ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ 26 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಜಮೀನು, ತೋಟ ವಶಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಈಗ ಎಲ್ಲರ ಸಹಕಾರದೊಂದಿಗೆ ಸಮಾರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ, ಇನ್ನು ನಾಲ್ಕು ತಿಂಗಳೊಳಗೆ ಕಾಮಗಾರಿಯು ಗುರಿ ಮುಟ್ಟಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ಹೇಮಾವತಿ ನಾಲೆಯಲ್ಲಿ ಹರಿಯುವ ನೀರನ್ನು ಪ್ರಾಯೋಗಿಕವಾಗಿ ಇಲ್ಲಿನ ಕೆರೆಗಳಿಗೆ ಹರಿಸುವ ಚಿಂತನೆಯಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯದರ್ಶಿ ಜಯಪ್ರಕಾಶ್ ಹೇಳಿದರು.
ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 164 ಗ್ರಾಮಗಳ, 26 ಕೆರೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಬಗ್ಗೆ ಸ್ಥಳ ಪರೀಕ್ಷಿಸಲು ಕಾಮಗಾರಿ ನಡೆಯುತ್ತಿರುವ ಗಡಬನಹಳ್ಳಿ, ತಿಗಳನಹಳ್ಳಿ ಸ್ಥಳಗಳಿಗೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಚಿಕ್ಕನಾಯಕನಹಳ್ಳಿಗೆ ಒಳಪಡುವ 26 ಕೆರೆಗಳಾದ ಕೊಡ್ಲಾಗರಕೆರೆ, ಚುಂಗನಹಳ್ಳಿಕೆರೆ, ದಬ್ಬೇಘಟ್ಟ ಕೆರೆ, ಮೇಲನಹಳ್ಳಿ ಕೆರೆ, ಮಾರಸಂದ್ರಕೆರೆ, ನವಿಲೆಕೆರೆ, ಅಣೆಕಟ್ಟೆ ಕೆರೆ, ಚಿಕ್ಕನಾಯಕನಹಳ್ಳಿ ಕೆರೆ, ಕಂದಿಕೆರೆ, ಸಾಸಲು ಕೆರೆ, ಶೆಟ್ಟಿಕೆರೆ, ತಿಮ್ಲಾಪುರ ಜೋಡಿಕೆರೆ, ಹುಳಿಯಾರು ಕೆರೆ, ಅಜ್ಜನಕೆರೆ, ಪಟ್ಟದೇವರಕೆರೆ, ಹೊಸೂರು(ಕುಪ್ಪೂರುಚಿಕ್ಕೆರೆ), ಮಚ್ಚಸಂದ್ರಕೆರೆ, ಹಾಲ್ಕುರಿಕೆ ಕೆರೆ, ತಮ್ಮಡಿಹಳ್ಳಿ ಕೆರೆ, ದಾಸಿಹಳ್ಳಿ ಕೆರೆ, ಕುಪ್ಪೂರು ಕೆರೆ, ಲಿಫ್ಟ್ ಮೂಲಕ ನಡುವನಹಳ್ಳಿ ಕೆರೆ, ಜೆ.ಸಿ.ಪುರ ಕೆರೆ, ಮಲಗೊಂಡನಹಳ್ಳಿ ಕೆರೆ, ಬ್ಯಾಡರಹಳ್ಳಿ ಕೆರೆಗಳಿಗೆ ನೀರು ಹರಿಸುವ ಸಂಬಂಧ ಶಾಸಕರು ಕಾವೇರಿ ನೀರಾವರಿ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಸ್ಥಳ ವೀಕ್ಷಣೆಗಾಗಿ ಆಗಮಿಸಿದ್ದೇವೆ. ಇನ್ನು ಶೇ.50ರಷ್ಟು ಕಾಮಗಾರಿ ಬಾಕಿ ಇದೆ. ಅದನ್ನು ಶೀಘ್ರವೇ ಮುಗಿಸಲಾಗುವುದು ಹಾಗೂ ಮುಂದಿನ ನಾಲ್ಕೈದು ತಿಂಗಳಲ್ಲಿ ಹೇಮಾವತಿ ನಾಲೆಯಲ್ಲಿ ನೀರು ಹರಿದರೆ ಇಲ್ಲಿಯೂ ಸಹ ಪ್ರಾಯೋಗಿಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಮಗೆ ತಿಗಳನಹಳ್ಳಿವರೆಗೆ ನೀರು ಬರಲು ಅಡಚಣೆ ಇಲ್ಲ. ಈ ಯೋಜನೆಯು ತಿಗಳನಹಳ್ಳಿಯಿಂದ ಸಾಸಲು ಕೆರೆವರೆಗೆ ಒಂದು ಭಾಗ, ಸಾಸಲು ಕೆರೆಯಿಂದ ಉಳಿದ ಕೆರೆಗಳಿಗೆ ಒಂದು ಭಾಗ. ಸಾಸಲು ಕೆರೆ ಭಾಗದಲ್ಲೂ 8 ಕಿ.ಮೀ. ಕೆಲಸ ಬಾಕಿ ಇದ್ದು ಅಲ್ಲಿಯೂ ತ್ವರಿತವಾಗಿ ಕೆಲಸ ನಡೆಯುತ್ತಿದೆ ಹಾಗೂ ಈ ಯೋಜನೆಯಲ್ಲಿ ಕಾಂಕ್ರಿಟ್ ಕೆನಾಲ್ ಇರಲಿಲ್ಲ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಯಪ್ರಕಾಶ್ ರವರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಿಂದ ಕಾಂಕ್ರಿಟ್ ಹಾಕಲು ಸೂಚಿಸಿದ್ದಾರೆ.
ಹಾಗಾಗಿ ಯೋಜನೆಯು ಒಂದು ತಿಂಗಳು ಮುಂದಕ್ಕೆ ಹೋಗಿದೆ. ಕಾಂಕ್ರಿಟ್ ಕೆನಾಲ್ ಹಾಕುವುದರಿಂದ ಮಣ್ಣು ಕುಸಿಯುವುದಿಲ್ಲ, ಶಾಶ್ವತವಾಗಿರುತ್ತದೆ. ಸಾಸಲು ಕೆರೆವರೆಗೆ ನೀರು ಹರಿದರೆ ಅಲ್ಲಿಂದ ಚಿ.ನಾ.ಹಳ್ಳಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯಲಿದೆ ಎಂದ ಅವರು, ತಿಪಟೂರು ಭಾಗದಲ್ಲಿ ಅರಣ್ಯ ಭಾಗವನ್ನು ಸ್ವಲ್ಪ ವಶಪಡಿಸಿಕೊಳ್ಳಬೇಕಿದೆ. ಅಲ್ಲಿಯೂ ಕಾಮಗಾರಿ ಪೂರ್ಣಗೊಂಡರೆ ಹಾಲ್ಕುರಿಕೆ ಕೆರೆಗೆ ನೀರು ಹರಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ತಿಪಟೂರು ಶಾಸಕ ಬಿ.ಸಿ.ನಾಗೇಶ್, ಭೂಸ್ವಾಧೀನಾಧಿಕಾರಿ ಗೀತಾ, ಇಂಜಿನಿಯರ್ ಬಾಲಕೃಷ್ಣ, ಬಿಜೆಪಿ ಮುಖಂಡರಾದ ನಿರಂಜನ್ ಮೂರ್ತಿ, ಬರಗೂರು ಬಸವರಾಜು, ಕಾವೇರಿ ನೀರಾವರಿ ನಿಗಮದ ಎಇಇ, ಇಂಜಿನಿಯರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
