ಚಳ್ಳಕೆರೆ
ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಹಂತದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ನಿರ್ಬಂಧ ಹೇರಿದ್ದು. ಈ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪೌರಾಡಳಿತ ಇಲಾಖೆ ಜಿಲ್ಲಾಧಿಕಾರಿಗಳ ಮೂಲಕ ಕಿರಾಣಿ ಅಂಗಡಿ, ಹೋಟೆಲ್, ಬೇಕರಿ ಇನ್ನಿತರೆ ಕಡೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತಡೆಯುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮತ್ತು ಸಿಬ್ಬಂದಿ ವರ್ಗ ಕಳೆದ ಒಂದು ತಿಂಗಳಿನಿಂದ ಬೆಳಗ್ಗೆ, ಸಂಜೆ ವೇಳೆಯಲ್ಲಿ ಹೋಟೆಲ್, ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ಕವರ್ಗಳನ್ನು ಬಳಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ನಗರದ ಹೋಟೆಲ್ ಮಾಲೀಕರು ಇಲ್ಲಿನ ಅರಮನೆ ಹೋಟೆಲ್ ಸಭಾಂಗಣದಲ್ಲಿ ಗುರುವಾರ ತುರ್ತು ಸಭೆ ನಡೆಸಿ ಪ್ಲಾಸ್ಟಿಕ್ ಕವರ್ ನಿಷೇಧಿಸುವ ಕುರಿತು ಸುಧೀರ್ಘ ಚರ್ಚೆ ನಡೆಸಿದರು.
ಜ್ಯೋತಿ ಪ್ರಕಾಶ್ ಹೋಟೆಲ್ ಮಾಲೀಕ ಲೋಕಮಾನ್ಯ ಮಾತನಾಡಿ, ಸರ್ಕಾರದ ನಿಯಮಗಳನ್ನು ಪಾಲಿಸಲೇ ಬೇಕಿದೆ. ಪ್ರತಿನಿತ್ಯದ ವ್ಯವಹಾರದ ಜೊತೆಯಲ್ಲಿ ಆಗಾಗ ಭೇಟಿ ನೀಡುವ ಅಧಿಕಾರಿಗಳಿಗೆ ಉತ್ತರ ನೀಡಬೇಕಿದೆ. ಪ್ರತಿ ಸಂದರ್ಭದಲ್ಲೂ ಸಮಸ್ಯೆಯನ್ನು ನಿವಾರಿಸಲು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಚಿಂತನೆ ಮಾಡಬೇಕೆಂದರು.
ಶ್ರೀರಾಮಹೋಟೆಲ್ ಮಾಲೀಕ ಡಿ.ಎನ್.ಗುರುರಾಜ್ರಾವ್ ಮಾತನಾಡಿ, ಪ್ರತಿನಿತ್ಯ ಹಗಲು ರಾತ್ರಿ ಎನ್ನದೆ ಪೌರಾಯುಕ್ತರು ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಗ್ರಾಹಕರು ಪಾರ್ಸಲ್ ಕೇಳಿದಾಗ ಅನಿವಾರ್ಯವಾಗಿ ಪ್ಲಾಸ್ಟಿಕ್ ಕವರ್ಗಳನ್ನು ಉಪಯೋಗಿಸಬೇಕಿದೆ. ನಿಯಮ ಮೀರಿ ಪ್ಲಾಸ್ಟಿಕ್ ಕವರ್ ಬಳಸಿದಲ್ಲಿ ಕಾನೂನು ಕ್ರಮ ಎದುರಿಸಬೇಕು. ಅದ್ದರಿಂದ ಪ್ಲಾಸ್ಟಿಕ್ ಕವರ್ಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.
ಹೋಟೆಲ್ ಹರಿಪ್ರಸಾದ್ ಮಾಲೀಕ ಪ್ರಕಾಶ್ಶೆಟ್ಟಿ ಮಾತನಾಡಿ, ಪ್ರತಿನಿತ್ಯ ಹೋಟೆಲ್ಗೆ ಬರುವ ಗ್ರಾಹಕರು ಪ್ಲಾಸ್ಟಿಕ್ ಕವರ್ಗಳಲ್ಲಿ ತಿಂಡಿ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದು ವಾಡಿಕೆ. ಎಲ್ಲಾ ಸಂದರ್ಭಗಳಲ್ಲಿ ಪೇಪರ್ ಕವರ್ಗಳನ್ನು ಉಪಯೋಗಿಸಲು ಬರುವುದಿಲ್ಲ. ಆದರೆ, ಕವರ್ ಬಳಸಿದರೆ ಕಾನೂನು ಕ್ರಮ ಅನಿವಾರ್ಯವಾಗಿ ಎದುರಿಸಬೇಕು. ಇದರಿಂದ ವ್ಯವಹಾರಗಳಿಗೆ ತೊಂದರೆಯಾಗುವುದರಿಂದ ಪ್ಲಾಸ್ಟಿಕ್ ಕವರ್ ಬಳಕೆ ಸಂಪೂರ್ಣವಾಗಿ ಎಲ್ಲಾ ಹೋಟೆಲ್ನವರು ಕೈಬಿಡುವುದು ಉತ್ತಮ. ಇದರ ಬದಲಿ ಬಾಳೆ ಎಲೆಗಳ ಬಳಕೆ ಮಾಡುವಂತೆ ಪೌರಾಯುಕ್ತರು ಸಲಹೆ ನೀಡಿದ್ದು, ಇದನ್ನು ಮುಂದುವರೆಸಬೇಕೆಂದರು.
ಅಂತಿಮವಾಗಿ ಎಲ್ಲಾ ಹೋಟೆಲ್ ಮಾಲೀಕರು ನಾವು ಹೋಟೆಲ್ಗಳಲ್ಲಿ ಇನ್ನು ಮುಂದೆ ಪ್ಲಾಸ್ಟಿಕ್ ಕವರ್ಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತೇವೆ. ಯಾವುದೇ ಹಂತದಲ್ಲೂ ಪ್ಲಾಸ್ಟಿಕ್ ಕವರ್ಗಳನ್ನು ಬಳಸುವುದಿಲ್ಲ. ಆದರೆ, ಕೆಲವೆಡೆ ಪ್ಲಾಸ್ಟಿಕ್ ಕವರ್ಗಳನ್ನು ಇಲಾಖೆ ಕಣ್ಣು ತಪ್ಪಿಸಿ ಉಪಯೋಗಿಸುತ್ತಿದ್ದು, ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಸರ್ಕಾರದ ಆದೇಶವನ್ನು ಎಲ್ಲಾ ಹೋಟೆಲ್ ಮಾಲೀಕರು ತಪ್ಪದೆ ಪಾಲಿಸುತ್ತವೆ ಎಂದರು. ಇದೇ ಸಂದರ್ಭದಲ್ಲಿ ಸಾರ್ವಜನಿಕವಾಗಿ ಮನವಿ ಮಾಡಿದ ಹೋಟೆಲ್ ಮತ್ತು ಬೇಕರಿ ಮಾಲೀಕರು ಗ್ರಾಹಕರಿಗೆ ಪ್ಲಾಸ್ಟಿಕ್ ಕವರ್ಗಳಲ್ಲಿ ಪಾರ್ಸಲ್ಗಳನ್ನು ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪೇಪರ್ ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಿದ್ದು, ಇವುಗಳಲ್ಲಿಯೇ ಪಾರ್ಸಲ್ಗಳನ್ನು ಪಡೆಯುವಂತೆ ಮನವಿ ಮಾಡಿದ್ಧಾರೆ. ಹೋಟೆಲ್ ಮಾಲೀಕರಾದ ವಿಜಯಪ್ರಕಾಶ್ಶೆಟ್ಟಿ, ಜಯಪ್ರಕಾಶ್ಶೆಟ್ಟಿ, ಗುರು, ಕರಿಬಸಪ್ಪ, ನಿರಂಜನ್, ದಿನೇಶ್, ಗಿರೀಶ್, ಲೋಕೇಶ್, ಜಗದೀಶ್, ಶ್ರೀನಾಥ ಬೇಕರಿ ಮಾಲೀಕರಾದ ಗಣೇಶ್, ಗುರುರಾಜ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
