ತುಮಕೂರು
ತುಮಕೂರು ನಗರದ ಶಿರಾಗೇಟ್ ಹೊರವಲಯದ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆಯು ಕಾರ್ಯಾಚರಣೆ ನಡೆಸಿ, ರಸ್ತೆ ಒತ್ತುವರಿಯನ್ನು ತೆರವುಗೊಳಿಸಿದೆ.
ಹೆದ್ದಾರಿಯಿಂದ ಡಾನ್ಬಾಸ್ಕೊ ಶಾಲೆ ಕಡೆಗೆ ತಿರುವು ಪಡೆಯುವ ಆರಂಭದಲ್ಲಿ ಖಾಸಗಿ ರೈಸ್ ಮಿಲ್ನಿಂದ ರಸ್ತೆ ಜಾಗ ಒತ್ತುವರಿ ಆಗಿತ್ತು. ಈ ಬಗ್ಗೆ ದೂರು ಇತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 9 ಗಂಟೆಯಿಂದ 10-30 ರವರೆಗೆ ಪಾಲಿಕೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಆಶಾ, ಜೂನಿಯರ್ ಇಂಜಿನಿಯರ್ ಮಾರ್ಟಿನಾ ಅವರ ನೇತೃತ್ವದಲ್ಲಿ ಪಾಲಿಕೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಒಂದನೇ ವಾರ್ಡ್ ಕಾರ್ಪೋರೇಟರ್ ನಳಿನಾ ಇಂದ್ರಕುಮಾರ್ (ಬಿಜೆಪಿ) ಮತ್ತು ಮಾಜಿ ಕಾರ್ಪೋರೇಟರ್ ಇಂದ್ರಕುಮಾರ್ ಇದ್ದರು.
30 ಅಡಿ ಅಗಲದ ರಸ್ತೆ ಜಾಗದಲ್ಲಿ ರೈಸ್ ಮಿಲ್ನವರು ಸುಮಾರು 15 ಅಡಿಗಳಷ್ಟು ಒತ್ತುವರಿ ಮಾಡಿಕೊಂಡಿದ್ದುದನ್ನು ಗುರುತಿಸಿ, ಆ ಜಾಗದಲ್ಲಿ ರೈಸ್ ಮಿಲ್ನವರು ನಿರ್ಮಿಸಿದ್ದ ಸುಮಾರು 15 ಅಡಿ ಎತ್ತರ ಮತ್ತು ಸುಮಾರು 400 ಅಡಿ ಉದ್ದದ ನಿರ್ಮಾಣವನ್ನು ತೆರವುಗೊಳಿಸಲಾಗಿದೆ.
ಶೀಘ್ರವೇ ಡಾಂಬರೀಕರಣ
ಈ ರಸ್ತೆಯು ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ಮಾರ್ಗವು ಪಿ.ಎನ್.ಪಾಳ್ಯದಲ್ಲಿರುವ ಪಾಲಿಕೆಗೆ ಸೇರಿದ ಹೇಮಾವತಿ ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸುತ್ತದೆ. ಡಾನ್ಬಾಸ್ಕೊ ಶಾಲೆಗೆ ಸಹ ಇದೇ ದಾರಿಯಲ್ಲಿ ತೆರಳಬೇಕು. ಇನ್ನು ಬುಗುಡನಹಳ್ಳಿ, ಕುಪ್ಪೂರು, ಹೊನ್ನೇನಹಳ್ಳಿ ಮೊದಲಾದ ಸುಮಾರು 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. 14 ನೇ ಹಣಕಾಸು ಯೋಜನೆಯಲ್ಲಿ 20 ಲಕ್ಷ ರೂ.ಗಳನ್ನು ಮೀಸಲಿರಿಸಿದ್ದು, ಆ ಮೊತ್ತದಲ್ಲಿ 30 ಅಡಿ ಅಗಲದ ಈ ರಸ್ತೆಯ ಡಾಂಬರೀಕರಣ ಕಾಮಗಾರಿ ಸದ್ಯದಲ್ಲೇ ನಡೆಯಲಿದೆ. ಪ್ರಸ್ತುತ ರಸ್ತೆ ಸಮಸ್ಯೆ ಬಗೆಹರಿದಿರುವುದರಿಂದ ಈ ಮಾರ್ಗವಾಗಿ ಸಿಟಿ ಬಸ್ ಸಂಚಾರ ಏರ್ಪಡಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಕಾರ್ಪೋರೇಟರ್ ನಳಿನ ಇಂದ್ರಕುಮಾರ್ ತಿಳಿಸಿದ್ದಾರೆ.
ಈ ಒತ್ತುವರಿ ತೆರವಿಗೆ ಹಲವು ವರ್ಷಗಳಿಂದ ತೀವ್ರ ಪ್ರಯತ್ನ ನಡೆದಿತ್ತು. ಈ ಮಾರ್ಗವಾಗಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆಗೂ ಅಡ್ಡಿಯಾಗಿ, ವಿವಾದ ಉಂಟಾಗಿತ್ತು. ಆದರೆ ಪ್ರಸ್ತುತ ಸದರಿ ಒತ್ತುವರಿಯ ತೆರವು ಸಾಧ್ಯವಾಗಿದೆ