ಇತಿಹಾಸ ಕಾಲ್ಪನಿಕ ಲೋಕವಲ್ಲ;ಡಾ.ಶಿಮೂಶ

ಚಿತ್ರದುರ್ಗ :

       ಕೆಲವರು ಪುರಾಣವನ್ನು ಇತಿಹಾಸವನ್ನಾಗಿ ಮತ್ತು ಇತಿಹಾಸವನ್ನು ಪುರಾಣವನ್ನಾಗಿ ಬಿಂಬಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

        ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಹಾಗು ಎಸ್.ಜೆ.ಎಂ. ಮಹಿಳಾ ಮಹಾವಿದ್ಯಾಲಯ ಚಿತ್ರದುರ್ಗ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇತಿಹಾಸವೇ ಬೇರೆ ಪುರಾಣವೇ ಬೇರೆ. ಪುರಾಣ ಕಾಲ್ಪನಿಕ ಲೋಕ, ಅದರ ಮೂಲ ಕಲ್ಪನೆ. ಊಹಿಸಿಕೊಂಡಂತೆ ಕಲ್ಪನೆಗಳು ಬರುತ್ತವೆ. ಆದರೆ ಇತಿಹಾಸ ಕಾಲ್ಪನಿಕ ಲೋಕವಲ್ಲ.

      ಇದಕ್ಕೆ ಕಾಲದ ಚೌಕಟ್ಟು ಇರುತ್ತದೆ ಹಾಗು ಸತ್ಯಕ್ಕೆ ಸಮೀಪವಾಗಿರುತ್ತದೆ. ಇತಿಹಾಸಕ್ಕೆ ವಾಸ್ತವಿಕತೆಯೇ ಮೂಲ. ಈ ನೆಲೆಗಟ್ಟಿನ ಮೇಲೆ ಅಧ್ಯಯನ ಮಾಡಬೇಕಿದೆ. ಪುರಾಣ ಅವಾಸ್ತವಿಕವಾದ ಕಲ್ಪನೆಗಳ ಮೇಲೆ ನಿಂತಿರುತ್ತದೆ. ಇತಿಹಾಸಕ್ಕೆ ಗಟ್ಟಿ ನೆಲೆ ಇದೆ. ಇಲ್ಲಿ ಮೂರು ಅಂಶಗಳು ಮುಖ್ಯ. ಇತಿಹಾಸವನ್ನು ಅರಿಯುವುದು, ಇತಿಹಾಸವನ್ನು ಬೋಧಿಸುವುದು ಮತ್ತು ಇತಿಹಾಸವನ್ನು ನಿರ್ಮಿಸುವುದು. ಚಿತ್ರದುರ್ಗ ಇತಿಹಾಸದ ಕಣಜ.

         ಇತಿಹಾಸವನ್ನು ಬದುಕಿನ ಆಧಾರ ಎಂದುಕೊಂಡವರು ಸಂಶೋಧನೆಯನ್ನು ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂದರೆ ಡಾ. ಬಿ.ರಾಜಶೇಖರಪ್ಪ. ಇವರದು ಆಳವಾದ ಅಧ್ಯಯನ. ನಮ್ಮ ರಾಷ್ಟ್ರಕ್ಕೆ ಸಂಪನ್ಮೂಲ ವ್ಯಕ್ತಿಗಳು ಬೇಕಿದೆ. ಪ್ರತಿಯೊಬ್ಬ ವ್ಯಕ್ತಿಗೂ ಇತಿಹಾಸವನ್ನು ನಿರ್ಮಿಸುವಂತಹ ಅವಕಾಶಗಳು ಇವೆ. ಸಾಹಸ ಅಥವಾ ಸಾಧನೆಯನ್ನು ಮಾಡಿದಾಗ ಇತಿಹಾಸ ಆಗುತ್ತದೆ. ಮಾನವನ ಮೆದುಳಿನಲ್ಲಿ ಅಪ್ರತಿಮ ಸಾಹಸ ಮಾಡುವ ಶಕ್ತಿ ಇದೆ ಎಂದರು.

        ಮುಖ್ಯಅತಿಥಿ ಪತ್ರಾಗಾರ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಇತಿಹಾಸ ಅರಿಯದವನು ಬದುಕನ್ನು ಕಟ್ಟಿಕೊಳ್ಳಲಾರ. 1881ರಿಂದ 1973ರವರೆಗಿನ ಚಾರಿತ್ರಿಕ ದಾಖಲೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅತಿಗಣ್ಯ ವ್ಯಕ್ತಿಗಳ ವಿಡಿಯೋ ಆಡಿಯೋ ಮಾಡಲಾಗಿದೆ. ಮೈಸೂರು ಮಹಾರಾಜರ ಆಡಳಿತದ ದಾಖಲೆಗಳನ್ನು ಪ್ರದರ್ಶನ ಮಾಡಲಾಗಿದೆ. 25 ಲಕ್ಷ ಪುಟಗಳಷ್ಟು ದ್ದಾಖಲೆಗಳನ್ನು ವೆಬ್‍ಸೈಟ್‍ನಲ್ಲಿ ಹಾಕಿದ್ದೇವೆ. ವೆಬ್‍ಸೈಟ್ ಮೂಲಕ ವಿದ್ಯಾರ್ಥಿಗಳು, ಸಂಶೋಧಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

        ನಾನಾ ಬೆಲೆಯ ಸ್ಟಾಂಪ್‍ಗಳು, ಮಹಾತ್ಮ ಗಾಂಧೀಜಿಯವರು ಕರ್ನಾಟಕಕ್ಕೆ ಆಗಮಿಸಿದಾಗ ತೆಗೆದ ಚಿತ್ರಗಳು, ವಿಧಾನಸೌಧ ಕಟ್ಟಡ ನಿರ್ಮಾಣಕ್ಕಿಂತ ಮೊದಲ ಸ್ಥೂಲನಕ್ಷೆ, ಜನರಲ್ ಕೆ.ಎಂ. ಕಾರಿಯಪ್ಪನವರಿಗೆ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ಬರೆದ ಅಭಿನಂದನಾ ಪತ್ರ, ಮೆಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಿಸಿರುವ ಬಗ್ಗೆ ಸರ್ಕಾರವು ಹೊರಡಿಸಿರುವ ಆದೇಶ, 1973, ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಪಿಂಚಣಿ ನೀಡಿರುವ ಆದೇಶ, ಸರ್ಕಾರದ ಸೇವೆಯಲ್ಲಿ ಕನ್ನಡ ಬೆರಳಚ್ಚು ಯಂತ್ರಗಳನ್ನು ಬಳಸುವ ಬಗ್ಗೆ ಇನ್ನು ಮುಂತಾದ ಛಾಯಾಚಿತ್ರಗಳು ಮತ್ತು ಐತಿಹಾಸಿಕ ದಾಖಲೆಗಳ ಪ್ರದರ್ಶನ ಮಾಡಲಾಗಿತ್ತು.

       ವೇದಿಕೆಯಲ್ಲಿ ಚಿತ್ರದುರ್ಗದ ಹಿರಿಯ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಮುಂತಾದವರಿದ್ದರು.

        ಪ್ರಾರಂಭದಲ್ಲಿ ಎಸ್.ಜೆ.ಎಂ. ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಸಿ. ಬಸವರಾಜಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಹೀನಾ ಕೌಸರ್ ವಂದಿಸಿದರು. ಶ್ವೇತಾ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link