ಚಿತ್ರದುರ್ಗ:
ಆಧುನಿಕ ಯುಗದಲ್ಲಿ ಮಾನವನ ಜೀವನ ಶೈಲಿ ತುಂಬಾ ಬದಲಾವಣೆಯಾಗಿರುವುದರಿಂದ ವೃದ್ದ ತಂದೆ-ತಾಯಿಗಳನ್ನು ಕಡೆಗಣಿಸುತ್ತಿರುವುದು ಒಳ್ಳೆಯ ಸಂಪ್ರದಾಯವಲ್ಲ ಎಂದು ಪ್ರೊ.ಬಸವರಾಜ್ ಟಿ.ಬೆಳಗಟ್ಟ ವಿಷಾಧಿಸಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಾಸವಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದ ಹಿರಿಯರ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಒತ್ತಡದ ನಡುವೆ ಬದುಕುತ್ತಿರುವುದರಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಮನೆಯಲ್ಲಿ ಹಿರಿಯರನ್ನು ಕಡೆಗಣಿಸುತ್ತಿದ್ದಾರೆ. ವೃದ್ದರನ್ನು ಗೌರವಿಸಿದರೆ ಪರಮಾತ್ಮನನ್ನು ಗೌರವಿಸಿದಂತೆ. ಹಾಗಾಗಿ ಮಕ್ಕಳು ಬೆಳೆದು ದೊಡ್ಡವರಾಗಿ ಉನ್ನತ ಸ್ಥಾನಕ್ಕೆ ಹೋದ ಮೇಲೆ ತಂದೆ-ತಾಯಿ ಗುರು-ಹಿರಿಯರನ್ನು ಮರೆಯಬಾರದು ಎಂದು ಹೇಳಿದರು.
ನನ್ನ ತಂದೆ-ತಾಯಿಯನ್ನು ಕಳೆದುಕೊಂಡು ಈಗ ನಾನು ಹಿರಿಯರ ಮಾರ್ಗದರ್ಶನವಿಲ್ಲದೆ ನೋವು ಅನುಭವಿಸುತ್ತಿದ್ದೇನೆ. ವೃದ್ದರು ಎಂದರೆ ವಯಸ್ಸಾದವರು ಎಂದರ್ಥವಲ್ಲ. ಶ್ರೇಷ್ಟರು, ಅನುಭವಿಗಳು, ದೇವರಿಗೆ ಸಮಾನರು ಎಂದು ಮಕ್ಕಳು ಗೌರವದಿಂದ ಕಾಣಬೇಕು.
ಜ್ಯೋತಿ ಲಕ್ಷ್ಮಣ್ ಮಾತನಾಡಿ ವೃದ್ದರನ್ನು ನಿರ್ಲಕ್ಷಿಸದೆ ಕೊನೆಗಾಲದಲ್ಲಿ ಜೋಪಾನವಾಗಿ ಕಾಪಾಡಿದರೆ ಜೀವನದಲ್ಲಿ ಮುಕ್ತಿ ಹೊಂದಲು ಸಾಧ್ಯ ಎಂದು ತಿಳಿಸಿದರು.ಆನಂದ ಕುಮರ, ಪ್ರತಿಭಾ ಅರುಣ್ಕುಮಾರ್, ಲಕ್ಷ್ಮಣ, ಶಾರದಮ್ಮ, ಶಾಂತಿನಿಕೇತನ ಸಂಸ್ಥೆಯ ಲಕ್ಷ್ಮಣಬಾಬು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ