ಸಿದ್ದರಾಮಯ್ಯನವರು ಇರುವ ಪಕ್ಷದಲ್ಲಿ ನಾನಿರುತ್ತೇನೆ : ಕೆಎನ್‍ಆರ್

ಮಧುಗಿರಿ

    ಸಿದ್ದರಾಮಯ್ಯನವರು ಯಾವ ಪಕ್ಷದಲ್ಲಿರುತ್ತಾರೊ ನಾನು ಅಲ್ಲಿಯೆ ಇರುತ್ತೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ನಾವು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.

    ತಾಲ್ಲೂಕಿನ ಐಡಿ ಹಳ್ಳಿಯಲ್ಲಿ ಆಯೋಜಿಸಿದ್ದ ಟಿಡಿಸಿಸಿ ಬ್ಯಾಂಕ್‍ನ ನೂತನ 30ನೆ ಶಾಖೆಯ ಉದ್ಘಾಟನಾ ಸಮಾರಂಭಧ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಇಂದಿರಾ ಗಾಂಧಿ ಹಾಗೂ ದೇವರಾಜ ಅರಸುರವರ ಅನುಯಾಯಿಯಾಗಿದ್ದು, ಅವರ ಆದರ್ಶಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಕಂಡಿದ್ದೇನೆ. ಬಡವರ ಪರ ಕಾಳಜಿ ಇದ್ದು, ಅವರು ಮುಖ್ಯಮಂತ್ರಿ ಯಾಗಿದ್ದಾಗ ಅನೇಕ ಜನ ಪರವಾದಂತಹ ಭಾಗ್ಯಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ.

    ಕಳೆದ ವಿಧಾನ ಸಭೆ ಚುನಾವಣೆಯ ನಂತರ ನನ್ನದು ಕ್ಷೇತ್ರದಲ್ಲಿ ಮೊದಲ ಕಾರ್ಯಕ್ರಮವಾಗಿದೆ. ನಾನು ಈ ಹಿಂದೆ ಎರಡು ಬಾರಿ ಪರಾಜಿತಗೊಂಡಾಗಲು ಬೇಸರವಾಗಿರಲಿಲ್ಲ. 2013 ರಲ್ಲಿ ತಾಲ್ಲೂಕಿನ ಜನತೆ ನನ್ನನ್ನು ಮತ್ತೆ ಜಯಶೀಲನನ್ನಾಗಿಸಿದರು. ಆದರೆ ಕ್ಷೇತ್ರದ ಜನರು ನೀಡಿದ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಜನ ಪರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದೇನೆ.ಯಾವುದೇ ಅಧಿಕಾರಿಯಿಂದ ಅಥವಾ ಗುತ್ತಿಗೆದಾರನಿಂದ ನಯಾ ಪೈಸೆಯನ್ನು ಮುಟ್ಟಿಲ್ಲ. ಯಾರಾದರೂ ನಾನು ಲಂಚ ಪಡೆದದ್ದನ್ನು ಸಾಬೀತು ಮಾಡಿದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಮನ ನೊಂದು ನುಡಿದರು. ತಾಲ್ಲೂಕಿಗೆ ಸಹಕಾರ ಸಂಘದಿಂದ ರೈತರಿಗೆ ನೀಡಿದ 164 ಕೋಟಿ ರೂ. ಸಾಲ ಮನ್ನಾ ಆಗಿದೆ.

     ಬರಗಾಲ ಪೀಡಿತ ಕ್ಷೇತ್ರದಲ್ಲಿ ಇಷ್ಟು ಅಭಿವೃದ್ಧಿಯಾದರೂ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಅಭಿವೃಧ್ಧಿ ಕಾರ್ಯಗಳು ಮತವಾಗಿ ಪರಿವರ್ತನೆಯಾಗಲಿಲ್ಲ. ನನ್ನ ಮನಸ್ಸಿಗೆ ಬೇಸರವಾಗಿ ಕ್ಷೇತ್ರಕ್ಕೆ ಬರಲು ಮನಸ್ಸಾಗಲಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನ ಮಾತಿಗೆ ಮನ್ನಣೆ ನೀಡಿ ಕುಟುಂಬ ರಾಜಕೀಯ ಮಾಡುವ ಮಾಜಿ ಪ್ರಧಾನಿಯನ್ನು ಮನೆಗೆ ಕಳುಹಿಸುವುದರ ಮೂಲಕ ಮತದಾರರು ಪರಿವರ್ತನೆಯಾಗಿದ್ದಾರೆಂದು ಮನಸ್ಸಿಗೆ ಸಮಾಧಾನವಾಯಿತು. ನಾನು ಈ ಭಾಗದ ಜನತೆಗೆ ನೀಡಿದ ಆಶ್ವಾಸನೆಯಂತೆ ನೂತ ಶಾಖೆ ಮಂಜೂರು ಮಾಡಿ ಕೊಟ್ಟಿದ್ದೇನೆ.

     ಬ್ಯಾಂಕ್ ನಿಮ್ಮ ಆಸ್ತಿಯಾಗಿದ್ದು, ಸಂರಕ್ಷಿಸುವುದರ ಜೊತೆಗೆ ಹೆಚ್ಚು ಹೆಚ್ಚಾಗಿ ಠೇವಣಿ ಜಮಾ ಮಾಡುವಂತೆ ರೈತರಲ್ಲಿ ಮನವಿ ಮಾಡಿದರು. ಕಳೆದ ಸಾರಿ ರಾಜ್ಯ ಸರಕಾರ ಮನ್ನಾ ಮಾಡಿದ ಹಣ ಇನ್ನೂ ಬಂದಿಲ್ಲ. ಬಂದ ನಂತರ ಹಂತ ಹಂತವಾಗಿ ಮತ್ತೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

     ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕುಟುಂಬ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಅಡ್ಡಿಪಡಿಸಿದ್ದರಿಂದ ಜಿಲ್ಲೆಯ ಜನರೆ ಅವರನ್ನು ಜಿಲ್ಲೆಯಿಂದ ಹೊರಹಾಕಿದರು. ಮಧುಗಿರಿ ಕ್ಷೇತ್ರದ ಮತದಾರರ ಆಶೀರ್ವಾದ ಮತ್ತು ಕೆ.ಎನ್.ರಾಜಣ್ಣ ನವರ ಸಹಕಾರದಿಂದ ನಾನು ಸಂಸದನಾಗಿದ್ದೇನೆ.

     ಕೆ.ಎನ್.ರಾಜಣ್ಣನವರು ಯಾವುದೇ ಪಕ್ಷದಲ್ಲಿದ್ದರೂ ಕೂಡ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆಂದರು. ಸಹಕಾರ ಕ್ಷೇತ್ರದಲ್ಲಿ ಧ್ರುವೀಕರಣ ಮಾಡಿದ್ದಾರೆ. ಹೋಬಳಿಗೊಂದು ಶಾಖೆಗಳನ್ನು ಆರಂಭಿಸಿದ್ದಾರೆ. ಮಂಬರುವ ದಿನಗಳಲ್ಲಿ ಪಂಚಾಯಿತಿಗೊಂದರಂತೆ ಶಾಖೆಯನ್ನು ತೆರೆಯುವ ಮೂಲಕ ರೈತರಿಗೆ ಹೆಚ್ಚು ಅನೂಕೂಲ ಮಾಡಿಕೊಡಲಿ ಎಂದರು.

     ರಾಜ್ಯ ಮಾರಾಟ ಮಹಾಮಂಡಲದ ನಿರ್ದೇಶಕ ಆರ್.ರಾಜೇಂದ್ರ ಮಾತನಾಡಿ, ಐಡಿ ಹಳ್ಳಿಯ ರೈತರು ಹಾಗೂ ಸಹಕಾರಿಗಳು ಈ ಹಿಂದೆ ಹಣದ ವಹಿವಾಟಿಗೆ ಮಧುಗಿರಿಯ ಬ್ಯಾಂಕಿಗೆ ಬರಬೇಕಾಗಿತ್ತು. ಅವರ ಅಲೆದಾಟ ತಪ್ಪಿಸುವ ದೃಷ್ಟಿಯಿಂದ ನೂತನ ಶಾಖೆಯನ್ನು ತೆರೆದು ಮಾಜಿ ಶಾಸಕರು ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಲಿ ಶಾಸಕ ಎಂ.ವೀರಭದ್ರಯ್ಯ ಚುನಾವಣೆಯಲ್ಲಿ ಕಳೆದ ಬಾರಿ ಶೇ.10ರಷ್ಟು ಹೆಚ್ಚು ಅಭಿವೃದ್ಧಿ ಕಾರ್ಯ ಮಾಡುತ್ತೇನೆಂದು ಭರವಸೆ ನೀಡಿದವರು, ಈಗ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಶೇ.10 ರಿಂದ 15ರಷ್ಟು ಕಮೀಷನ್ ಪಡೆಯುತ್ತಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿರುವುದು ಕೇಳಿ ಬರುತ್ತಿದೆ ಎಂದರು.

      ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಜಿಲ್ಲೆಯಲ್ಲಿ 800 ಕೋಟಿ ರೂ., ತಾಲ್ಲೂಕಿನಲ್ಲಿ 164 ಕೋಟಿ ರೂ. ಸಾಲ ಪಕ್ಷಾತೀತವಾಗಿ, ಜಾತ್ಯತೀತವಾಗಿ ಮನ್ನಾ ಆಗಿದೆ. ಇದೂ ಸಹ ಕೆ.ಎನ್.ರಾಜಣ್ಣನವರ ಪರಿಶ್ರಮವಾಗಿದೆ. ಮುಂದಿನ ದಿನಗಳಲ್ಲಿ ಅವರನ್ನು ಮತ್ತೆ ಚುನಾಯಿಸುವ ಜವಾಬ್ದಾರಿ ನಿಮ್ಮ ನಮ್ಮೆಲ್ಲರ ಮೇಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap