ಗುಬ್ಬಿ
ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪತಿರಾಯ ಗುಬ್ಬಿ ಠಾಣೆಗೆ ಶರಣಾದ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಪಟ್ಟಣದ ಮಗ್ಗದವರ ಬೀದಿಯಲ್ಲಿ ವಾಸವಿದ್ದ ನಾಗರಾಜು(24) ಆರೋಪಿ. ಕಳೆದ 8 ತಿಂಗಳ ಹಿಂದೆ ತುರುವೇಕೆರೆ ತಾಲ್ಲೂಕು ಸಂಪಿಗೆ ಹೋಬಳಿಯ ತಳವಾರನಹಳ್ಳಿ ಗ್ರಾಮದ ದಿವ್ಯ (21) ಎಂಬಾಕೆಯನ್ನು ವಿವಾಹವಾಗಿದ್ದ ನಾಗರಾಜು ಗುಬ್ಬಿ ಸಮೀಪದ ಜಿ.ಹೊಸಹಳ್ಳಿ ಕ್ರಾಸ್ ಬಳಿ ಫಾಸ್ಟ್ಫುಡ್ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದನು. ನವ ವಿವಾಹಿತರ ನಡುವೆ ಕೆಲ ಕೌಟುಂಬಿಕ ಕಲಹ ನಡೆದಿದ್ದು, ಪತ್ನಿಯ ಶೀಲವನ್ನು ಶಂಕಿಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆಂದು ತಿಳಿದು ಬಂದಿದೆ.
ಅನುಮಾನ ಪರಿಹರಿಸಿಕೊಳ್ಳಲು ಮನೆಗೆ ಸಿಸಿ ಕ್ಯಾಮರಾ ಕೂಡ ಅಳವಡಿಸಿಕೊಂಡಿದ್ದ ಆರೋಪಿ ನಾಗರಾಜು, ಠಾಣೆಗೆ ಶರಣಾದ ಬಳಿಕ ಈ ಮೊದಲೆ ದಿವ್ಯಳಿಗೆ ವಿವಾಹ ಮಾಡಿರುವ ವಿಚಾರ ನನ್ನಿಂದ ಮುಚ್ಚಿಟ್ಟು ನನಗೆ ವಿವಾಹ ಮಾಡಿಕೊಡಲಾಗಿದೆ ಎಂಬ ಹೇಳಿಕೆ ನೀಡಿದ್ದಾನೆ. ಮುಂಜಾನೆ ತನ್ನ ಪತ್ನಿ ದಿವ್ಯ ಜತೆ ಜಗಳವಾಡಿ ಚಾಕುವಿನಿಂದ ಚುಚ್ಚಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಸ್ಥಳಕ್ಕೆ ತಹಸೀಲ್ದಾರ್ ಡಾ.ಪ್ರದೀಪ್ಕುಮಾರ್, ಡಿವೈಎಸ್ಪಿ ಕುಮಾರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ರಾಮಕೃಷ್ಣಯ್ಯ, ಪಿಎಸ್ಐ ಜ್ಞಾನಮೂರ್ತಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು. ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
