ತುರುವೇಕೆರೆ:
ಪಟ್ಟಣ ಪಂಚಾಯ್ತಿ ವತಿಯಿಂದ ೨೯.೫೫ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ಖರೀದಿಸಿರುವ ಸಕ್ಕಿಂಗ್ ಯಂತ್ರದ ವಾಹನವನ್ನು ಟೇಪ್ ಕತ್ತರಿಸುವ ಮೂಲಕ ಶಾಸಕ ಎ.ಎಸ್.ಜಯರಾಮ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತುರುವೇಕೆರೆ ಪಟ್ಟಣದ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನೂತನ ಬಡಾವಣೆಗಳು ನಿರ್ಮಾಣವಾಗುತ್ತಿದೆ . ವರ್ಷವೊಂದಕ್ಕೆ ನೂರಾರು ಮನೆಗಳು ನಿರ್ಮಾಣಗೊಳ್ಳುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಪಟ್ಟಣದ ಸ್ವಚ್ಛತೆ, ಮೂಲಸೌಕರ್ಯದ ಬಗ್ಗೆ ವಿಶೇಷ ಗಮನಹರಿಸಲಾಗಿದೆ.
ಪ್ರತಿ ಮನೆಯಲ್ಲೂ ಶೌಚಗೃಹವಿರಬೇಕೆಂಬ ಕಾರಣಕ್ಕೆ ಪ್ರತಿ ವಾರ್ಡ್ನಲ್ಲೂ ಪರಿಶೀಲನೆ ನಡೆಸಲಾಗಿದೆ. ಶೌಚಗೃಹ ನಿರ್ಮಾಣವಾದರೆ ಸಾಲದು, ಮಲಮೂತ್ರ ವಿಸರ್ಜನೆಯ ನಂತರ ಸಾರ್ವಜನಿಕರಿಗೆ ಅಸಹ್ಯ ಹಾಗೂ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಪಟ್ಟಣದಿಂದ ಹೊರಸಾಗಿಸಲು ಸಕ್ಕಿಂಗ್ ಯಂತ್ರದ ಅವಶ್ಯತಕತೆಯನ್ನು ಮನಗಂಡು ಇಂದು ಸಾರ್ವಜನಿಕರ ಸದುಪಯೋಗಕ್ಕೆ ಒದಗಿಸಲಾಗಿದೆ ಎಂದರು.
ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಗೆ ಸೂಕ್ತ ರೀತಿಯಲ್ಲಿ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಒಳಚರಂಡಿ ಕಾಮಗಾರಿಗೆ ಸರ್ಕಾರದಿಂದ ಮಂಜೂರಾದ ಕೋಟ್ಯಾಂತರ ರೂ ಹಣ ಯಾವ ರೀತಿಯಲ್ಲಿ ವ್ಯಯವಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು. ಪಟ್ಟಣದ ನಾಗರೀಕರಿಗೆ ಒಳಚರಂಡಿ ವ್ಯವಸ್ಥೆಯನ್ನು ಶೀಘ್ರದಲ್ಲಿ ದೊರಕಿಸಲಾಗುವುದು. ಸ್ವಚ್ಛ ತುರುವೇಕೆರೆಯನ್ನಾಗಿ ಮಾಡಲು ಸಾರ್ವಜನಿಕರು ಸ್ಥಳೀಯ ಪಟ್ಟಣ ಪಂಚಾಯ್ತಿಯೊಂದಿಗೆ ಸಹಕರಿಸಬೇಕೆಂದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನರಸಿಂಹ, ಉಪಾಧ್ಯಕ್ಷೆ ತಬಸುಮ್ಸುಲ್ತಾನ, ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್, ಸದಸ್ಯರಾದ ಟಿ.ಎನ್.ಶಶಿಶೇಖರ್, ಟಿ.ವಿ.ಶ್ರೀನಿವಾಸಮೂರ್ತಿ, ಕೆ.ಟಿ.ಶಿವಶಂಕರ್, ನವ್ಯವಿಜಯಕುಮಾರ್, ನೇತ್ರಾವತಿರಂಗಸ್ವಾಮಿ, ಕೃಷ್ಣಮೂರ್ತಿ, ರುದ್ರೇಶ್, ಮುಖ್ಯಾಧಿಕಾರಿ ಮಂಜುಳಾದೇವಿ, ಪಪಂ ಅಧಿಕಾರಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
