ಚಳ್ಳಕೆರೆ
ನಗರದ ಹಳೇಟೌನ್ನಲ್ಲಿರುವ ಸಾವಿರಾರು ಭಕ್ತರ ಆರಾಧ್ಯದೈವವಾದ ಶ್ರೀಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಮಾರಿಕಾಂಬ ದೇವಸ್ಥಾನದ ಹುಂಡಿಯನ್ನು ಸಹ ಭಾನುವಾರ ಬೆಳಗಿನ ಜಾವ ನಡೆದಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಎರಡೂ ದೇವಸ್ಥಾನಗಳ ಹುಂಡಿಯ ಕಳ್ಳತನ ನಡೆದಿದ್ದು, ಪೊಲೀಸ್ ಇಲಾಖೆಯ ನಿರ್ಲಕ್ಷತೆಯ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದ್ದಾರೆ.
ನಗರದ ಹಳೇ ಟೌನ್ ಶ್ರೀಪೇಟೆ ಆಂಜನೇಯಸ್ವಾಮಿ ದೇವಸ್ಥಾನವನ್ನು ಹಿರಿಯ ಆರ್ಚಕ ಎನ್.ಶಿವಕುಮಾರ್ ಕಳೆದ 40 ವರ್ಷಗಳಿಂದ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು, ಎಂದಿಗೂ ಸಹ ಈ ರೀತಿಯ ಕಳ್ಳತನವಾಗಿರಲಿಲ್ಲ. ವಿಶೇಷವೆಂದರೆ ದೇವಸ್ಥಾನದ ಮುಂಭಾಗಿಲ ಬಾಗಿಲಿನ ಬೀಗ ಭದ್ರವಾಗಿದ್ದು, ಕಳ್ಳರು ದೇವಸ್ಥಾನದ ಹಿಂಬದಿ ಮನೆಯಿಂದ ಪ್ರವೇಶಿಸಿ ಎರಡೂ ಬಾಗಿಲುಗಳ ಬೀಗಗಳನ್ನು ಮುರಿದು, ದೇವರ ಹುಂಡಿಯ ಲಾಕನ್ನು ಸಹ ಯಾವುದೋ ಆಯುಧದಿಂದ ಬೇರ್ಪಡಿಸಿ ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಈ ದೇವಸ್ಥಾನ ಪೂಜೆಯನ್ನು ಪ್ರತಿನಿತ್ಯವೂ ಮಾಡುತ್ತಿದ್ದು ಮಂಗಳವಾರ ಬೆಳಗ್ಗೆ 5ರ ಸಮಯದಲ್ಲಿ ದೇವಸ್ಥಾನದ ಆರ್ಚಕರು ಪೂಜೆಗೆ ಬಂದಾಗ ಮುಂಭಾಗದ ಬೀಗ ತೆಗೆದು ಒಳಬಂದಿದ್ದು, ಲೈಟ್ ಹಾಕಿ ಪೂಜೆ ಮಾಡುವ ಸಂದರ್ಭದಲ್ಲಿ ನೋಡಿದರೆ ದೇವಸ್ಥಾನದ ಹುಂಡಿ ತೆರೆದಿದ್ದು ಕಂಡು ಗಾಬರಿಯಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕೂಡಲೇ ವೃತ್ತ ನಿರೀಕ್ಷ ಎನ್.ತಿಮ್ಮಣ್ಣ ಬೆಳಗಿನ ವಾಯುವಿಹಾರದಲ್ಲಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪಿಎಸ್ಐ ಕೆ.ಸತೀಶ್ನಾಯ್ಕಗೆ ಮಾಹಿತಿ ನೀಡಿರುತ್ತಾರೆ. ಪೊಲೀಸರು ಕಳ್ಳತನವಾದ ಬಗ್ಗೆ ವಿಚಾರಣೆ ನಡೆಸಿದ್ದು, ಕೂಡಲೇ ದೇವಸ್ಥಾನದ ಹುಂಡಿ ಕಳ್ಳರನ್ನು ಪತ್ತೆ ಹಚ್ಚಬೇಕಿದೆ. ಸಾರ್ವಜನಿಕರಲ್ಲಿ ಈಗಾಗಲೇ ನಿರಂತರ ಕಳ್ಳತನಗಳ ಬಗ್ಗೆ ಪೊಲೀಸ್ ಇಲಾಖೆಯ ಮೇಲೆ ಬೇಸರ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಾದರೂ ಪೊಲೀಸರು ಕಳ್ಳತನ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಸುವರೆ ಕಾದುನೋಡಬೇಕಿದೆ.
ಗೋಪನಹಳ್ಳಿ ದೇವಸ್ಥಾನದ ಹುಂಡಿ ಪತ್ತೆ
ಗೋಪನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಹುಂಡಿ ಕಳ್ಳತನವಾದ ಬಗ್ಗೆ ಈಗಾಗಲೇ ವರದಿಯಾಗಿದ್ದು, ಕಳ್ಳರು ಸದರಿ ಹುಂಡಿಯನ್ನು ಊರಿಗೆ ಸಮೀಪವಿರುವ ನಿರ್ಮಾಣಗೊಂಡಿರುವ ಸೇತುವೆಯ ಬಳಿ ಎಸೆದಿದ್ದು, ಹುಂಡಿ ಪತ್ತೆಯಾಗಿದೆ.