ದಾವಣಗೆರೆ :
ಸಂವಿಧಾನ ಕಳೆದುಕೊಂಡರೆ, ಭಾರತದಲ್ಲಿ ಜಾತ್ಯಾತೀತತೆ, ಪ್ರಜಾಪ್ರಭುತ್ವ ಮೂಲೆಗುಂಪಾಗಿ, ಮೂಲಭೂತವಾದ ಹಾಗೂ ಕೋಮುವಾದ ವಿಜೃಂಭಿಸಲಿದೆ ಎಂದು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಆತಂಕ ವ್ಯಕ್ತಪಡಿಸಿದರು.
ನಗರದ ಆರ್.ಎಲ್. ಕಾನೂನು ಕಾಲೇಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಸಂವಿಧಾನ ಓದು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ನಮಗೆ ಜಾತ್ಯತೀತ ತತ್ವಗಳನ್ನು ನೀಡಿ, ಈ ನೆಲದಲ್ಲಿ ಬದುಕಿರುವವರೆಲ್ಲೂ ಭಾರತೀಯರೇ ಎಂಬ ಕಲ್ಪನೆಯನ್ನು ನೀಡಿದೆ. ಆದರೆ, ಈ ಸಂವಿಧಾನವನ್ನು ನಾವು ಕಳೆದುಕೊಂಡರೆ, ಜಾತ್ಯಾತೀತತೆ ಮೂಲೆಗುಂಪಾಗಿ, ಕ್ರೌರ್ಯ, ಕೋಮುವಾದ ಹಾಗೂ ಮೂಲಭೂತವಾದ ದೇಶದಲ್ಲಿ ವಿಜೃಂಭಿಸಲಿದೆ. ಹೀಗಾಗಿ ಮೊದಲು ಭಾರತವನ್ನು ಸರಿಯಾಗಿ ಅರ್ಥೈಸಿಕೊಂಡು, ಸಂವಿಧಾನವನ್ನು ಓದಿ, ಅರ್ಥ ಮಾಡಿಕೊಂಡು ಸಂವಿಧಾನವನ್ನು ಸಂರಕ್ಷಣೆ ಮಾಡಬೇಕೆಂದು ಕರೆ ನೀಡಿದರು.
ಎಲ್ಲಾ ಭಾಷೆಯಲ್ಲಿ ಲಭ್ಯವಾಗಿರುವ ಸಂವಿಧಾನವನ್ನು ಒಮ್ಮೆ ಓದಿದಾಕ್ಷಣ ಅರ್ಥವಾಗಲು ಅದು ಕಥೆ, ಕಾದಂಬರಿ, ಕಾವ್ಯವಲ್ಲ. ಅದು ಪಾಳೇಗಾರಿ ಪದ್ಧತಿಯನ್ನು ರದ್ದು ಮಾಡಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ರಾಜಕೀಯ ಕಾರ್ಯಕ್ರಮವಾಗಿದೆ. ಮೌಢ್ಯ, ಮೂಢನಂಬಿಕೆಗಳನ್ನು ರದ್ದು ಮಾಡಿ, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಮಾಜ ಕಟ್ಟುವ ಸಾಮಾಜಿಕ ಕಾರ್ಯಕ್ರಮವಾಗಿದೆ. ಹೀಗಾಗಿ ಓದಿದ ಎಲ್ಲರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ಸರಳ ಭಾಷೆಯಲ್ಲಿ ಸಂವಿಧಾನ ಓದು ಪುಸ್ತಕ ಹೊರತರಲಾಗಿದೆ ಎಂದರು
ಸಂವಿಧಾನ ಜಾರಿಗೆ ಬಂದು 68 ವರ್ಷ ಗತಿಸಿರುವ ಅವಧಿಯಲ್ಲಿ ಒಂದಿಷ್ಟು ಸಾಧನೆ ಮಾಡಿದ್ದೇವೆ ಎಂದರೆ, ಅದಕ್ಕೆ ಸಂವಿಧಾನವೇ ಮೂಲಕ ಕಾರಣವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ 600 ಜನ ರಾಜ-ಮಹಾರಾಜರು ಭಾರತವನ್ನು ಆಳುತ್ತಿದ್ದರು. ಹೀಗಾಗಿ ಇದು ಅನೇಕ ರಾಜರ, ಮೋಘಲರ, ಬ್ರಿಟೀಷರ ಭಾರತವಾಗಿತ್ತು. ಪಾಳಿಗಾರಿಕೆ ಹಾಗೂ ಸಾಮಂತಗಾರಿಕೆಯನ್ನು ರದ್ದು ಮಾಡಿ, ವಸಹತುಶಾಹಿಗಳನ್ನು ಒದ್ದೊಡಿಸಿ, ಅಖಂಡ ಭಾರತ ನಿರ್ಮಾಣವಾಗಿರುವುದೇ ಸಂವಿಧಾನದ ತಳಹದಿಯಲ್ಲಿ ಎಂದು ವಿಶ್ಲೇಷಿಸಿದರು.
ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಹಲವು ಸುಧಾರಣೆಗಳಾಗಲು, ಶ್ರೀಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಒಂದಿಷ್ಟು ಸಾಧನೆಯಾಗಲು. ಐಟಿ-ಬಿಟಿ ಕ್ಷೇತ್ರಗಳಲ್ಲಿ ಭಾರತ ಜಗತ್ತಿನ ಹತ್ತು ದೇಶಗಳಲ್ಲಿ ಒಂದಾಗಲು, ಸ್ವಲ್ಪ ಮಟ್ಟಿಗೆ ಜಾತಿ ವ್ಯವಸ್ಥೆಯನ್ನು ಧ್ವಂಸ ಮಾಡಲು. ಒಬ್ಬ ದಲಿತನ ಮಗ ರಾಷ್ಟ್ರಾಧ್ಯಕ್ಷರಾಗಲು, ಒಬ್ಬ ಟೀ ಮಾರುವ ಹುಡುಗ ಪ್ರಧಾನಿಯಾಗಲು ಸಂವಿಧಾನ ನಮಗೆ ಕಲ್ಪಿಸಿರುವ ಅವಕಾಶವೇ ಕಾರಣವಾಗಿದೆ ಎಂದು ಪ್ರತಿಪಾದಿಸಿದರು.
ಇನ್ನೂ ಬಹುತೇಕರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ನಿವೇಶನ ಸೇರಿದಂತೆ ಮೂಲಭೂತ ಸೌಲಭ್ಯ ಸಿಗದಿರುವುದು, ರಾಜಕಾರಣದಲ್ಲಿ ನೈತಿಕ ಮೌಲ್ಯ ಕುಸಿತ, ಸಾಂಸ್ಕøತಿಕ ದಿವಾಳಿತನ, ಭಯೋತ್ಪಾದನೆ, ಮೂಲಭೂತವಾದ ಹಾಗೂ ಕೋಮುವಾದದಂತಹ ಸವಾಲುಗಳು ದೇಶವನ್ನು ಕಾಡುತ್ತಿವೆ. ಇದಕ್ಕೆ ಸಂವಿಧಾನವೇ ಕಾರಣ ಎಂಬುದಾಗಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ, ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ. ಸಂವಿಧಾನವನ್ನು ಸರಿಯಾಗಿ ಓದದಿರುವುದು ಹಾಗೂ ಅದನ್ನು ಅರ್ಥಮಾಡಿಕೊಳ್ಳದಿರುವುದು ಹಾಗೂ ಅದನ್ನು ಅನುಷ್ಠಾನಗೊಳಿಸುವವರಲ್ಲಿರುವ ದೋಷವೇ ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
20ನೇ ಶತಮಾನದ ಆರಂಭದಲ್ಲಿ ನಡೆದ ಮೊದಲ ಮಹಾಯುದ್ಧದಿಂದಾಗಿ ಲಕ್ಷಾಂತರ ಜನರ ಸಾವು-ನೋವು ಸಂಭವಿಸಿ ಜಗತ್ತು ಅನೇಕ ಕಷ್ಟಕಾರ್ಪಣ್ಯಗಳಿಗೆ ಸಿಲುಕಿಕೊಂಡಿತ್ತು. ಹೀಗಾಗಿ ಮುಂದೆ ಯುದ್ಧ ನಡೆಯದಂತೆ ನೋಡಿಕೊಳ್ಳಬೇಕೆಂಬ ಕಾರಣಕ್ಕೆ ಜಗತ್ತಿನ ಹಲವು ದೇಶಗಳು ಸೇರಿ, ಶಾಂತಿ ಸ್ಥಾಪನೆಗಾಗಿ ಲೀಗ್ ಆಫ್ ನೇಷನ್ ಸಂಸ್ಥೆಯನ್ನು ಹುಟ್ಟು ಹಾಕಿದ್ದವು.
ಆದರೆ, ಕಾಲಕ್ರಮೇಣ ಕೆಲ ದೇಶಗಳ ಸ್ವಾರ್ಥ, ಅಪನಂಬಿಕೆಯಿಂದಾಗಿ ಇದು ನಿಷ್ಕ್ರಿಯಗೊಂಡ ಪರಿಣಾಮ 1939ರಿಂದ 45ರ ವರೆಗೆ ನಡೆದ ಮಹಾಯುದ್ಧದಲ್ಲಿ ಜಗತ್ತಿನ 2 ಕೋಟಿ ಸೈನಿಕರು ಹಾಗೂ 4 ಕೋಟಿ ನಾಗರೀಕರು ಅಸುನೀಗಿದರು. ಎರಡೂವರೆ ಕೋಟಿ ಜನ ಅಂಗವಿಕಲತೆಗೆ ಒಳಗಾದರು. ಹಲವು ದೇಶಗಳ ಕೈಗಾರಿಕೆ, ಕಟ್ಟಡ, ಆಸ್ತಿ-ಪಾಸ್ತಿ ನಾಶವಾದವು. ಕೆಲ ದೇಶಗಳಲ್ಲಿ ಜನಾಂಗೀಯ ದ್ವೇಷದ ಶಿಬಿರಗಳನ್ನು ನಡೆಸಿ, ಇನ್ನೊಂದು ಜನಾಂಗದ ಮೇಲೆ ದ್ವೇಷ, ಕ್ರೌರ್ಯವನ್ನು ಮೆರೆಯಲಾರಂಭಿಸಿದರು. ಆದ್ದರಿಂದ ಈ ಎಲ್ಲವನ್ನೂ ಮಟ್ಟ ಹಾಕಬೇಕೆಂಬ ಕಾರಣಕ್ಕೆ ಜಗತ್ತಿನ ರಾಷ್ಟ್ರಗಳು ಒಂದಾಗಿ 1945ರಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಿದವು. ಈ ವಿಶ್ವ ಸಂಸ್ಥೆಯು ಮನುಷ್ಯ ಮೇಲೆ ನಡೆಯುವ ದೌರ್ಜನ್ಯ, ದಾಳಿಯನ್ನು ತಡೆಯಲು 1948ರ ಡಿ.10ರಂದು ಮಾನವ ಹಕ್ಕುಗಳನ್ನು ಘೋಷಿಸಿತು. ಅದನ್ನೇ ಈಗ ನಾವು ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆಂದು ವಿವರಿಸಿದರು.
ಪ್ರಾಸ್ತಾವಿಕ ಮಾತನಾಡಿದ ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, ಪ್ರೊ.ಎಸ್.ಹೆಚ್.ಪಟೇಲ್ ಅವರ ಸಾರಥ್ಯದಲ್ಲಿ ವೇದಿಕೆಯ ದಶಮಾನೋತ್ಸವ ಆಚರಿಸಬೇಕಿತ್ತು. ಅಷ್ಟರಲ್ಲಿಯೇ ಅವರು ನಮ್ಮನ್ನು ಅಗಲಿದರು. ಅವರ ಅಗಲಿಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ನಾಗಮೋಹನ್ದಾಸ್ ಅವರು ಬರೆದಿರುವ ಸಂವಿಧಾನ ಓದು ಪುಸ್ತಕ ಸುಮಾರು 25 ಮುದ್ರಣವನ್ನು ಕಂಡಿದ್ದು, 50 ಸಾವಿರ ಪ್ರತಿಗಳು ಮಾರಾಟವಾಗಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಸ್.ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ, ಸಂವಿಧಾನ ಓದು ಅಭಿಯಾನದ ಸಂಚಾಲಕ ಡಾ.ವಿಠಲ್ ಭಂಡಾರಿ, ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎಂ.ಹನುಮಂತಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ಕಾರ್ಮಿಕ ಮುಖಂಡ ಕೆ.ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು. ರೇಷ್ಮ ಸಂಗಡಿಗರು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಎಂ.ಸೋಮಶೇಖರ್ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ಪಂಕಜಾ ಟಿ.ಸಿ. ನಿರೂಪಿಸಿದರು. ಜಿ.ಎಸ್.ಯತೀಶ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
