ಚಿತ್ರದುರ್ಗ;
ಶಿರಸಿಯ ರುದ್ರದೇವರ ಮಠ ನನಗೆ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಅನುಭವ ಮತ್ತು ಆಧ್ಯಾತ್ಮಿಕ ಪಾಠ ಕಲಿಸಿಕೊಟ್ಟ ಮಠವಾಗಿದೆ ಎಂದು ಚಿತ್ರದುರ್ಗದ ಶ್ರೀ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಾಂಜಲ ಮನಸ್ಸಿನಿಂದ ನುಡಿದರು.
ಅವರು ನಿನ್ನೆ ರುದ್ರದೇವರ ಮಠದಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಲಾಗಿರುವ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಅನುಭವ ಮಂಟಪವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡುತ್ತಿದ್ದರು. ರುದ್ರದೇವರ ಮಠದಲ್ಲಿ ಚರಮೂರ್ತಿಗಳಾಗಿ ಅನುಭವ ಪಡೆದ ನಾನು ರಾಷ್ಟ್ರ ಪ್ರಸಿದ್ಧ ಚಿತ್ರದುರ್ಗ ಮಠಕ್ಕೆ ಪೀಠಾಧೀಶರಾಗಿರುವುದು ಇತಿಹಾಸ. ಇದನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಬಸವಣ್ಣನವರ ವಿಚಾರಧಾರೆಗಳನ್ನು ಇಲ್ಲಿಂದ ದಿಲ್ಲಿಯವರೆಗೆ ನಾವು ಸೇರಿದಂತೆ ಅನೇಕ ಮಠಾಧೀಶರು ಪ್ರಚಾರ ಮಾಡುತ್ತಿದ್ದಾರೆ. ಬಸವಾದಿ ಶರಣರ ವಿಚಾರಧಾರೆಗಳು ಈ ಜಗತ್ತಿಗೆ ಎಂದೆಂದೂ ಪ್ರಸ್ತುವಾಗಿವೆ. ರುದ್ರದೇವರ ಮಠದಲ್ಲಿ ನಡೆಯುತ್ತಿರುವ ಶರಣಸಂಸ್ಕತಿ ಉತ್ಸವ ತಾತ್ವಿಕ ಮತ್ತು ಸೈದ್ಧಾಂತಿಕವಾದ ಕಾರ್ಯಕ್ರಮವಾಗಿದೆ. ಎಲ್ಲ ಜನಾಂಗದವರೂ ಈ ಮಠದಲ್ಲಿ ಸೇರುವುದು ಶ್ರೀಮಠದ ವಿಶೇಷವಾಗಿದೆ ಎಂದು ನುಡಿದರು.
ನಮ್ಮದು ಶರಣ ಪರಂಪರೆಯಲ್ಲಿ ಬಸವಾದಿ ಶರಣರು ಸ್ಥಾಪಿಸಿದ ಶೂನ್ಯಪೀಠ ಪರಂಪರೆಯಾಗಿದೆ. ಈ ಪರಂಪರೆಯ ಮಠಗಳು, ಶಾಖಾಮಠಗಳಲ್ಲಿ ಚರಮೂರ್ತಿಗಳು, ಮಹಾಸ್ವಾಮಿಗಳು ಮತ್ತು ಜಗದ್ಗುರುಗಳು ಆಗಿ ಸಮಾಜಕ್ಕೆ ಒಳ್ಳೆಯ ಸೇವೆ ನೀಡುತ್ತಿದ್ದಾರೆ. ಶಿರಸಿಯ ರುದ್ರದೇವರ ಮಠ ಚಿತ್ರದುರ್ಗದ ಶಾಖಾಮಠವಾಗಿದ್ದರಿಂದ ಇಲ್ಲಿ ಜನ ಕಲ್ಯಾಣ್ಕಾಗಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಅನುಭವ ಮಂಟಪ ಕಟ್ಟಲಾಗಿದ್ದು ಮುಂದೆ ಬಹಳಷ್ಟು ಜನಪ್ರಿಯತೆ ಪಡೆಯುವ ಸಾಧ್ಯತೆಯಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಇಳಕಲ್ನ ಶ್ರೀ ಚಿತ್ತರಗಿ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮಿಗಳು, ಬನವಾಸಿ ಹೊಳೆಮಠದ ಶ್ರೀ ನಾಗಭೂಷಣ ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಮಾತಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮುರುಘಾ ಶ್ರೀಗಳು ರುದ್ರದೇವರ ಮಠಕ್ಕೆ ಆಗಮಿಸುವ ಪೂರ್ವದಲ್ಲಿ ಶ್ರೀಗಳಿಗೆ ಚಿಪಗಿ ಕ್ರಾಸ್ ಬಳಿ ವೀರಶೈವ ಸಮಾಜದಿಂದ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ನಂತರ ಶ್ರೀಗಳನ್ನು ಬೈಕ್ ರ್ಯಾಲಿ ಮೂಲಕ ರುದ್ರದೇವರ ಮಠಕ್ಕೆ ಬರ ಮಾಡಿಕೊಳ್ಳಲಾಯಿತು.
ಮುಖ್ಯಅತಿಥಿಗಳಾಗಿ ಶ್ರೀಮತಿ ಅಶ್ವಿನಿ ಡಿ.ಎಂ. ಪೌರಾಯುಕ್ತರು, ನಗರಸಭೆ, ಶಿರಸಿ, ವೆಂಕಟೇಶ ನಾಯ್ಕ, ಅಧ್ಯಕ್ಷರು, ಶ್ರೀ ಮಾರಿಕಾಂಬ ದೇವಸ್ಥಾನ ಧರ್ಮದರ್ಶಿ ಮಂಡಳಿ ಶಿರಸಿ, ನಗರಸಭೆ ಸದಸ್ಯೆ ಶ್ರೀಮತಿ ನಾಗರತ್ನ ಜೊಗಳೇಕರ, ಸಿಂದಗಿ ಬಸವಕೇಂದ್ರದ ನಾನಗೌಡ ಪಾಟೀಲ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
