ಕುಣಿಗಲ್
ಪಟ್ಟಣದ ಪ್ರತಿಷ್ಠಿತ ವಾರ್ಡ್ ಎಂದೇ ಹೆಸರು ಪಡೆಯುವ ಮೂಲಕ ಚುನಾವಣೆಯಲ್ಲಿಯೂ ಭಾರಿ ಪೈಪೋಟಿಯೊಂದಿಗೆ ಸೆಣೆಸಾಡಿದಂತಹ 18ನೆ ವಾರ್ಡ್ ಹೌಸಿಂಗ್ಬೋರ್ಡ್ನಲ್ಲಿ ಇತ್ತೀಚೆಗಷ್ಟೆ ಡಾಂಬರೀಕರಣಗೊಂಡ ರಸ್ತೆ ಕುಸಿದು ಎರಡು ತಿಂಗಳಾದರೂ ಇನ್ನೂ ದುರಸ್ತಿಕಾಣದೆ ಇರುವುದು ಅನುಮಾನಕ್ಕೆಡೆಮಾಡಿದೆ.
ಈ ಭಾಗದಲ್ಲಿ ಪುರಸಭಾ ಚುನಾವಣೆ ನಡೆಯುವ ಮುನ್ನ ತರಾತುರಿಯಲ್ಲಿ ನಡೆದ ಹಲವು ರಸ್ತೆಗಳ ಡಾಂಬರೀಕರಣ ಪೈಕಿ ಈ ಭಾಗದ ಗಣೇಶನ ದೇವಸ್ಥಾನದ ಮುಂಭಾಗ ಕೆರೆಯ ಕಡೆ ಅದು ಹೋಗುವ ರಸ್ತೆಯ ತಿರುವಿನಲ್ಲಿಯೆ ಸುಮಾರು 15 ಅಡಿ ಉದ್ದ ಹಾಗೂ 2 ಅಡಿ ಆಳ ಕುಸಿದು ಎರಡು ತಿಂಗಳಾದರೂ ಸಂಬಂಧ ಪಟ್ಟ ಪುರಸಭಾ ಅಧಿಕಾರಿಗಳಾಗಲಿ ನೂತನವಾಗಿ ಚುನಾಯಿತರಾದ ಸದಸ್ಯನಾಗಲಿ ನೋಡಿಯೂ ನೋಡದಂತೆ ವರ್ತಿಸುತ್ತಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಈ ರಸ್ತೆಯಲ್ಲಿ ಟಿಂಬರ್ ತುಂಬಿದ ಲಾರಿಯೊಂದು ಬಂದ ಪರಿಣಾಮ ಹೀಗೆ ಉಂಟಾಯಿತು ಎಂದು ಆರೋಪಿಸುವ ಸ್ಥಳೀಯರು, ಯುಜಿಡಿ ಕಾಮಗಾರಿ ಮಾಡಿದಾಗ ಸಮರ್ಪಕವಾಗಿ ಕಾಮಗಾರಿ ಮಾಡಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಡಾಂಬರೀಕರಣ ಮಾಡುವಾಗ ರೋಲಿಂಗ್ ಮಾಡದೇ ಇರುವುದರಿಂದ ಲಾರಿ ಬಂದ ವೇಳೆ ಗುಂಡಿ ಬಿದ್ದಿದೆ ಎನ್ನುತ್ತಾರೆ. ಇದಕ್ಕೆ ಏನೇ ಕಾರಣ ಇದ್ದರೂ ಸರಿಯೆ ಈ ಗುಂಡಿ ಬಿದ್ದು ಕೆಲ ತಿಂಗಳಾಗಿದ್ದು, ರಸ್ತೆಯ ತಿರುವಿನಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ.
ಸೈಕಲ್ ಸೇರಿದಂತೆ ದ್ವಿಚಕ್ರವಾಹನಗಳಲ್ಲಿ ಬರುವ ಸವಾರರು ಗೊತ್ತಾಗದೆ ಸಡನ್ ಬ್ರೇಕ್ ಹಾಕಿ ಬಿದ್ದವರು ಹಾಗೂ ಮಕ್ಕಳು, ವೃದ್ದರು ನಿತ್ಯ ಸಂಚರಿಸುವಾಗ ಬಿದ್ದು ಗಾಯಗೊಂಡಂತಹ ಪರಿಸ್ಥಿತಿಯು ಉಂಟಾಗಿದ್ದರೂ ಗಮನ ಹರಿಸದಿರುವುದು ಅನಾಗರಿಕತೆಯ ವರ್ತನೆಯಾಗಿದೆ ಎಂದು ಖಂಡಿಸಿರುವ ಹಿರಿಯ ನಾಗರಿಕರು ಕೂಡಲೆ ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
