ಹೊಸದುರ್ಗ
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸ್ವಪಕ್ಷದ ವಿರುದ್ಧವೇ ಸಿಡಿದೆದ್ದಿದ್ದಾರೆ. ಬಿಜೆಪಿ ತಾಲೂಕು ಅಧ್ಯಕ್ಷರ ನೇಮಕ ವಿಚಾರದಲ್ಲಿ ತನ್ನನ್ನು ಕಡೆಗಣಿಸಿದರ ವಿರುದ್ಧ ಅಸಮಾಧಾನಗೊಂಡಿರುವ ಸ್ವಾಭಿಮಾನದ ಅಸ್ತ್ರ ಬಳಸಿದ್ದಾರೆ.
ಇಲ್ಲಿನ ಬನಶಂಕರಿ ಭವನದಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ತಾಲೂಕು ಅಧ್ಯಕ್ಷ ನೇಮಕ ವಿಚಾರದಲ್ಲಿ ಒಬ್ಬರಿಬ್ಬರು ಸೇರಿ ಮನಸೋ ಇಚ್ಛೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಪಕ್ಷ ತಮ್ಮದೇ ಕಪಿಮುಷ್ಟಿಯಲ್ಲಿರಬೇಕೆಂದು ನನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಅವರು, ಗೂಳಿಹಟ್ಟಿ ಪಕ್ಷ ಬಿಟ್ಟು ಹೋಗ್ತಾರೆ ಎಂದು ಪಕ್ಷದ ನಾಯಕರಿಗೆ ಚಾಡಿ ಹೇಳಿಕೊಂಡು ಬರುತ್ತಿದ್ದಾರೆ ತುರ್ತಾಗಿ ಹೊಸದುರ್ಗದ ಶಾಸಕರಾಗಲು ಕೆಲವರಿಂದ ಷಡ್ಯಂತ್ರ ನಡೆಯುತ್ತಿದೆ.
ನಾನು ಅವರ ಹೆಸರು ಹೇಳಲು ಇಚ್ಚೆಯುಸುವುದಿಲ್ಲ ಎಂದು ಆರೋಪಿಸಿರುವ ಅವರು, ನನ್ನ ಅವಧಿ ಮುಗಿಯೋವರೆಗೂ ಬಿಜೆಪಿ ಬಿಟ್ಟು ನಾನೆಲ್ಲೂ ಹೋಗಲ್ಲ. ಮೂರು ವರ್ಷದ ಬಳಿಕ ಅಗತ್ಯಬಿದ್ದರೆ ಮತ್ತೆ ಪಕ್ಷೇತರನಾಗಿ ಬರುತ್ತೇನೆ. ನನ್ನನ್ನು ಪಕ್ಷದಿಂದ ಹೊರಗಿಡಲು ಇಚ್ಛಿಸುವವರು ನನ್ನೆದುರು ಬಂದು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಗೋವಿಂದಪ್ಪರನ್ನು ಸೋಲಿಸೋದು ನಾನೊಬ್ಬನೇ ;
ಕಾಂಗ್ರೆಸ್ ನ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಸುಲಭವಾಗಿ ಗೆಲ್ಲುತ್ತಾರೆಂದಿರುವ ಗೂಳಿಹಟ್ಟಿ, ಗೋವಿಂದಪ್ಪ ಎಲ್ಲಿಯವರೆಗೆ ರಾಜಕಾರಣದಲ್ಲಿರುತ್ತಾರೆ ಅಲ್ಲಿವರೆಗೆ ನಾನಿರುತ್ತೇನೆ. ಅವರನ್ನು ಸೋಲಿಸೋದು ನಾನೊಬ್ಬನೇ ಎಂದಿದ್ದಾರೆ. ಇವಿಷ್ಟೇ ಅಲ್ಲದೇ, 17 ಜನ ಅನರ್ಹ ಶಾಸಕರಿಗೆ ಈಗ ರೆಡ್ ಕಾರ್ಪರೇಟ್ ಸ್ವಾಗತ ಕೋರಲಾಗಿದೆ. 2008ರಲ್ಲಿ ಪಕ್ಷೇತರನಾಗಿ ಗೆದ್ದು ಬಿಜೆಪಿ ಬೆಂಬಲಿಸಿದ ಮೊದಲಿಗ ನಾನು ಎಂದಿರುವ ಗೂಳಿಹಟ್ಟಿ ಶೇಖರ್, ಆಗಲೂ ನನಗೆ ಅನ್ಯಾಯ ಆಗಿತ್ತು ಈಗಲಾದರೂ ನನಗಾಗಿರುವ ಅನ್ಯಾಯವನ್ನು ನಾಯಕರು ಸರಿಪಡಿಸಲಿ ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
