ಬೆಂಗಳೂರು
ಯು ಟೂಬ್ನಲ್ಲಿ ಕಾರುಗಳ ಬೀಗ ತೆಗೆಯುವುದನ್ನು ನೋಡಿ ಕೀ ಆಪರೇಟಿಂಗ್ ಪ್ರೋಗ್ರಾಂ ಬಳಸಿ ದುಬಾರಿ ಕಾರುಗಳನ್ನು ಕಳವು ಮಾಡಿ ಮಂಗಳೂರಿನ ಗ್ಯಾರೇಜ್ಗೆ ಮಾರಾಟ ಮಾಡಿ ವೇಶ್ಯಾವಾಟಿಕೆ ಇನ್ನಿತರ ದುಶ್ಟಟಗಳಿಗೆ ಹಣ ವಿನಿಯೋಗಿಸಿ ಮೋಜು ಮಾಡುತ್ತಿದ್ದ ಖತರ್ನಾಕ್ ಕಾರುಗಳ್ಳರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿ ೪೦ ಲಕ್ಷ ಮೌಲ್ಯದ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕೊಲ್ಲಂನ ದಿಲೀಶ್ (೩೮) ಹಾಗೂ ವಯನಾಡು ಜಿಲ್ಲೆಯ ಸುಲ್ತಾನ್ ಬಥೇರಿಯಾದ ಶಾಜಿಕೇಶವನ್ ಅಲಿಯಾಸ್ ಶಾಜಿ (೪೭) ಬಂಧಿತ ಕಾರುಗಳ್ಳರಾಗಿದ್ದಾರೆ. ಇವರಿಂದ ಕಳವು ಮಾಡಿದ ಕಾರುಗಳನ್ನು ಖರೀದಿಸಿ ಬಿಡಿ ಭಾಗಗಳನ್ನು ತೆಗೆದು ರಿಪೇರಿಗೆ ಬಂದ ಕಾರುಗಳಿಗೆ ಜೋಡಿಸಿ ಇಲ್ಲವೇ ಪಘಾತವಾದ ಕಾರುಗಳ ದಾಖಲಾತಿಗಳಲ್ಲಿರುವ ಇಂಜಿನ್ ಮತ್ತು ಚ್ಯಾಚಿಸ್ ನಂಬರ್ಗಳನ್ನು ಟ್ಯಾಂಪರಿಂಗ್ ಮಾಡಿ ಗ್ರಾಹಕರಿಗೆ ಅಸಲಿ ಕಾರುಗಳೆಂದು ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದಿಸುತ್ತಿದ್ದ ಮಂಗಳೂರಿನ ಸೂರತ್ಕಲ್ನ ಗ್ಯಾರೇಜ್ನ ಮಾಲೀಕ ಅಲಿ ಅಹ್ಮದ್ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ೩ ಸ್ಕಾರ್ಪಿಯೋ, ೪ ರಿಡ್ಜ್. ೧ ಮಾರುತಿ ಸ್ವಿಫ್ಟ್, ೧ ಮಾರುತಿ ೮೦೦ ಸೇರಿ ೪೦ ಲಕ್ಷ ಮೌಲ್ಯದ ೯ ಕಾರುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಮಾಹಿತಿ ಪಡೆದು ಕಳವು
ಬಂಧಿತ ಗ್ಯಾರೇಜ್ ಅಂಗಡಿ ಮಾಲೀಕ ಅಲಿ ಅಹ್ಮದ್ ತನ್ನ ಅಂಗಡಿಗೆ ರಿಪೇರಿಗೆ ಬರುವ ಅಪಘಾತಗೊಂಡ ಕಾರುಗಳ ಮಾಹಿತಿಯನ್ನು ದಿಲೀಶ್ ಹಾಗೂ ಶಾಜಿಕೇಶವನ್ನನ್ನು ಸಂಪರ್ಕಿಸಿ, ನೀಡುತ್ತಿದ್ದ ಕಾರಿನ ಮಾಡೆಲ್, ಬಣ್ಣವನ್ನು ತಿಳಿಸಿ ಅಂತಹುದೇ ಮಾದರಿಯ ಕಾರು ಕಳವು ಮಾಡಲು ತಿಳಿಸುತ್ತಿದ್ದ.
ನಂತರ ಇವರಿಬ್ಬರು ಹಗಲಿನ ವೇಳೆ ಉತ್ತರ ವಿಭಾಗದ ಮಹಾಲಕ್ಷ್ಮಿ ಲೇಔಟ್, ಅನ್ನಪೂರ್ಣೇಶ್ವರಿ ನಗರ, ನಂದಿನಿ ಲೇಔಟ್, ಬಾಗಲಗುಂಟೆ ಇನ್ನಿತರ ಕಡೆಗಳಲ್ಲಿ ಸುತ್ತಾಡುತ್ತ ಅಲಿ ಅಹ್ಮದ್ ಮಾಹಿತಿ ನೀಡಿದ ಕಾರುಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಸುಲಭದಲ್ಲಿ ಸ್ಟಾರ್ಟ್
ಅದೇ ಮಾದರಿಯ ಕಾರುಗಳು ದೊರೆತ ಕೂಡಲೇ ರಾತ್ರಿ ವೇಳೆ ಹೋಗಿ ಯು ಟೂಬ್ನಲ್ಲಿ ಕಾರುಗಳ ಬೀಗ ತೆಗೆಯುವ ವೀಡಿಯೋವನ್ನು ಕರಗತ ಮಾಡಿಕೊಂಡು ಸುಲಭವಾಗಿ ಗಾಜು ತೆಗೆದು ಕೀ ಆಪರೇಟಿಂಗ್ ಪ್ರೋಗ್ರಾಂ ಮೂಲಕ ಬೀಗ ತೆಗೆದು ಕಾರು ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗುತ್ತಿದ್ದರು.
ಒಂದು ವೇಳೆ ಹೀಗ ತೆಗೆಯಲು ಆಗದಿದ್ದರೆ ಬೀಗದ ಬಳಿಯೇ ಕೀ ಆಪರೇಟಿಂಗ್ ಪ್ರೋಗ್ರಾಂ ಚಿಪ್ನ್ನು ಉಪಯೋಗಿಸಿ ನಕಲಿ ಕೀ ಜತೆ ಬಳಸಿ ಸ್ಟಾರ್ಟ್ ಮಾಡಿ ಕಳವು ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಅಡ್ಡ ರಸ್ತೆ ಬಳಕೆ
ಕಳವು ಮಾಡಿದ ಕಾರುಗಳನ್ನು ಹೆದ್ದಾರಿ ಹಾಗೂ ಟೋಲ್ ರಸ್ತೆಗಳಲ್ಲಿ ಚಲಾಯಿಸಿಕೊಂಡು ಹೋದರೆ ಸಿಸಿ ಕ್ಯಾಮರಾಗಳಿಂದ ಸಿಕ್ಕಿ ಬೀಳುತ್ತೇವೆ ಎಂಬ ಕಾರಣಕ್ಕಾಗಿ ಅಡ್ಡ ರಸ್ತೆಗಳಲ್ಲಿ ಚಾಲನೆ ಮಾಡಿಕೊಂಡು ಹೋಗಿ ಮಂಗಳೂರಿನ ಗ್ಯಾರೇಜ್ಗೆ ಹಿಟ್ಟು ಹಣ ಪಡೆದುಕೊಳ್ಳುತ್ತಿದ್ದರು.
ಇವರಿಬ್ಬರು ಮಾರಿದ ಕಾರುಗಳನ್ನು ಗ್ಯಾರೇಜ್ನಲ್ಲಿದ್ದ ಅಪಘಾತವಾದ ಕಾರುಗಳ ದಾಖಲಾತಿಗಳಲ್ಲಿರುವ ಇಂಜಿನ್ ಮತ್ತು ಚ್ಯಾಚಿಸ್ ನಂಬರ್ಗಳನ್ನು ಟ್ಯಾಂಪರಿಂಗ್ ಮಾಡಿ ಗ್ರಾಹಕರಿಗೆ ಅಸಲಿ ಕಾರುಗಳೆಂದು ಅಲಿಅಹ್ಮದ್ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ.
ದುಶ್ಚಟಗಳ ದಾಸರು
ಆರೋಪಿಗಳು ಕಳವು ಕಾರುಗಳ ಮಾರಾಟದಿಂದ ಬಂದ ಹಣದಿಂದ ಮದ್ಯಪಾನ, ವೇಶ್ಯಾವಾಟಿಕೆ, ಇನ್ನಿತರ ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದರು. ಬಾಗಲಗುಂಟೆಯ ವಿನಾಯಕ ನಗರದಲ್ಲಿ ಕಳೆದ ಆ. ೨೯ ರಂದು ರವಿಕುಮಾರ್ ಎಂಬುವರ ಕಾರುಗಳವು ಪ್ರಕರಣವನ್ನು ದಾಖಲಿಸಿದ್ದ ಇನ್ಸ್ಪೆಕ್ಟರ್ ಶಿವಸ್ವಾಮಿ ಮತ್ತವರ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಾದ ದಿಲೀಶ್ ಹಾಗೂ ಶಾಜಿಕೇಶವನ್ ಹಿಂದೆ ಹುಳಿಮಾವು ಹಾಗೂ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಂಧಿತರಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು. ಆರೋಪಿಗಳ ಬಂಧನದಿಂದ ಬಾಗಲಗುಂಟೆಯ ೪, ಮಹಾಲಕ್ಷ್ಮಿ ಲೇಔಟ್, ಅನ್ನಪೂರ್ಣೇಶ್ವರಿ ನಗರ ತಲಾ ೧, ಸುಬ್ರಮಣ್ಯನಗರ ೨ ಸೇರಿ ೯ ಕಾರುಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
