ಹರಪನಹಳ್ಳಿ:
ಪಾಳುಬಿದ್ದ ಮನೆಯೊಂದರಲ್ಲಿ ಪರವಾನಿಗಿ ಇಲ್ಲದೇ ಐಸ್ಕ್ರೀಂ ತಯಾರಿಕೆ ಮಾಡುತ್ತಿದ್ದ ಘಟಕದ ಮೇಲೆ ಬುಧವಾರ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡೆದಿದ್ದಾರೆ. ಪಟ್ಟಣದ ಕೊಟ್ಟೂರು ರಸ್ತೆಯ ಘಟಕದ ಮೇಲೆ ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿದೆ. ಉತ್ಪಾದನೆ ಘಟಕ ಪಾಳುಬಿದ್ದಿರುವ ಮನೆಯಲ್ಲಿ ನಡೆಯುತ್ತಿದ್ದು, ಪುರಸಭೆ ಅಥವಾ ಬೇರಾವ ಇಲಾಖೆಗಳಿಂದಲೂ ಅನುಮತಿ ಪಡೆದಿಲ್ಲ. ವಿವಿಧ ಐಸ್ಕ್ರೀಂ ಉತ್ಪಾದಿಸುತ್ತಿದ್ದ ಮಾಲೀಕ ಹಬೀಬ್ ಅವರನ್ನು ವಿಚಾರಿಸಿದಾಗ ಅನುಮತಿ ಪಡೆಯದಿರುವುದು ಬೆಳಕಿಗೆ ಬಂದಿದೆ.
`ಪರವಾನಿಗೆ ಪಡೆಯದ ಐಸ್ಕ್ರೀಂ ಉತ್ಪಾದಿಸುವ ಘಟಕಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ’ ಮುಖ್ಯಾಧಿಕಾರಿ ನಾಗರಾಜ್ ನಾಯ್ಕ ತಿಳಿಸಿದ್ದಾರೆ. ಐಸ್ಕ್ರೀಂ ಘಟಕ ಹಲವು ವರ್ಷಗಳಿಂದ ನಡೆಯುತ್ತಿದೆ. ವಿವಿಧ ಹೆಸರಿನ ಬ್ರಾಂಡ್ ಕವರ್ ಅಳವಡಿಸಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ.
ಒಮ್ಮೆಯೂ ಸ್ವಚ್ಛಗೊಳಿಸದ ನೀರಿನ ತೊಟ್ಟಿಯಲ್ಲಿ, ಅವಧಿ ಮುಗಿದಿರುವ ಯಂತ್ರಗಳಲ್ಲಿ ಐಸ್ಕ್ರೀಂ ಉತ್ಪಾದಿಸುತ್ತಾರೆ. ಘಟಕದಲ್ಲಿ ಕ್ರಿಮಿಕೀಟ ನಾಶಪಡಿಸುವ ಔಷಧಿಗಳು, ಅವಧಿ ಮೀರಿದ ಕೆಮಿಕಲ್ಗಳು, ಐಸ್ಕ್ರೀಂ ಸ್ವಾಧ ಹೆಚ್ಚಿಸುವ ರುಚಿ ಪೌಡರ್ ಮತ್ತು ಬಣ್ಣದ ರಸಾಯನಿಕಗಳು ದಾಳಿಯಲ್ಲಿ ದೊರೆತಿವೆ. ಘಟಕದ ವ್ಯವಸ್ಥೆಯ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಮಂಜುನಾಥ ತಿಳಿದ್ದಾರೆ.ದಾಳಿ ವೇಳೆ ಪುರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
