ಉಪ್ಪಾರ ಸಮಾಜದ ಪ್ರಗತಿಗೆ ಶ್ರಮಿಸುವೆ;ನಾಗರಾಜ್

ಚಿತ್ರದುರ್ಗ:

         ನಿವೃತ್ತಿ ಜೀವನವನ್ನು ಉಪ್ಪಾರ ಸಮಾಜದ ಸಂಘಟನೆಗೆ ಮೀಸಲಿಡುತ್ತೇನೆಂದು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯ ಡಿ.ಸಿ.ಆರ್.ಬಿ. ಡಿ.ವೈ.ಎಸ್ಪಿ. ಎಸ್.ನಾಗರಾಜ್ ಭರವಸೆ ನೀಡಿದರು.

        ಸೇವೆಯಿಂದ ಸೋಮವಾರ ನಿವೃತ್ತಿಯಾದ ಎಸ್.ನಾಗರಾಜ್‍ರವರು ದುರ್ಗದಸಿರಿಯಲ್ಲಿ ಜಿಲ್ಲಾ ಉಪ್ಪಾರ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಉಪ್ಪಾರ ಸಮಾಜ ನನ್ನನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ಖುಷಿ ಕೊಟ್ಟಿದೆ. 1990 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ಇಲಾಖೆಗೆ ಸೇರುವ ಮುನ್ನ ಹೊಸದುರ್ಗದ ಗವಿರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿಯೂ ಸೇವೆ ಸಲ್ಲಿಸಿದ್ದೇನೆ.

         ಜಗಳೂರು ತಾಲೂಕಿನವನಾದ ನಾನು ಬಸ್ ಸೈಕಲ್ ಹೀಗೆ ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ ಬೇರೆ ಊರಿಗೆ ನಡೆದು ಹೋಗಿ ಶಿಕ್ಷಣ ಪಡೆದಿದ್ದೇನೆ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

       ಮೈಸೂರಿನಲ್ಲಿ ಸಬ್‍ಇನ್ಸ್‍ಪೆಕ್ಟರ್ ಆಗಿ ಸೇವೆಯನ್ನು ಆರಂಭಿಸಿದೆ. ಬಾಣಸವಾಡಿ ಠಾಣೆಯಲ್ಲಿದ್ದಾಗ ಮಿಲಿಟರಿ ಹಾಗೂ ಪೊಲೀಸರ ನಡುವೆ ಚಿಕ್ಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಏಟು ತಿಂದು ತಪ್ಪಿಸಿಕೊಂಡು ಹೋಗಿ ಆಸ್ಪತ್ರೆಯಲ್ಲಿ ಅವಿತುಕೊಂಡು ಪ್ರಾಣ ಉಳಿಸಿಕೊಂಡೆ ಅದಕ್ಕೆ ಅಲ್ಲಿನ ವೈದ್ಯರೊಬ್ಬರು ರಕ್ಷಣೆ ನೀಡಿದರು ಎಂದು ಸ್ಮರಿಸಿಕೊಂಡರು.

         1996 ರಲ್ಲಿ ಬೈಕ್ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದಾಗ ಮಣಿಪಾಲದಲ್ಲಿ ಆಪರೇಷನ್ ಆಗಿ ಬದುಕುಳಿದಿದ್ದು, ಪುರ್ನಜನ್ಮ ಸಿಕ್ಕಂತೆ. 2005 ರಲ್ಲಿ ಹೊಸದುರ್ಗದಲ್ಲಿ ಇನ್ಸಪೆಕ್ಟರ್ ಆಗಿದ್ದಾಗ ಪೊಲೀಸ್ ಮತ್ತು ರೈತರ ನಡುವೆ ಘರ್ಷಣೆಯಾಯಿತು. 2008 ರಲ್ಲಿ ಹೊಳಲ್ಕೆರೆಯಲ್ಲಿ ಗಲಾಟೆಯಾಗಿ ಕಲ್ಲು ತೂರಾಟವಾಯಿತು. ಹಾಗಾಗಿ ಈ ನಾಲ್ಕು ಘಟನೆಗಳನ್ನು ಇಂದಿಗೂ ಮರೆತಿಲ್ಲ ಎಂದು ಭಾವುಕರಾಗಿ ನುಡಿದರು.

          28 ವರ್ಷಗಳ ಸೇವೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ಪೊಲೀಸ್ ಇಲಾಖೆಯಲ್ಲಿಯೂ ಅನೇಕ ತೊಂದರೆಗಳಿದೆ. ವರ್ಗಾವಣೆ ವಿಚಾರದಲ್ಲಿ ನೋವು ಪಟ್ಟಿದ್ದೇನೆ. ರಾಜಕೀಯ ಬೆನ್ನೆಲುಬು ನಮಗೆ ಯಾರು ಇಲ್ಲ. ಉಪ್ಪಾರ ಜನಾಂಗದಲ್ಲಿ ಸಂಘಟನೆಯ ಕೊರತೆಯಿರುವುದರಿಂದ ನಿವೃತ್ತಿಯ ಜೀವನದ ಅರ್ಧಭಾಗವನ್ನು ಜನಾಂಗದ ಅಭಿವೃದ್ದಿಗೆ ಮುಡುಪಾಗಿಡುತ್ತೇನೆ. ಸಮಾಜದ ಕುಂದು ಕೊರತೆ ಕಷ್ಟ-ಸುಖಗಳಿಗೆ ಸ್ಪಂದಿಸುತ್ತೇನೆ . ಉಪ್ಪಾರ ನೌಕರರ ಕ್ಷೇಮಾಭಿವೃದ್ದಿ ಸಂಘ ಸ್ಥಾಪಿಸಿ ತುಳಿತಕ್ಕೊಳಗಾದ , ಅದೋಗತಿ ಗೊಳಗಾಗಿರುವ ಮಕ್ಕಳನ್ನು ಮೇಲಕ್ಕೆತ್ತುವ ಆಸೆಯಿದೆ . ಜನಾಂಗದ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಶಿಕ್ಷಣವಿಲ್ಲದಿದ್ದರೆ ಜೀವನದಲ್ಲಿ ಏನು ಸಾಧಿಸಲು ಆಗುವುದಿಲ್ಲ. ಬೇರೆ ಸಮಾಜಕ್ಕೆ ಹೋಲಿಸಿದರೆ ನಾವಿನ್ನು ಅಂಬೆಗಾಲಿಡುತ್ತಿದ್ದೇವೆ ಎಂದರು.

        ಜಿಲ್ಲಾ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ಮೂರ್ತಿ ಮಾತನಾಡಿ ಯಾವುದೇ ಕ್ಲಿಷ್ಟಕರ ಸಮಸ್ಯೆಗಳನ್ನು ತನಿಖೆ ಮಾಡುವಾಗ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ ಡಿ.ವೈ.ಎಸ್ಪಿ.ನಾಗರಾಜ್‍ರವರು ನೊಂದವರಿಗೆ ನ್ಯಾಯ ದೊರಕಿಸಿ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದಾರೆ. ಅವರ ನಿವೃತ್ತಿಯ ಜೀವನ ಸುಖಮಯವಾಗಿರಲೆಂದು ಹಾರೈಸಿದರು.

         ಉಪ್ಪಾರ ಸಮಾಜದ ರಾಜ್ಯ ವಕ್ತಾರ ಎಂ.ಪಿ.ಶಂಕರ್, ವರ್ತಕ ಈರುಳ್ಳಿ ಸಿದ್ದಪ್ಪ, ತಾಲೂಕು ಅಧ್ಯಕ್ಷ ಎಲ್.ಮಹೇಶ್, ಪೊಲೀಸ್ ಅಧಿಕಾರಿ ಶಿವಮೊಗ್ಗದ ತಿಪ್ಪೇಸ್ವಾಮಿ, ಹೊಸಹಳ್ಳಿ ತಿಪ್ಪೇಸ್ವಾಮಿ, ಅಜ್ಜಪ್ಪ, ಎಲ್.ಐ.ಸಿ.ರಂಗಸ್ವಾಮಿ, ಮಾರುತಿ, ಹನುಮಂತಪ್ಪ, ಡಿ.ಎಸ್.ಎಸ್.ಜಿಲ್ಲಾಧ್ಯಕ್ಷ ಕುಂಚಿಗನಹಾಳ್ ಮಹಲಿಂಗಪ್ಪ, ಮುಸ್ತಾಫ್, ಹನುಮಂತಪ್ಪ, ಗಂಗಣ್ಣ, ಜಯಪ್ಪ ಸೇರಿದಂತೆ ಅಪಾರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಎಸ್.ನಾಗರಾಜ್‍ರವರ ಸೇವೆಯನ್ನು ಗುಣಗಾನ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link