ಮಿಡಿಗೇಶಿ:
ಪಾವಗಡ-ಮಧುಗಿರಿ ರಾಜ್ಯ ಹೆದ್ದಾರಿ ಕೆಶಿಪ್ ರಸ್ತೆಯಲ್ಲಿ ಬೃಹದಾಕಾರದ ಕಲ್ಲಿನ ಡಿಮ್ಮಿಗಳನ್ನು ನಿರಂತರವಾಗಿ ಸಾಗಿಸಲಾಗುತ್ತಿದೆ .ಆಂಧ್ರದ ಮಡಕಶಿರಾ ತಾಲ್ಲೂಕಿನ ಉಕ್ಕಡರಂಗಾಪುರ ಹಾಗೂ ಅಮಿದಾಲಗುಂದಿ ಗ್ರಾಮದ ಬೆಟ್ಟ ಮತ್ತು ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಗೆ ಸೇರಿದ ಲಕ್ಷ್ಮೀಪುರ ಗೇಟ್ ಸಮೀಪದ ಗುಡ್ಡವೊಂದರಲ್ಲಿ ಈ ಬೃಹದಾಕಾರದ ಕಲ್ಲಿನ ದಿಮ್ಮಿಗಳನ್ನು ತೆಗೆದು ಸಾಗಾಟ ಮಾಡಲಾಗುತ್ತಿದೆ. ರೆಡ್ಡಿಹಳ್ಳಿ ಗ್ರಾ.ಪಂ.ಗೆ ಸೇರಿದ ಲಕ್ಷ್ಮೀಪುರ ಗೇಟ್ ಮೂಲಕ ಹಾದು ಹೋಗುವ ಆಂಧ್ರದ ರೊಳ್ಳೆ ಗ್ರಾಮದ ರಸ್ತೆಯ ಬಳಿ ಇರುವ ಗುಡ್ಡದಲ್ಲಿ ಬಗೆಯ ಲಾಗುತ್ತಿದೆ.
ಮಡಕಶಿರಾ ತಾಲ್ಲೂಕಿನ ಉಕ್ಕಡರಂಗಾಪುರದ ಕಲ್ಲಿನ ಗಣಿಯಲ್ಲಿನ ಕಲ್ಲು ದಿಮ್ಮಿಗಳು ಕ್ರಮೇಣ ಬರಿದಾಗುತ್ತಿವೆ. ಪ್ರತಿದಿನ ಹತ್ತಾರು ಲಾರಿಗಳಲ್ಲಿ ಇವುಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ತಾಲ್ಲೂಕಿನ ಗಡಿ ಗ್ರಾಮ ಚಂದ್ರಬಾವಿಯಿಂದ ಮಿಡಿಗೇಶಿ ರಸ್ತೆಯ ಮೂಲಕ ಇವುಗಳು ರಾತ್ರೋರಾತ್ರಿ ಸಾಗಣೆಯಾಗುತ್ತವೆ. ಬೆಳಗಿನ ಜಾವ 4 ರಿಂದ 5 ಗಂಟೆ ಸಮಯದಲ್ಲಿ ನಾಲ್ಕಾರು ಲಾರಿಗಳಲ್ಲಿ ಪಾವಗಡ ಕಡೆಯಿಂದ ಮಧುಗಿರಿ ಮಾರ್ಗವಾಗಿ ಇದರ ಜೊತೆ ಮರಳು ಸಾಗಾಟವೂ ನಡೆಯುತ್ತಿದೆ.
ಅಕ್ರಮವಾಗಿ ಕಲ್ಲು ದಿಮ್ಮಿಗಳನ್ನು ಸಾಗಿಸುತ್ತಿರುವುದು, ಮರಳನ್ನು ಸಾಗಿಸುತ್ತಿರುವ ಬಗ್ಗೆ ಇಲಾಖಾಧಿಕಾರಿಗಳಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಜನಪ್ರತಿನಿಧಿಗಳಿಂದ ಹಿಡಿದು ಪೊಲೀಸ್ ಇಲಾಖೆಯವರೆಗೆ ಈ ಬಗ್ಗೆ ಮಾಹಿತಿ ಇದೆ. ಆದರೆ ಸರ್ಕಾರಕ್ಕೆ ಬರಬೇಕಾದ ಹಣ ಮಾತ್ರ ಬರುತ್ತಿಲ್ಲ. ಕಳ್ಳ ಸಾಗಾಣಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಹಣ ಯಾರದೋ ಪಾಲಾಗುತ್ತಿದೆ. ಸರ್ಕಾರಕ್ಕೆ ಪಾವತಿಯಾಗಬೇಕಾಗಿರುವ ತೆರಿಗೆ ಹಣ ಸಂಗ್ರಹಿಸುವುದನ್ನು ಬಿಟ್ಟು ಅಧಿಕಾರಿ ವರ್ಗ ಮೌನವಾಗಿ ಕುಳಿತಿರುವುದಾದರೂ ಏಕೆ ಎಂಬ ಪ್ರಶ್ನೆ ಎದುರಾಗಿದೆ.
ಕೋಟ್ಯಂತರ ರೂಪಾಯಿ ರಾಜಧನ ಸರ್ಕಾರಕ್ಕೆ ಸಂಗ್ರಹವಾಗದೆ ಅಕ್ರಮವಾಗಿ ಕಲ್ಲುದಿಮ್ಮಿ ಮತ್ತು ಮರಳನ್ನು ಸಾಗಾಣಿಕೆ ಮಾಡುತ್ತಿರುವುದರಿಂದ ಕೆಲವರಿಗಷ್ಟೇ ಅನುಕೂಲ ಎನ್ನುವಂತಾಗಿದೆ. ಜೂ.16ರ ರಾತ್ರಿ ಕೆಲವು ಲಾರಿಗಳಲ್ಲಿ ಕಲ್ಲು ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ ಸಾರ್ವಜನಿಕರು ಅನೇಕರು ಕಂಡು ಮಾಹಿತಿ ನೀಡಿರುತ್ತಾರೆ. ಇವುಗಳಿಗೆ ಕಡಿವಾಣ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.