ಯಾಂಗರ ಪಾತ್ರವು ಇದೆ. ಪ್ರತಿಯೊಬ್ಬರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ