ಬೆಂಗಳೂರು
ಪ್ರಧಾನಿ ನರೇಂದ್ರಮೋದಿ ಅವರು ಉಗ್ರರನ್ನು ಸದೆ ಬಡಿಯಲು ಭಾರತೀಯ ಸೇನೆಗೆ ಸ್ಪಷ್ಟ ನಿರ್ದೇಶನ ನೀಡಿ ಎಲ್ಲಾ ರೀತಿಯ ಅಧಿಕಾರ ನೀಡಿರುವುದರಿಂದ ಉಗ್ರಗಾಮಿಗಳನ್ನು ಬೆಂಬಲಿಸುತ್ತಿರುವ ಪಾಕಿಸ್ತಾನ ಮುಂದೊಂದು ದಿನ ಏಕಾಂಗಿಯಾಗಲಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ಹೇಳಿದರು.
ನಗರದ ಯಶವಂತಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ನಮ್ಮ ದೇಶದ ಯೋಧರ ಒಂದು ತೊಟ್ಟು ರಕ್ತಕ್ಕೂ ಅಪಮಾನವಾಗದ ರೀತಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಗಡಿ ಕಾಯುವ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದ್ದು, ಸಂಪೂರ್ಣ ಅಧಿಕಾರವನ್ನೂ ನೀಡಲಾಗಿದೆ ಎಂದ ಅವರು, ಪಾಕಿಸ್ತಾನಕ್ಕೆ ಆರ್ಥಿಕ ದಿಗ್ಬಂಧನ ಹೇರಲಾಗುತ್ತಿದೆ. ಉಗ್ರಗಾಮಿಗಳನ್ನು ಬೆಂಬಲಿಸುವ ಪಾಕಿಸ್ತಾನವನ್ನು ಎಂದೂ ಭಾರತ ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಕಾಶ್ಮೀರ ದುರ್ಘಟನೆಯಲ್ಲಿ ಮೃತಪಟ್ಟ ಯೋಧರಿಗೆ ಆತ್ಮಶಾಂತಿ ಸಿಗಲೆಂದು ಒಂದು ನಿಮಿಷದ ಮೌನಾಚರಣೆ ಮಾಡಿ ಸಂತಾಪ ವ್ಯಕ್ತಪಡಿಸಲಾಯಿತು. ಇದಕ್ಕೂ ಮೊದಲು ಯಶವಂತಪುರ-ದೇವನಹಳ್ಳಿ ಡೇಮು ರೈಲು ಸೇವೆಯನ್ನು ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಲಾಗಿದೆ. ಆ ರೈಲಿಗೆ ಸಚಿವರು ಹಸಿರು ನಿಶಾನೆ ತೋರಿಸಿದರು.
ರೈಲ್ವೆ ನಿಲ್ದಾಣದಲ್ಲಿ ರಸ್ತೆ ಕೆಳ ಸೇತುವೆಗಳು, ಬೆಂಗಳೂರು ವಿಭಾಗದ 95 ನಿಲ್ದಾಣಗಳಲ್ಲಿ 99 ದಿವ್ಯಾಂಗರ ಶೌಚಾಲಯ ಮತ್ತು ಯಶವಂತಪುರ-ಬೆಂಗಳೂರು ರೈಲು ನಿಲ್ದಾಣಗಳಲ್ಲಿ 3 ಅಡಿ ಎತ್ತರದ ಧ್ವಜಗಳು, ಕೆಎಸ್ಆರ್ ಬೆಂಗಳೂರು ನಿಲ್ದಾಣ ಫ್ಲಾಟ್ ನಂ. 9-10 ರಿಂದ ಕೆಎಸ್ಆರ್ ಮೆಟ್ರೊ ನಿಲ್ದಾಣದವರೆಗೆ ಪಾದಚಾರಿ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
