ಗುಬ್ಬಿ
ಜಿಲ್ಲೆಗೆ ಹರಿದ ಹೇಮಾವತಿ ನೀರಿನಿಂದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಈ ತಿಂಗಳ ಅಂತ್ಯದವರೆಗೆ ಹರಿಯುವ ನೀರಿನಿಂದ ಉಳಿದ 16 ದಿನಗಳಲ್ಲಿ ಪ್ರಮುಖ ಕೆರೆಗಳನ್ನು ತುಂಬಿಸಲಾಗುವುದು. ಈ ಪೈಕಿ ಗುಬ್ಬಿ ಅಮಾನಿಕೆರೆ ಮತ್ತು ಕಡಬ ಕೆರೆಗೆ ಜೋರಾಗಿ ನೀರು ಹರಿಸಿ ಭರ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆÉ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಹೇರೂರು ಕೆರೆಯ ಕೋಡಿಯಲ್ಲಿ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಜತೆಗೆ ಜಿಲ್ಲಾ ಸಚಿವರು ತುರ್ತುಸಭೆ ಕರೆದು ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಇರುವಲ್ಲಿ ನೀರು ಹರಿಸಿಕೊಳ್ಳಲು ಕ್ರಮವಹಿಸಲಿದ್ದಾರೆ. ಸಮರ್ಪಕವಾಗಿ ನೀರು ಹಂಚಿಕೆ ನಡೆದಿದೆ. ಈ ಮಧ್ಯೆ ಶಿರಾ ಭಾಗದಲ್ಲಿ ಕೆಲವರು ಗುಬ್ಬಿಗೆ ನೀರು ಬಾರದಂತೆ ಮರಳಿನಚೀಲ ಹಾಕಿರುವುದು ಸರಿಯಲ್ಲ. ಅವರಿಗೆ ಈಗಾಗಲೆ ಮೂರು ಟಿಎಂಸಿ ನೀರು ಹರಿಸಲಾಗಿದೆ. ನಿಯಮಕ್ಕೂ ಅಧಿಕ ನೀರು ಪಡೆದು ಈ ರೀತಿ ತೊಂದರೆ ಕೊಡುವುದು ಸಮಂಜಸವಲ.್ಲ ಮುಂದಿನ ದಿನದಲ್ಲಿ ಅಭಿವೃದ್ದಿ ಕೆಲಸ ಮತ್ತು ಸರ್ಕಾರದ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲಿದೆ ಎಂದರು.
ದೇಶದ ಹಿತ ಕಾಯುವ ಪೌರತ್ವ ಮಸೂದೆ ಅಂಗೀಕಾರ ಅತ್ಯವಶ್ಯಕವಾಗಿದೆ. ಸಲ್ಲದ ಕಾರಣ ಹುಡುಕುವ ಕಾಂಗ್ರೆಸ್ ತನ್ನ ತೀಟೆ ತೀರಿಸಿಕೊಳ್ಳಲು ವಿರೋಧ ಹುಡುಕುತ್ತಿದೆ. ಆದರೆ ಈ ಮಸೂದೆ ಅಂಗೀಕರಿಸಲು ಕಾಂಗ್ರೆಸ್ ಸದಸ್ಯರ ಓಟು ಸಹ ಬಿದ್ದಿದೆ ಎಂಬುದನ್ನು ಮರೆತಿದೆ. ಈ ಹಿಂದೆ ಪಾಕಿಸ್ತಾನದಲ್ಲಿದ್ದ ಶೇ.26 ರಷ್ಟು ಹಿಂದೂಗಳ ಸಂಖ್ಯೆ ಕೇವಲ ಶೇ.3 ಕ್ಕೆ ಇಳಿದಿದೆ. ಬಾಂಗ್ಲಾದಲ್ಲಿ ಶೇ.27 ರಷ್ಟಿದ್ದ ಹಿಂದೂಗಳು ಶೇ.7 ರಷ್ಟು ಮಾತ್ರ ಕಾಣಿಸುತ್ತಿದ್ದಾರೆ.
ಹೀಗೆ ಮುಸ್ಲಿಂ ದೇಶಗಳಲ್ಲಿರುವ ಪೌರತ್ವ ಮಸೂದೆಯಂತೆ ನಮ್ಮಲ್ಲಿ ಸಹ ಪೌರತ್ವ ಮಸೂದೆ ಅಂಗೀಕಾರಗೊಳಿಸಲಾಗಿದೆ. ಈ ಬಗ್ಗೆ ವಿರೋಧ ಚಕಾರವಿಲ್ಲ. ಕಾಂಗ್ರೆಸ್ ಮಾತ್ರ ಹುಡುಕುತ್ತಾ ಇದೆ ಎಂದು ಟೀಕಿಸಿದರು.ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಅಭಿವೃದ್ದಿ ಕೆಲಸಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿ ನೇಮಿಸಿ ಪರಿಹಾರ ನೀಡಲಾಗುತ್ತಿದೆ. ಮತ್ತೊಮ್ಮೆ 500 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಪರಿಹಾರಕ್ಕೆ ಒದಗಿಸಲಾಗಿದೆ. ಈ ಜತೆಗೆ ಅವೈಜ್ಞಾನಿಕ ಎನಿಸಿದ್ದ ಅಂಡರ್ಪಾಸ್ ಸೇತುವೆಗಳ ಬದಲಿಗೆ ಫ್ಲೈಓವರ್ ಸೇತುವೆಗಳ ನಿರ್ಮಾಣಕ್ಕೆ ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಹೆಚ್ಚಾದ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಮಾದಕವಸ್ತುಗಳ ಮಾರಾಟ ದಂಧೆ ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಮಾಫಿಯಾ ಕಡಿವಾಣಕ್ಕೆ ಸೂಚಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಹೇಮೆಯಿಂದ ತುಂಬಿ ಹರಿದ ಹೇರೂರು ಕೆರೆಗೆ ಬಾಗಿನ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎಚ್.ಜಗನ್ನಾಥ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ಜಿ.ಕಲ್ಪನಾ, ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಜಯಲಕ್ಷ್ಮೀ ಕುಮಾರ್, ರಾಜೇಶ್ವರಿ ರಾಜು, ಮಹಮದ್ ಸಾದಿಕ್, ತಹಸೀಲ್ದಾರ್ ಎಂ.ಮಮತಾ, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್ಕುಮಾರ್, ಕೆ.ಬಿ.ಕೃಷ್ಣಪ್ಪ, ವಿರೂಪಾಕ್ಷ, ಪತ್ರೆ ದಿನೇಶ್, ಪಪಂ ಮುಖ್ಯಾಧಿಕಾರಿ ನಾಗೇಂದ್ರ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
